ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಓರ್ವ ವೈದ್ಯನಿಗೆ ರೋಗಿಗಳೇ ದೇವರಾಗಿದ್ದು, ಅಂತಹವರ ನೋವು ನಿವಾರಿಸುವಂತಹ ಅವಕಾಶವೆಂಬ ದೊಡ್ಡ ಉಡುಗೊರೆಯನ್ನು ದೇವರು ನಮಗೆ ನೀಡಿದ್ದಾನೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಕೀಲು ತಜ್ಞರಾದ ಮಂಗಳೂರಿನ ಪ್ರೊ. ಡಾ. ಎಂ. ಶಾಂತರಾಮಶೆಟ್ಟಿ Dr. Shantharama Shetty ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕೀಲು ಮತ್ತು ಮೂಳೆ ತಜ್ಞರ 48ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನಾವು ಎಲ್ಲವನ್ನೂ ಮಧ್ಯಮ ಮಟ್ಟದಲ್ಲಿ ಮಾಡುತ್ತೇವೆ, ಮಧ್ಯಮ ಮಟ್ಟದಲ್ಲಿ ಕಲಿಯುತ್ತೇವೆ. ಹಾಗೂ ನಮ್ಮ ತೃಪ್ತಿಗಾಗಿ ಮಾತ್ರ ನಾವು ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ಆದರೆ ನಮ್ಮ ವೃತ್ತಿ ಹಾಗಲ್ಲ. ಯಾಕೆಂದರೆ ಜನರ ನೋವು ನಿವಾರಿಸಲು ದೇವರು ನಮಗೆ ಈ ಉಡುಗೊರೆಯನ್ನು ನೀಡಿದ್ದಾನೆ. ಇದಕ್ಕಾಗಿ ನಾವು ಅದೃಷ್ಠವಂತರು ಎಂದರು.
ಮೊಣಕಾಲು, ಕುತ್ತಿಗೆ ಸೇರಿದಂತೆ ಯಾವುದೇ ರೀತಿಯ ನೋವು ಇರಲಿ. ಅವುಗಳನ್ನು ನಿವಾರಿಸುವ ಪ್ರಯತ್ನ ಮಾಡುವ ಅವಕಾಶವನ್ನು ದೇವರು ನಮಗೆ ನೀಡಿದ್ದಾನೆ. ಇದನ್ನು ಮೂಳೆ ಮತ್ತು ಕೀಲು ತಜ್ಞರು ಅದರಲ್ಲೂ ಯುವ ವೈದ್ಯರು ಅತ್ಯಂತ ಸಮರ್ಥವಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ನಾನು ಸುಮಾರು 53 ವರ್ಷದಿಂದ ಶಸ್ತ್ರಚಿಕಿತ್ಸಕನಾಗಿಯೂ ವಿದ್ಯಾರ್ಥಿಗಳಿಗೆ ಪಾಠವನ್ನೂ ಸಹ ಮಾಡಿದ್ದೇನೆ. ಸಾಕಷ್ಟು ಹೆಸರು ಹಾಗೂ ಹಣ ಮಾಡಿದ್ದೇನೆ. ಇವೆಲ್ಲಕ್ಕೂ ಮಿಗಿಲಾಗಿ ನನಗೆ ತೃಪ್ತಿ ನೀಡಿರುವುದು ರೋಗಿಗಳ ನೋವು ನಿವಾರಣೆ ಮಾಡುವ ಕಾರ್ಯ. ಇದೇ ನಿಜವಾದ ಆತ್ಮತೃಪ್ತಿ. ಇದನ್ನು ಇಂದಿನ ಯುವ ವೈದ್ಯರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೂಳೆ ಮತ್ತು ಕೀಲು ನೋವನ್ನು ನಿರ್ವಹಿಸಲು ಮತ್ತು ಚಿಕಿತ್ಸೆ ನೀಡಲು ಮೂಳೆಶಸ್ತ್ರಚಿಕಿತ್ಸೆಯು ಪ್ರಮುಖವಾಗಿದೆ. ಇದು ನಮ್ಮಲ್ಲಿ ಹೆಚ್ಚಿನ ವೈದ್ಯರು ನಮ್ಮ ಜೀವಿತಾವಧಿಯಲ್ಲಿ ಎದುರಿಸುತ್ತಾರೆ. ಒಮ್ಮೆ ನೀವು ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಂಡರೆ ಅಲ್ಲಿಂದ ನೀವು ಉತ್ತಮ ಚಿಕಿತ್ಸೆಯನ್ನು ನೀಡಬಹುದು ಎಂದು ಯುವ ವೈದ್ಯರಿಗೆ ತಿಳಿ ಹೇಳಿದರು.
