ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಓದಿನ ಜೊತೆಗೆ ಬುದ್ದಿಯೂ ಕೂಡ ವಿಕಾಸವಾಗಬೇಕು. ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಗಾದೆಯೇ ಇದೆ. ಓದು ಶೇ.25ರಷ್ಟಾದರೆ ಬುದ್ಧಿಯನ್ನು ಶೇ.75ರಷ್ಟು ಉಪಯೋಗಿಸಿದಾಗ ಯಶಸ್ಸು ಸಾಧ್ಯ ಎಂದು ಖ್ಯಾತ ಮಕ್ಕಳ ತಜ್ಞ, ಡಾ. ಧನಂಜಯ ಸರ್ಜಿ ಹೇಳಿದ್ದಾರೆ.
ಅವರು ಇಂದು ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆ ವತಿಯಿಂದ ಪ್ರಕಟಿಸಿದ ವಿದ್ಯಾರ್ಥಿ ಪ್ರೋತ್ಸಾಹದಾಯಕ ಆವೃತ್ತಿಯನ್ನು ಪ್ರಾಯೋಜಿಸಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವು ಇರಬೇಕು. ಪತ್ರಿಕೆ ಮತ್ತು ಪುಸ್ತಕ ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಪಠ್ಯ ಪುಸ್ತಕದ ಜೊತೆಗೆ ಜ್ಞಾನ ವೃದ್ಧಿಸುವ ಇತರ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿಗಳು ನಿದ್ದೆಗೆಡಿಸುವ ದೊಡ್ಡ ದೊಡ್ಡ ಕನಸು ಕಾಣಬೇಕು. ಪ್ರಪಂಚದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಮಂಗಳ ಗೃಹಕ್ಕೆ ನಾಗರಿಕರನ್ನು ಕಳುಹಿಸುವ ಅತ್ಯಂತ ದೊಡ್ಡ ಕನಸು ಕಾಣುತ್ತಿದ್ದು, ಅದನ್ನು ಯಶಸ್ವಿಗೊಳಿಸುವತ್ತ ಹೆಜ್ಜೆ ಹಾಕಿದ್ದಾರೆ. ಸಾಧಕರ ಹಿನ್ನೆಲೆ ನೋಡಿದಾಗ ವಿದ್ಯೆಯ ಜೊತೆಗೆ ಹೆಚ್ಚಿನ ಬುದ್ಧಿವಂತಿಕೆ ಇದ್ದವರು ಅತ್ಯಂತ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಕನ್ನಡ ಪ್ರಭ ಪತ್ರಿಕೆ ಎಸ್ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರಕ ವಿಷಯಗಳ ಜೊತೆಗೆ ಬುದ್ಧಿಮತ್ತೆ, ಜ್ಞಾನ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಗೆ ವಿಶೇಷ ವಿದ್ಯಾರ್ಥಿ ಆವೃತ್ತಿ ಹೊರತಂದು ಮಕ್ಕಳ ಜ್ಞಾನಾರ್ಜನೆಗೆ ಸಹಾಯ ಮಾಡಿದೆ. ನೀವೂ ಓದುವುದರ ಜೊತೆಗೆ ಇತರರಿಗೂ ತಿಳಿಸಿ ಎಂದರು.
Also read: ಉಚಿತ ಪ್ರಯಾಣದ ಮಹಿಳೆಯರ ಅಬ್ಬರಕ್ಕೆ ಮುರಿದುಬಿದ್ದ ಮತ್ತೊಂದು ಬಸ್ ಬಾಗಿಲು
ಶಿವಮೊಗ್ಗ ಜಿಲ್ಲಾ ಕನ್ನಡ ಪ್ರಭ ಪ್ರಧಾನ ವರದಿಗಾರ ಗೋಪಾಲ ಯಡಗೆರೆ ಮಾತನಾಡಿ, ಯಾವತ್ತೂಕೂಡ ಬಾವಿಯೊಳಗಿನ ಕಪ್ಪೆಯಾಗಬಾರದು. ಎಲ್ಲಾ ಕಡೆಯಿಂದಲೂ ಬರುವ ಜ್ಞಾನವನ್ನು ಸಂಪಾದಿಸಬೇಕು. ಈ ವಿದ್ಯಾರ್ಥಿ ಪ್ರತಿಗಳಿಂದ ನಿಮಗೆ ಮಾಹಿತಿ ಲಭ್ಯವಾಗುವುದರ ಜೊತೆಗೆ ಜ್ಞಾನ ವೃದ್ಧಿಯಾಗುತ್ತದೆ. ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎನ್. ಮೋಹನ್ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಮಕ್ಕಳಿಗೆ ಕರೆನೀಡಿದರು.
ಕನ್ನಡ ಪ್ರಭದ ಸಂಜಿತ್, ಕಾರ್ತಿಕ್, ದುರ್ಗಿಗುಡಿ ಶಾಲೆಯ ಹಿರಿಯ ಶಿಕ್ಷಕಿ ದಾಕ್ಷಾಯಿಣಿ, ದೀಪಕ್ ಮತ್ತು ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post