ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೆರೆದ ತಂತ್ರಾಂಶದ ಮೂಲಕ ಎಂಥಹ ಉನ್ನತ ಅಧ್ಯಯನವನ್ನು ಪಡೆಯಬಹುದಾದ ಈ ಹೊತ್ತಿನಲಿ, ನಾವು ನೀಡುತ್ತಿರುವ ಶಿಕ್ಷಣದ ಸಮಗ್ರ ದೃಷ್ಟಿಕೋನ ಬದಲಾಗಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಬಿ.ಇ.ರಂಗಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ಎಂಬಿಎ, ಎಂಸಿಎ ಮತ್ತು ಎಂಟೆಕ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಿಗ್ ಡೇಟಾ ಅನಾಲಿಸಿಸ್, ಕೃತಕ ಬುದ್ಧಿಮತ್ತೆ ಯಂತಹ ತಂತ್ರಜ್ಞಾನಗಳು ಪ್ರಪಂಚವನ್ನು ಆಳಲಿದೆ. ಆಧುನಿಕ ಆವಿಷ್ಕಾರಗಳ ಮೂಲಕ ಭಾರತ ಉದ್ಯೋಗ ಆಧಾರಿತ ಬೆಳವಣಿಗೆಯಲ್ಲಿ ಮುನ್ನಡೆಯಬಹುದು. ಯುವ ಸಮೂಹದಿಂದ ಹೊರಹೊಮ್ಮುವ ನಾವೀನ್ಯಯುತ ಚಿಂತನೆಗಳು ಅದ್ಭುತ ಬದಲಾವಣೆಗಳನ್ನು ಮಾಡಲಿದೆ.

ನಾವೀನ್ಯತೆ ಮೂಲಕ ಸವಾಲುಗಳನ್ನು ಎದುರಿಸುವ ಕೌಶಲ್ಯತೆ, ಭಾವನಾತ್ಮಕ ಬುದ್ಧಿವಂತಿಕೆಯಂತಹ ಸೂಕ್ಷ್ಮತೆಗಳನ್ನು ಅಳವಡಿಸಿಕೊಳ್ಳಿ. ಅವಕಾಶಗಳ ಬಾಗಿಲುಗಳನ್ನು ತಟ್ಟದೆ, ಬದುಕಿನ ಉನ್ನತಿಕರಣಕ್ಕಾಗಿ ನಿಮ್ಮದೆ ಹೊಸ ಮಾರ್ಗಗಳನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ವಿದ್ಯಾವಂತರಾಗಿ ತಂದೆ ತಾಯಿಯ ಋಣ ತೀರಿಸುವ ಕಾರ್ಯವನ್ನು ಮರೆಯಬಾರದು. ಹಾಗೆಯೇ ಈ ನಾಡಿನ, ದೇಶದ, ಸಮಾಜದ ಋಣವನ್ನು ತೀರಿಸುವ ಕಾರ್ಯವನ್ನು ಮಾಡಬೇಕು. ಆತ್ಮ ಸ್ಥೈರ್ಯ ಯಾವ ಶಕ್ತಿಯನ್ನು ಬೇಕಾದರೂ ಸೋಲಿಸಬಹುದು. ಅದಕ್ಕಾಗಿ ದೃಷ್ಟಿ ಸರಿಯಿದ್ದರೆ ಮಾತ್ರ ಸೃಷ್ಟಿ ಸರಿ ಇರುತ್ತದೆ. ಭರವಸೆ ಹುಟ್ಟಿಸುವಂತ ದೇಶದ ಪ್ರಜೆಗಳಾಗಿ ಬಾಳಿ ಎಂದು ಆಶಿಸಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ದೇಶದ ಸುಭದ್ರತೆಗಾಗಿ ಶಿಕ್ಷಣದ ಮಹತ್ವ ಅರಿತ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗರರು ಸ್ಥಾಪಿಸಿದ ಎನ್ಇಎಸ್ ಸಂಸ್ಥೆಯು ಉತ್ಕೃಷ್ಟ ಶಿಕ್ಷಣ ನೀಡುತ್ತಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂಬಿಎ ಮುಖ್ಯಸ್ಥ ಡಾ.ಶ್ರೀಕಾಂತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್, ಎಂಸಿಎ ವಿಭಾಗದ ಮುಖ್ಯಸ್ಥ ಡಾ.ಹೇಮಂತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿಟಿಯು ರ್ಯಾಂಕ್ ವಿಜೇತ ಎಂಬಿಎ ವಿದ್ಯಾರ್ಥಿಗಳಾದ ಮೇಘ.ಪಿ ಹಾಗೂ ಅಮೃತ ಶ್ರೀಕಾಂತ್, ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಅಲಿಯಾ ವಾಸಿಂ ಮತ್ತು ಸ್ನೇಹ.ಎಸ್ ಅವರನ್ನು ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post