Also read: ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿಗೆ `ಭಾರತರತ್ನ’ದ ಗೌರವ
ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು, ದೇಶಕ್ಕೆ ಕುವೆಂಪು ಅವರಂತಹ ಶ್ರೇಷ್ಟ ಕವಿಗಳನ್ನು ನೀಡಿದ ಜಿಲ್ಲೆ ಶಿವಮೊಗ್ಗ. ಮಲೆನಾಡಿನ ಸುಂದರ, ಸ್ವಚ್ಛ ಅರಣ್ಯ ಪ್ರದೇಶದ ನಡುವೆ ಇರುವ ಶಿವಮೊಗ್ಗದಂತಹ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಮಟ್ಟದ ಈ ಸಮ್ಮೇಳನ ಆಯೋಜಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದರು.
ರಾಜ್ಯ ಸಂಘದ ಡಾ.ಎಡ್ವರ್ಡ್ ನಜರೆತ್ ಮಾತನಾಡಿ, ಡಾ. ಸುಧೀಂದ್ರ ಅವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಈ ಸಮ್ಮೇಳನ ಆಯೋಜಿಸಿರುವುದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಘಟನೆ ಮಾಡಿ, ಈ ಕ್ಷೇತ್ರದಲ್ಲಿರುವ ಅತ್ಯಾಧುನಿಕ ಅವಕಾಶಗಳನ್ನು ಬಳಸಿಕೊಂಡು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯ ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಅವಕಾಶಗಳಿಗೆ ವೇದಿಕೆಯನ್ನು ಮುಕ್ತವಾಗಿರಿಸಿದ್ದೇವೆ ಎಂದರು.
ಹಿಂದೆ ನ್ಯೂರೋ ಸರ್ಜರಿಗೆ ಸಂಬಂಧಿಸಿದಂತೆ ಸಮ್ಮೇಳನ ಹಾಗೂ ಕೆಲವು ಸಣ್ಣ ಮಟ್ಟದ ಸಮ್ಮೇಳನಗಳನ್ನೂ ಸಹ ಯಶಸ್ವಿಯಾಗಿ ನಡೆಸಿದ್ದೇವೆ. ಇಂತಹ ಚಟುವಟಿಕೆಗಳಿಗೆ ನಮ್ಮ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ.ಎಸ್. ನಾಗೇಂದ್ರ ಅವರು ಒತ್ತು ನೀಡುತ್ತಲ್ಲೇ ಬಂದಿದ್ದಾರೆ. ಈ ನಿಟ್ಟಿನಲ್ಲಿ ಈ ಅದ್ಬುತ ಸಮ್ಮೇಳನವನ್ನು ನಮ್ಮ ಕಾಲೇಜಿನಲ್ಲಿ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಸಂಸ್ಥೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸಮ್ಮೇಳನದ ಸಂಘಟನಾಧ್ಯಕ್ಷ ಡಾ.ಪಿ.ಆರ್. ಸುಧೀಂದ್ರ ಮಾತನಾಡಿ, ಪ್ರತಿ ವರ್ಷವು ಸಮ್ಮೇಳನ ನಡೆಸಲಾಗುತ್ತಿದೆ. 2004ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು. 20 ವರ್ಷಗಳ ನಂತರ ನಮ್ಮ ಸಂಘಕ್ಕೆ ಅವಕಾಶ ಸಿಕ್ಕಿದೆ. ಇದಕ್ಕಾಗಿ ಸಿದ್ದತೆಗಳು ಭರದಿಂದ ಸಾಗುತ್ತಿದೆ ಎಂದರು.
ರಾಜ್ಯದ ಮತ್ತು ಹೊರರಾಜ್ಯದ ಸುಮಾರು 1 ಸಾವಿರಕ್ಕೂ ಹೆಚ್ಚು ಕೀಲು ಮತ್ತು ಮೂಳೆ ತಜ್ಞರು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ರಾಜ್ಯ, ಹೊರರಾಜ್ಯ ಹಾಗೂ ವಿದೇಶದಿಂದ ಸುಮಾರು 200ಕ್ಕೂ ಹೆಚ್ಚು ಸಂಪನ್ಮೂಲ ತಜ್ಞ ವೈದ್ಯರು ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸುಮಾರು 400ಕ್ಕೂ ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತಿವೆ.
ಮೈಸೂರಿನ ಖ್ಯಾತ ವೈದ್ಯ ಡಾ.ಎನ್. ನಿತ್ಯಾನಂದ ರಾವ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಜಿ. ಭರತ್ ರಾಜ್, ವೈದ್ಯರುಗಳಾದ ಡಾ.ಹರೀಶ್ ಪೈ, ಡಾ.ಸುರೇಶ್, ಡಾ.ನಂದಕಿಶೋರ್ ಲಾಹೋಟಿ, ಡಾ.ಗಿರೀಶ್ ಕುಮಾರ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post