ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಪರಾಧ ಪ್ರಕರಣಗಳು ನಡೆದಾಗ ಇದು ಎಲ್ಲಡೆಯೂ ಮಹತ್ವದ ಸುದ್ಧಿಯಾದಷ್ಟು, ಅದನ್ನು ಛೇದಿಸಿದ್ದು ಸುದ್ದಿಯಾಗುವುದಿಲ್ಲ. ಜನಕ್ಕೆ ಅನುಕೂಲಕರವಾದ ಅನೇಕ ಕ್ರಮಗಳನ್ನು ಪೊಲೀಸ್ ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ SP Mithun Kumar ಹೇಳಿದರು.
ರೇಡಿಯೋ ಶಿವಮೊಗ್ಗ 90.8 ಎಫ್’ಎಂ Shivamogga 90.8FM ಸಮುದಾಯ ಬಾನುಲಿಯಲ್ಲಿ ಇಂದು ನಡೆದ ಸಾರ್ವಜನಿಕರೊಂದಿಗೆ ನೇರ ಸಂವಾದ ಫೋನ್ ಇನ್’ನಲ್ಲಿ ಭಾಗವಹಿಸಿ ಕರೆ ಮಾಡಿದವರಿಗೆ ಕ್ರಮಕೈಗೊಳ್ಳುವ ಭರವಸೆಯನ್ನಿತ್ತರು.
ಪ್ರೇಮ್ ಕುಮಾರ್ ಅವರು ಕರೆ ಮಾಡಿ, ಶಿವಮೊಗ್ಗ ನಗರದಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರವೀಂದ್ರನಗರದಲ್ಲಿ ಒನ್ ವೇಗೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲು ಕೋರಿದರು. ಚಂದ್ರಗುತ್ತಿಯಿಂದ ರವೀಂದ್ರ ಮಾತನಾಡಿ ಪ್ರಸಿದ್ದ ರೇಣುಕಾ ದೇವಸ್ಥಾನಕ್ಕೆ ಬರುವವರ ಬಗ್ಗೆ ಸಮಗ್ರ ಮಾಹಿತಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡಬೇಕು ಜಾತ್ರೆ, ವಿಶೇಷ ದಿನಕ್ಕೆ ಹೆಚ್ಚಿನ ಸಿಬ್ಬಂದಿ ಬೇಕು, ಸಿಸಿ ಟಿವಿ ಬೇಕು ಎಂದರು.
ಶಿವಮೊಗ್ಗದ ಯಶವಂತ್ ಕರೆ ಮಾಡಿ, ಶಿವಮೊಗ್ಗ ನಗರದಲ್ಲಿ ಅನಧಿಕೃತ ಇಸ್ಪೀಟ್ ಕ್ಲಬ್ ಆರಂಭಕ್ಕೆ ಯತ್ನ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟವಾಗುತ್ತಿದ್ದು, ಇದರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಎಸ್’ಪಿ ಮಿಥುನ್ ಕುಮಾರ್, ರವೀಂದ್ರ ನಗರದಲ್ಲಿ ಹೆಚ್ಚಿನ ಟ್ರಾಫಿಕ್ ಪೊಲೀಸ್ ನಿಯೋಜಿಸಲಾಗುವುದು. ಚಂದ್ರಗುತ್ತಿಯಲ್ಲಿ ದೇವಸ್ಥಾನದ ವತಿಯಿಂದ ಸಿಸಿ ಟಿವಿ ಹಾಕಿಸಲು ಕ್ರಮವಹಿಸಲಾಗುವುದು. ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ಇಸ್ಪೀಟ್ ಕ್ಲಬ್ ಪ್ರಯತ್ನದ ವಿರುದ್ಧ ಅಗತ್ಯ ಕ್ರಮ ವಹಿಸಲಾಗುವುದು. ಶಾಲೆಗಳ ಸುತ್ತಮುತ್ತ ರೇಡ್ ಮಾಡಿಸಲಾಗಿದೆ ಎಂದರು.
ತೀರ್ಥಹಳ್ಳಿ ಕೀರ್ತಿ ಮಾತನಾಡಿ ಪತಿ ಕಾಲವಾಗಿದ್ದು, ಮಗ ಇದ್ದಾನೆ. ಕೆಲಸಕ್ಕಾಗಿ ಅವಕಾಶ ದೊರಕಿಸಿಕೊಡುವಂತೆ ಕೇಳಿಕೊಂಡರು. ಇದಕ್ಕೆ ಎಸ್’ಪಿ ಸ್ಪಂದಿಸಿದ್ದು ಶಿವಮೊಗ್ಗದ ತಮ್ಮ ಕಚೇರಿಗೆ ಬಂದು ಭೇಟಿಯಾದರೆ, ಕೆಲಸದ ಪ್ರಯತ್ನ ಮಾಡಲಾಗುತ್ತದೆ ಎಂದರು.
