ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬರೂ ಶಾಂತಿ, ಸಹಬಾಳ್ವೆಯಿಂದ ಜೀವಿಸಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಾಫ ಹುಸೇನ್ ಹೇಳಿದರು.
ನಾಡಿನ ಹಲವು ಚಿಂತಕರು, ಸಮಾನ ಮನಸ್ಕರು, ಸ್ವಾಮೀಜಿಗಳು, ಸುಪ್ರೀಂಕೋರ್ಟ್ ನ್ಯಾಯಧೀಶರು, ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳು ಹಮ್ಮಿಕೊಂಡಿದ್ದ ನಮ್ಮ ನಡಿಗೆ ಶಾಂತಿ ಕಡೆಗೆ ಶಾಂತಿ ನಡಿಗೆಯ ಸಂದೇಶವನ್ನು ಬಿತ್ತರಿಸುವ ವಾಹನಕ್ಕೆ ಗುರುವಾರ ನಗರದ ಮಹಾತ್ಮ ಗಾಂಧಿ ಪಾರ್ಕ್’ನಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಅವರು ಮಾಲಾರ್ಪಣೆ ಮಾಡಿ ಮಾತನಾಡಿ, ಸಣ್ಣ ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಸಲ್ಲದು, ಎಲ್ಲರ ಪರಸ್ಪರ ಸಾಮರಸ್ಯದಿಂದ ಮುನ್ನಡೆಯಬೇಕಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಮಾತನಾಡಿ, ನಾವೆಲ್ಲಾ ನಾಗರಿಕ ಸಮಾಜದಲ್ಲಿ ಜೀವಿಸುತ್ತಿದ್ದು, ಶಾಂತಿಯುತವಾಗಿ ಮುನ್ನಡೆಯಬೇಕಿದೆ. ಕುವೆಂಪು ಹುಟ್ಟಿದ ಊರಲ್ಲಿ ಸದಾ ನೆಮ್ಮದಿ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಶಾಂತಿ ನಡಿಗೆಯಲ್ಲಿ ಎಲ್ಲರೂ ಭಾಗವಹಿಸೋಣ ಎಂದರು.
ಜಿಲ್ಲಾಣಾಧಿಕಾರಿ ಲಕ್ಷ್ಮಿ ಪ್ರಸಾದ್ ಮಾತನಾಡಿ, ಯುವ ಜನರಿಗೆ ಮಾರ್ಗದರ್ಶನ ಮಾಡುವ ಸರಿ ದಾರಿಗೆ ಕರೆದೊಯ್ಯುವ ಕೆಲಸವಾಗಬೇಕಿದೆ. ಈ ನಿಮ್ಮ ಸಮಾಜದ ಸಹಕಾರ ಅಗತ್ಯ ಪ್ರತಿಯೊಬ್ಬರೂ ಶಾಂತಿ ನಡಿಗೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭ ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಕಿರಣ್ ಕುಮಾರ್, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಎಚ್.ಆರ. ಬಸವರಾಜಪ್ಪ, ವಕೀಲರಾದ ಕೆ.ಪಿ. ಶ್ರೀಪಾಲ್ ಮತ್ತಿತರರು ಹಾಜರಿದ್ದರು. ಡಾ. ಭರತ್ ಶಾಂತಿ ಸಂದೇಶ ಸಾರುವ ಪ್ಲೆಕಾರ್ಡ್’ಗಳನ್ನು ಬಿಡುಗಡೆ ಮಾಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















