ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಾಯಿ ಮತ್ತು ಹಲ್ಲಿನ ಶುಚಿತ್ವ ಕಾಪಾಡಿಕೊಂಡರೆ ಕಾಯಿಲೆಯಿಂದ ದೂರವಿರಬಹುದು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿದೇರ್ಶಕರಾದ ಡಾ. ಲತಾ ನಾಗೇಂದ್ರ ತಿಳಿಸಿದರು.
ನ್ಯಾಷನಲ್ ಮೆಡಿಕೊಸ್ ಆರ್ಗನೈಜೇಷನ್ ಹಾಗೂ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದಲ್ಲ್ಲಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆಯ ಅಂಗವಾಗಿ ದಂತ ಆರೋಗ್ಯ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದಿಂದಲ್ಲೇ ಮಕ್ಕಳಿಗೆ ಹಲ್ಲುಗಳ ಮಹತ್ವ ತಿಳಿಸಿಬೇಕು. ಪ್ರತಿ ನಿತ್ಯ ಹಲ್ಲು ಉಜ್ಜುವ ಶೈಲಿಯನ್ನು ರೂಢಿ ಮಾಡಿಸಬೇಕು. ಪ್ರಾರಂಭದಲ್ಲಿಯೇ ಸಮಸ್ಯೆ ಗುರುತಿಸಿ ಚಿಕಿತ್ಸೆ ನೀಡಿದರೆ ಹಲ್ಲುಗಳನ್ನು ಕೀಳುವ ಪ್ರಮೇಯ ಬರುವುದಿಲ್ಲ. ಬಾಯಿಯ ಆರೋಗ್ಯವು ಸಹ ನಮ್ಮ ಇತರ ಅಂಗಗಳ ಆರೋಗ್ಯದಷ್ಟೇ ಮುಖ್ಯವಾಗಿದೆ ಎಂದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿದೇರ್ಶಕಿ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ಒಂದು ವೇಳೆ ಬಾಯಿಯ ಆರೋಗ್ಯ ಅಸ್ಥವ್ಯಸ್ಥವಾದಲ್ಲಿ ಸಾಮಾನ್ಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯರೋಗ, ಪಾರ್ಶ್ವವಾಯು, ಮಧುಮೇಹ ಮತ್ತು ಉಸಿರಾಟದ ತೊಂದರೆಗಳಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದವರು ಬಾಯಿ ಮತ್ತು ಹಲ್ಲಿನ ಶುಚಿತ್ವ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಜನಸಾಮಾನ್ಯರಿಗೆ ಬಾಯಿ ಮತ್ತು ಹಲ್ಲಿನ ಕುರಿತು ಸೂಕ್ತವಾದ ಜಾಗೃತಿ ಹಾಗೂ ಶಿಕ್ಷಣದ ಅವಶ್ಯಕತೆ ಎಂದು ತಿಳಿಸಿದರು.
ದಂತ ವಿದ್ಯಾರ್ಥಿಗಳು ಪ್ರತ್ಯಕ್ಷಿಕೆಗಳ ಮೂಲಕ ಜನಸಾಮಾನ್ಯರಿಗೆ ದಂತ ಆರೋಗ್ಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಜಾಗೃತಿ ಕಾರ್ಯಕ್ರಮದ ಜೊತೆಗೆ ದಂತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಎಮ್ ಕಟ್ಟಿ, ಡಾ.ಬಿ.ಎಸ್ ಸುರೇಶ್, ಡಾ.ಮಿಥುನ್, ಶೈಕ್ಷಣಿಕ ನಿದೇರ್ಶಕರಾದ ಡಾ.ಆರ್.ಪಿ ಪೈ, ಡಾ.ಧರ್ಮಶ್ರೀ ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















