ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ದಸರಾ ಚಲನಚಿತ್ರೋತ್ಸವ ಅ.8ರ ನಾಳೆಯಿಂದ ಆರಂಭವಾಗಲಿದೆ.
ನಾಳೆ ಬೆಳಿಗ್ಗೆ 9.30ಕ್ಕೆ ನಗರದ ಹೆಚ್ಪಿಸಿ ಚಿತ್ರಮಂದಿರದಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ದೇಶಕ, ಸಂಗೀತ ನಿರ್ದೇಶಕ, ನಟ ವಿ. ಮನೋಹರ್ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಗೀತ ನಿರ್ದೇಶಕ, ಗಾಯಕ, ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್, ಹಿರಿತೆರೆ-ಕಿರುತೆರೆ ಕಲಾವಿದರಾದ ವೀಣಾ ಸುಂದರ್, ಸುಂದರ್, ಶಿವಮೊಗ್ಗ ರಾಮಣ್ಣ ಆಗಮಿಸಲಿದ್ದಾರೆ.

ಉದ್ಘಾಟನೆಯ ನಂತರ ಚಿತ್ರೋತ್ಸವದ ಮೊದಲ ಚಿತ್ರವಾಗಿ ವಾಸುಕಿ ವೈಭವ್ ಸಂಗೀತ ನಿರ್ದೇಶನದ ರಾಮ ರಾಮ ರೇ ಪ್ರದರ್ಶನಗೊಳ್ಳಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಯುಕ್ತರಾದ ಚಿದಾನಂದ ವಠಾರೆ, ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಶಂಕರ ನಾಯ್ಕ, ಸಮಿತಿ ಸದಸ್ಯರಾದ ಯು. ಹೆಚ್. ವಿಶ್ವನಾಥ್, ಆರ್.ಸಿ. ನಾಯ್ಕ, ಲತಾ ಗಣೇಶ್, ಶಬಾನಾ ಖಾನಂ, ಶಿವಮೊಗ್ಗ ಬೆಳ್ಳಿ ಮಂಡಲದ ಕಾರ್ಯಾಧ್ಯಕ್ಷ ಡಿ. ಎಸ್. ಅರುಣ್, ಸಂಚಾಲಕ ವೈದ್ಯ, ಹಿರಿಯ ವಾರ್ತಾಧಿಕಾರಿ ಶಫಿ ಸಾದುದ್ದೀನ್, ಆಡಳಿತ ಪಕ್ಷದ ನಾಯಕ ಎಸ್. ಎನ್. ಚನ್ನಬಸಪ್ಪ, ವಿಪಕ್ಷ ನಾಯಕಿ ಯಮುನಾ ರಂಗೇ ಗೌಡ ಉಪಸ್ಥಿತರಿರಲಿದ್ದಾರೆ.


ಪ್ರದರ್ಶಿಸಲ್ಪಡುವ ಚಿತ್ರಗಳು:
ಏಳು ದಿನಗಳ ಕಾಲ ನಡೆಯುವ ಈ ಚಿತ್ರೋತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಅ. 9ರಂದು ಹೆಚ್ಪಿಸಿ ಚಿತ್ರಮಂದಿರದಲ್ಲಿ ಯುವರತ್ನ, 10, ಹೆಚ್ಪಿಸಿ ಚಿತ್ರಮಂದಿರದಲ್ಲಿ ಪ್ರೀಮಿಯರ ಪದ್ಮಿನಿ, 11ರಂದು ಹೆಚ್ಪಿಸಿ ಚಿತ್ರಮಂದಿರದಲ್ಲಿ ಹೆಬೆಟ್ ರಾಮಕ್ಕ, 12ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 13ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ರಾಜಕುಮಾರ ಹಾಗೂ 14ರಂದು ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಕೃಷ್ಣ ಟಾಕೀಸ್ ಪ್ರದರ್ಶನಗೊಳ್ಳಲಿದೆ. ಚಲನಚಿತ್ರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















