ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂವಿಧಾನವಿಲ್ಲದ ದೇಶವೆಂದರೆ ರುಂಡವಿಲ್ಲದ ದೇಹದಂತೆ, ಆತ್ಮವಿಲ್ಲದ ಶರೀರದಂತೆ. ನಮ್ಮೆಲ್ಲರ ಮೂಲಭೂತ ಹಕ್ಕನ್ನು ಶಾಂತಿ, ಸುವ್ಯವಸ್ಥೆ , ನಾಗರೀಕ ಬದುಕನ್ನು ಎತ್ತಿ ಹಿಡಿಯುವ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪ್ರಸನ್ನ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್.ಎಸ್.ಎಸ್. ಘಟಕವು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದ ಎಲ್ಲಾ ಭಾಷೆಗಳ ಸಂವಿಧಾನಕ್ಕೆ ಹೋಲಿಸಿದರೆ ಭಾರತದ ಸಂವಿಧಾನ ಬೃಹತ್ ಸಂವಿಧಾನವಾಗಿದೆ. ವೈವಿಧ್ಯಮಯ ಭಾಷೆ, ಧರ್ಮ, ಸಂಸ್ಕೃತಿಗಳ ತವರುಮನೆಯಾದ ಭಾರತದಂತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಈ ದೇಶಕ್ಕೆ ಸಂವಿಧಾನ ರಚಿಸುವುದು ಸಾಮಾನ್ಯವಾದ ಮಾತಾಗಿರಲಿಲ್ಲ. ಪ್ರಪಂಚದ ಎಲ್ಲಾ ಭಾಷೆಗಳ ಸಂವಿಧಾನಗಳ ಜ್ಞಾನದೊಂದಿದೆ, ಸಾಕಷ್ಟು ಪರಿಶ್ರಮ, ತಾಳ್ಮೆ, ಸಂಯಮದ ಮೂಲಕ ಈ ದೇಶಕ್ಕೆ ಸೂಕ್ತ ಸಂವಿಧಾನ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಪಾರ ಶ್ರಮವಹಿಸಿದ್ದಾರೆ ಎಂದರು.
ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಕುಂದನ್ ಬಸವರಾಜ ಮಾತನಾಡಿ, ಸಂವಿಧಾನಕ್ಕೆ ಪ್ರತಿಯೊಬ್ಬರೂ ತಲೆ ಬಾಗಲೇಬೇಕು. ಯಾವುದೇ ಜಾತಿ, ಲಿಂಗ, ಧರ್ಮ ಭೇದವಿಲ್ಲದ , ಬಡವ ಶ್ರೀಮಂತ ಎಂಬ ಅಂತರವಿಲ್ಲದ ಸರ್ವ ಸಮಾನತೆಯ ಆಶಯವನ್ನು ಪ್ರತಿಪಾದಿಸುವ ನಮ್ಮ ಸಂವಿಧಾನಕ್ಕೆ ಬದ್ಧರಾಗಿರುವುದು ನಮ್ಮ ಹೊಣೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಕೆ. ವೀಣಾ ಮಾತನಾಡಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೆ ಭಾರತದ ಸಂವಿಧಾನ. ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ನಮ್ಮದು. ನಮ್ಮ ಪ್ರಜಾ ತಾಂತ್ರಿಕ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಸಂವಿಧಾನದ ಆಶಯಗಳನ್ನು ನಾವು ಗೌರವಿಸಬೇಕಾಗುತ್ತದೆ. ಈ ದೇಶದಲ್ಲಿ ಬದುಕುವ ಪ್ರತಿಯೊಬ್ಬ ಪ್ರಜೆಗೂ ಇರುವ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಅರಿವಿರಬೇಕು. ನಾವೂ ಬದುಕುವುದರೊಂದಿಗೆ ಇತರರಿಗೂ ಬದುಕುವ ಸ್ವಾತಂತ್ರ್ಯವಿದೆ ಎನ್ನುದವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸ್ತ್ರೀ ಪುರುಷ ಎಂಬ ಯಾವ ಭೇದ ಭಾವವಿಲ್ಲದೆ ಸರ್ವರಿಗೂ ಸಮಾನ ಅವಕಾಶವಿದೆ. ಸಮಾನ ಹಕ್ಕು, ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಭಾರತದ ಸಂವಿಧಾನ ಸರ್ವಮಾನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಚಾರ್ಯರು ಪ್ರತಿಜ್ಙಾವಿಧಿ ಬೋಧಿಸಿದರು. ಪ್ರಾಧ್ಯಾಪಕರಾದ ಡಾ. ಸರಳಾ ಕೆ.ಎಸ್., ಡಾ. ಶಿವಮೂರ್ತಿ ಎ., ಡಾ. ಕೆ.ವಿ.ಗಿರಿಧರ್, ಡಾ. ವೀರಶೆಟ್ಟಿ ಜಿ.ರಾಥೋಡ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ. ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕು. ನಯನ ಪ್ರಾರ್ಥಸಿ, ಕು. ವಿಜಯಲಕ್ಷ್ಮೀ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post