ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹತ್ತು ವರ್ಷಗಳಿಂದ ಸತತವಾಗಿ ನೃತ್ಯಾರಾಧನೆ ಹಾಗೂ ಹಿಂದುಳಿದ ಬಡಾವಣೆಯ ಮಕ್ಕಳ ನೃತ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಸಹಚೇತನ ನಾಟ್ಯಾಲಯ ಈ ಬಾರಿ ಸುಮಾರು ೬೦ ಕ್ಕೂ ಹೆಚ್ಚು ಹಿಂದುಳಿದ ಹಾಗೂ ಆಯ್ದ ಸರ್ಕಾರಿ ಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆಗಳಿಗೆ ನೃತ್ಯ ಕಲಿಸಿ ಪ್ರದರ್ಶನ ಏರ್ಪಡಿಸಿದೆ.
ಮಾರ್ಚ್ 14ರ ಭಾನುವಾರ ಸಂಜೆ ೫:೩೦ಕ್ಕೆ ನಗರದ ಕರ್ನಾಟಕ ಸಂಘದಲ್ಲಿ ಭಾರತೀಯಂ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪರಿಮಿತ ಸೇವೆ ಗೈದು ಎಲೆಮರೆಕಾಯಿಯಂತೆ ಸೇವಾ ಚಟುವಟಿಕೆಯನ್ನು ತಮ್ಮ ಇಳಿ ವಯಸ್ಸಿನಲ್ಲೂ ಮುಂದುವರೆಸುತ್ತಿರುವ ಧೀಮಂತ ವ್ಯಕ್ತಿ ಎಸ್.ಕೆ. ಶೇಷಾಚಲ, ಪರಿಸರಪ್ರೇಮಿಯಾಗಿ ಸದ್ದಿಲ್ಲದೆ ತಮ್ಮ ಸ್ವಂತ ಜಾಗವನ್ನೇ ಕಾಡಾಗಿ ಪರಿವರ್ತಿಸಿ ಪರಿಸರಸೇವೆ ಗೈಯುತ್ತಿರುವ ಎಂ.ವಿ. ನಾಗೇಶ್, ಹಾಗೂ ಪರೋಪಕಾರಂ ಹೆಸರಿನಡಿ ಸತತ ಐದು ವರ್ಷಗಳಿಂದ ಪರಿಸರ ಜಾಗೃತಿ ಕಾರ್ಯಗಳನ್ನು ಮಾಡುತ್ತಿರುವ ಸಂಸ್ಥೆಗೆ ಅಜಿತಶ್ರೀ ಪುರಸ್ಕಾರ್ ನೀಡಿ ಗೌರವಿಸಲಾಗುತ್ತಿದೆ.
ಈಗಾಗಲೇ 17 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದು, ತಮ್ಮ ಕ್ಷೇತ್ರದಲ್ಲಿ ಸೇವೆಯನ್ನು ನಿರಂತರವಾಗಿ ಮುಂದುವರೆಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎಸ್. ಅರುಣ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತೂರು ವಿಭಾಗ ಪ್ರಚಾರ ಪ್ರಮುಖ್ ಮಧುಕರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಹಚೇತನ ನಾಟ್ಯಾಲಯ ಗೌರವಾಧ್ಯಕ್ಷ್ಷ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜೀವಗಾಂಧಿ ಬಡಾವಣೆ, ಬಾಪೂಜಿ ನಗರ ಬಡಾವಣೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ, ಗುರುಪುರ ಬಡಾವಣೆಯ ಮಕ್ಕಳು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಸ, ಮಾಧವ ನೆಲೆ ಒಳಗೊಂಡಂತೆ ೬೦ಕ್ಕೂ ಹೆಚ್ಚು ಮಕ್ಕಳು ದೇಶಭಕ್ತಿಗೀತೆಗಳಿಗೆ ಹೆಜ್ಜೆ ಹಾಕಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸಹಚೇತನ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ (ಚನ್ನಿ) ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post