ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ದಾರ್ ವಲ್ಲಬಾಯಿ ಪಟೇಲ್ರವರ #Sardarvallabai Patel 150ನೇ ಜನ್ಮದಿನಾಚರಣೆಯ ಅಂಗವಾಗಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಮೇರಾ ಯುವ ಭಾರತ್, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನ.20 ಮತ್ತು 21ರಂದು ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ಏಕತಾ ನಡಿಗೆ (ರೂಟ್ಮಾರ್ಚ್)ನ್ನು ಆಯೋಜಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ದಾರ್ ವಲ್ಲಬಾಯಿ ಪಟೇಲ್ರವರು ಅಖಂಡ ಭಾರತದ ಕನಸ್ಸನ್ನು ಕಂಡವರು. ಭಾರತದ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ಅವರು ವಹಿಸಿದ್ದಾರೆ. ಈ ದೇಶ ಕಂಡ ಅಪ್ರತಿಮ ದೇಶಭಕ್ತರು, ಉಪಪ್ರಧಾನಿಯೂ ಆಗಿದ್ದವರು. ಅವರ 150ನೇ ಜನ್ಮದಿನಾಚರಣೆಯನ್ನು ಸರ್ಕಾರ ದೇಶದಾದ್ಯಂತ ಒಂದು ಅಭಿಯಾನದ ರೀತಿಯಲ್ಲಿ ಆಚರಿಸಲು ಸಿದ್ದತೆ ನಡೆಸಿದೆ ಎಂದರು.
ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನ.20 ಮತ್ತು 21ರಂದು ಏಕತಾ ನಡಿಗೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಮೈಭಾರತ್ ಸ್ವಯಂ ಸೇವಕರು, ಎನ್ಎಸ್ಎಸ್ ಸ್ವಯಂ ಸೇವಕರು, ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಕ್ರೀಡಾಪಟುಗಳು,ನಿವೃತ್ತ ಅಧಿಕಾರಿಗಳು ಭಾಗವಹಿಸುತ್ತಾರೆ ಎಂದರು.
ನ.20ರಂದು ತೀರ್ಥಹಳ್ಳಿಯಲ್ಲಿ ಬೆಳಿಗ್ಗೆ 9ಕ್ಕೆ ಏಕತಾ ನಡಿಗೆಗೆ ಚಾಲನೆ ನೀಡಲಾಗುವುದು. ಶಾಸಕ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ತೀರ್ಥಹಳ್ಳಿ ತಾಲ್ಲೂಕು ಬಾಳೆ ಬಯಲು ವೃತ್ತದಿಂದ ಕುಶಾವತಿ ಪಾರ್ಕ್ವರೆಗೆ ಏಕತಾ ನಡಿಗೆ ನಡೆಯಲಿದೆ. ಹಾಗೆಯೇ ನ.21ರಂದು ಬೆಳಿಗ್ಗೆ 9ಕ್ಕೆ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ರೂಟ್ಮಾರ್ಚಿಗೆ ಚಾಲನೆ ನೀಡಲಾಗುವುದು. ಸೈನ್ಸ್ ಮೈದಾನದಿಂದ ನೆಹರೂ ರಸ್ತೆ, ಗೋಪಿ ಸರ್ಕಲ್ ದುರ್ಗಿಗುಡಿ ಮೂಲಕ ಫ್ರೀಡಂ ಪಾರ್ಕ್ವರೆಗೆ ಏಕತಾ ನಡಿಗೆ ನಡೆಯಲಿದ್ದು, ಇದರಲ್ಲಿ ವಿವಿಧ ಕಲಾ ತಂಡದವರು ಡೊಳ್ಳು ಕುಣಿತದವರು ಭಾಗವಹಿಸಲಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಯುವಕರು ಇದರಲ್ಲಿ ಪಾಲ್ಗೊಳ್ಳುವರು. ಎಲ್ಲರಿಗೂ ಟಿ ಶರ್ಟ್ ನೀಡಲಾಗುವುದು.ನಡಿಗೆ ಮುಗಿದ ನಂತರ ಉಪಹಾರದ ವ್ಯವಸ್ಥೆ ಕೂಡ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಎಸ್.ಎನ್.ಚನ್ನಬಸಪ್ಪ, ಅರಗಜ್ಞಾನೇಂದ್ರ, ಡಾ.ಧನಂಜಯಸರ್ಜಿ, ಎಡಿಸಿ ಅಭಿಷೇಕ್, ಅಧಿಕಾರಿಗಳಾದ ಸ್ನೇಹಲತಾ, ಕುವೆಂಪು ವಿವಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಶುಭಮರವಂತೆ, ಸಲಹಾ ಸಮಿತಿ ಸದಸ್ಯೆ ದಿವ್ಯಾ ವಿ.ಪಿ. ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















