ಮಲೆನಾಡು ಮುದ್ರಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆ.20ರ ಬೆಳಿಗ್ಗೆ 10ರಿಂದ 1-30ರವರೆಗೆ ಜಿಲ್ಲಾ ವಾಣಿಜ್ಯ ಮತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮುದ್ರಣ ಕ್ಷೇತ್ರದ ಇಂದಿನ ಸವಾಲುಗಳು-ಪರಿಹಾರ ವಿಷಯ ಕುರಿತು ತಜ್ಞರಿಂದ ಚರ್ಚೆ, ಮುದ್ರಕರೊಡನೆ ಸಂವಾದ ಹಾಗೂ ಸಮನ್ವಯ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ. ಮಾಧವಾಚಾರ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡು ಮುದ್ರಕರ ಸಂಘವು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದ್ದು, ಮುದ್ರಕರಿಗೆ ಪೂರಕ ಅನುಕೂಲ ವಾತಾವರಣ ಕಲ್ಪಿಸುತ್ತಿವೆ. ಸುಮಾರು 250ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡಿದೆ ಎಂದ ಅವರು, ಮುದ್ರಕರೊಡನೆ ಸಂವಾದ ವನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದು, ನಂತರ ರಾಜ್ಯದ ಇನ್ನಿತರ ಕಡೆ ಏರ್ಪಡಿಸಲಾಗುವುದು ಎಂದರು.
ಸಂವಾದದಲ್ಲಿ ಮುದ್ರಣ ಕ್ಷೇತ್ರದ ಸವಾಲು ಮತ್ತ ಪರಿಹಾರ, ಆಧುನಿಕ ತಂತ್ರಜ್ಞಾನ ಅಳವಡಿಕೆ, ಜಿಲ್ಲಾ ಮಟ್ಟದಲ್ಲಿ ಮುದ್ರಣ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸುವ ಬಗ್ಗೆ ವಿಚಾರ ವಿನಿಮಯ, ರಾಜ್ಯ ಸಂಘದಿಂದ ನಿರೀಕ್ಷಿಸುವ ಸವಾಲುಗಳು ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸಂವಾದವು ಮುದ್ರಣ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ನಡೆಯಲಿದ್ದು, ಮುದ್ರಕರು ತಮ್ಮ ಅಮೂಲ್ಯವಾದ ಪ್ರಶ್ನೆ, ಪರಿಹಾರ, ಮಾರ್ಗೋಪಾಯ, ಸಮಸ್ಯೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಉತ್ತಮ ಸಲಹೆಗಳನ್ನು ನೀಡುವ ಐವರು ಮುದ್ರಕರಿಗೆ ಬಹುಮಾನ ನೀಡಲಾಗುವುದು ಎಂದರು.
ಜಿಲ್ಲಾ ವಾಣಿಜ್ಯ ವತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಉದ್ಘಾಟಿಸಲಿದ್ದು, ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಪ್ರಿಂಟಿಂಗ್ ಪಾರ್ಕ್ ಕ್ಲಸ್ಟರ್ನ ಅಧ್ಯಕ್ಷ ಸಿ.ಆರ್.ಜನಾರ್ಧನ್, ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್. ಅಶೋಕ್ಕುಮಾರ್, ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ಸಂಚಾಲಕ ಎಂ. ಮಹೇಶ್ಕುಮಾರ್, ದಾವಣಗೆರೆ ಡಿವಿಜನ್ ಸಂಚಾಲನಾ ಸಮಿತಿ ಉಪಾಧ್ಯಕ್ಷ ಎ.ಎಂ. ಪ್ರಕಾಶ್ ವಿಷಯತಜ್ಞರಾಗಿ ಭಾಗವಹಿಸಲಿದ್ದಾರೆ ಎಂದರು.
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ವಿಜಯನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಮುದ್ರಕರು ಸಂವಾದದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಲು ಕೋರಿದ ಅವರು, ಸುಮಾರು 100ಕ್ಕೂ ಹೆಚ್ಚು ಮುದ್ರಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಂಘದ ಕಾರ್ಯದರ್ಶಿ ಗಣೇಶ್ಬಿಳಗಿ ಮಾತನಾಡಿ, ಪ್ರಬಲ ಪೈಪೋಟಿ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆ, ಮುದ್ರಣ ಸಾಮಗ್ರಿ ಹಾಗೂ ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೊರತೆಯಿಂದಾಗಿ ಸಣ್ಣ ಸಣ್ಣ ಮುದ್ರಣಾಲಯಗಳು ಮುಚ್ಚುವ ಹಂತ ತಲುಪಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದರು.
Discussion about this post