ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಏ.27ರಂದು ಶಿವಮೊಗ್ಗಕ್ಕೆ ಬರಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿಯವರು ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವ ಪ್ರಿಯಾಂಕ ಗಾಂಧಿಯವರು ಹೆಲಿಕಾಪ್ಟರ್ ಮೂಲಕ ವಿಮಾನ ನಿಲ್ದಾಣ ಸೇರಲಿದ್ದಾರೆ. ಈ ಇಬ್ಬರೂ ಮಧ್ಯಾಹ್ನ ಸುಮಾರು 12-40ರ ಸಮಯಕ್ಕೆ ಬರಬಹುದು ಇಲ್ಲಿ ಸುಮಾರು 45 ನಿಮಿಷ ಇರುತ್ತಾರೆ. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಉಡುಪಿ ಜಿಲ್ಲೆ ಕಾಪುಗೆ ತೆರಳುವರು ಎಂದರು.
ಅವರು ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಆದರೆ ಸ್ಥಳದ ಬಗ್ಗೆ ಇನ್ನೂ ಖಚಿತವಾಗಿ ತಿಳಿದಿಲ್ಲ ಇದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ಅಧಿಕೃತವಾಗಿ ಅನುಮತಿ ನೀಡಿದ ನಂತರ ಸ್ಥಳದ ಬಗ್ಗೆ ಮಾಹಿತಿ ನೀಡಲಾಗುವುದು ಭದ್ರತೆ ದೃಷ್ಟಿಯಿಂದ ಕಾರ್ಯಕರ್ತರಿಗೆ ಇವರನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ. ಪಕ್ಷದ ಮುಖಂಡರು ಜೊತೆಗೆ ಇರುತ್ತಾರೆ. ಜೊತೆಗೆ ಪತ್ರಕರ್ತರನ್ನು ಆಹ್ವಾನಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಕಾಂಗ್ರೆಸ್ ಪರ ಇಡೀ ಜಿಲ್ಲೆಯಲ್ಲಿ ಪೂರಕವಾದ ವಾತಾವರಣವಿದೆ. ಬಿಜೆಪಿಯ ವಿರುದ್ಧದ ಗಾಳಿ ಬೀಸುತ್ತಿದೆ. ಎಲ್ಲಾ ಏಳೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಪಕ್ಷ ಬಿಟ್ಟು ಹೋದವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷಾಂತರ ಎನ್ನುವುದು ರಾಜಕಾರಣದ ಒಂದು ಭಾಗವಾಗಿದೆ. ಬಿಜೆಪಿಯಿಂದ ಕಾಂಗ್ರೆಸ್ಸಿಗೂ ಹಲವರು ಬಂದಿದ್ದಾರೆ. ಇದರಿಂದ ಪಕ್ಷದ ಗೆಲುವಿಗೆ ತೊಂದರೆ ಆಗಲಾರದು ಎಂದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ಸಿನ ಬಹಳಷ್ಟು ಮಂದಿ ಜೆಡಿಎಸ್ ಸೇರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮತ್ತು ಅವರ ಬೆಂಬಲಿಗರು ಪಕ್ಷ ಸೇರಿದ್ದಾರೆ ಅಷ್ಟೆ. ಇದು ಅಂತಹ ಬಹುದೊಡ್ಡ ಪರಿಣಾಮವೇನೂ ಬೀರುವುದಿಲ್ಲ ಪಕ್ಷೇ ಗಟ್ಟಿ ಎನ್ನುವುದನ್ನು ಕಾರ್ಯಕರ್ತರು ಮತ್ತು ಮತದಾರರು ಸಾಬೀತುಪಡಿಸುತ್ತಾರೆ. ಇಂತಹ ವಿಷಯಗಳ ಬಗ್ಗೆ ನಾವೀಗ ತಲೆ ಕೆಡಿಸಿಕೊಳ್ಳುತ್ತಾ ಕೂರಲು ಸಮಯವಿಲ್ಲ. ಏನಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ಆಗಿದೆ. ಇದು ಶಿಕಾರಿಪುರಕ್ಕೂ ಅನ್ವಯಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಂ. ಚಂದ್ರಶೇಖರ್, ಚಂದ್ರಭೂಪಾಲ್, ಹೆಚ್.ಪಿ ಗಿರೀಶ್, ಎಸ್.ಪಿ. ಶೇಷಾದ್ರಿ, ಸುರೇಶ್ ಶೆಟ್ಟಿ, ಚಂದನ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post