Also read: ಆತ್ಮಸಾಕ್ಷಿಯಾಗಿ ವಿಚಾರ ಮಾಡಿದರೆ ನೈಜ ಸುಖ: ಸಿಎಂ ಬೊಮ್ಮಾಯಿ ಅಭಿಪ್ರಾಯ
ಸೊರಬದ ದಿಶಾನ್ ಕರೆ ಮಾಡಿ ತಮ್ಮ ಕಿರಿಯ ಸಹೋದರಿಗೆ ಅವರ ಪತಿಯ ಮನೆಯವರು ವಿಷಪ್ರಾಶನ ಮಾಡಿದ್ದು, ಎಫ್’ಐಆರ್ ದಾಖಲಾಗಿದ್ದರೂ ಆರೋಪಿಗಳ ಬಂಧನವಾಗಿಲ್ಲ ಎಂದು ದೂರಿದರು. ಇದಕ್ಕೆ ಪ್ರತ್ಯುತ್ತರಿಸಿದ ಎಸ್’ಪಿಯವರು ಅಲ್ಲಿನ ಠಾಣಾಧಿಕಾರಿಗೆ ಮಾತನಾಡಲಾಗುವುದು ಎಂದು ತಿಳಿಸಿದ ಅವರು ನೇರಪ್ರಸಾರದಲ್ಲೇ ಎಫ್’ಐಆರ್ ನಂಬರ್ ಪಡೆದುಕೊಂಡು, ಬಂಧನವಾಗಿಸುವ ಭರವಸೆಯನ್ನಿತ್ತರು.
ಸಾಗರದಿಂದ ಡಾ. ಗಂಗಾಧರ ಆತ್ರೇಯ ಕರೆ ಮಾಡಿ, ಮೊಬೈಲ್ ಕಳುವು ಆದರೆ ಏನು ಮಾಡಬೇಕು ಹಾಗೂ ಬಿಎಚ್ ರಸ್ತೆಯ ವೇಗ ನಿಯಂತ್ರಕಗಳು, ಶಿವಮೊಗ್ಗ ನಗರದಲ್ಲಿ ಹೊಸ ವೃತ್ತಗಳ ಅಗತ್ಯ ಎಂಬ ಬಗ್ಗೆ ಪ್ರಸ್ತಾಪ ಮಾಡಿದರು.
ವಿಶ್ರಾಂತ ಉಪನ್ಯಾಸಕ ರಾಮಸುಬ್ಬರಾಯ ಮಾತನಾಡಿ, ಹಿರಿಯ ನಾಗರಿಕರಿಗೆ ಬೈಕ್’ಗಳ ಕರ್ಕಶ ಧ್ವನಿಯ ಬಗ್ಗೆ ಪ್ರಸ್ತಾಪಿದರು. ಇದಕ್ಕೆ ಉತ್ತರಿಸಿದ ಎಸ್’ಪಿ ಅವರು, ಮೊಬೈಲ್ ಕಳುವಾದರೆ ಆ್ಯಪ್ ಮುಖಾಂತರ ದೂರು ಮಾಡಲು ಹೇಳಿದರು. ಬಿಎಚ್ ರಸ್ತೆ ಹಂಪ್ಸ್ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಜೊತೆಗ ಮಾತುಕತೆ ನಡೆಸಲಾಗುವುದು. ಶಿವಮೊಗ್ಗದಲ್ಲಿ ಹೊಸ ಸರ್ಕಲ್ ಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. 61 ಬೈಕ್ ಸೀಜ್ ಮಾಡಿ, ಸೈಲೆನ್ಸರ್ ಅಳವಡಿಕೆ ಮಾಡುವವರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಸುಸಜ್ಜನರು ಇದ್ದಾರೆ. ಕಿಡಿಗೇಡಿಗಳ ಸಮಸ್ಯೆ ದೊಡ್ಡದಾಗಿ ಮಾಡಕ್ಕಿಂತ ಗಮನಕ್ಕೆ ತನ್ನಿ. ಫೋಕಸ್ ಆಗಿ ಕೆಲಸ ಮಾಡ್ತಿದೀವಿ. ಇಲಾಖೆಯ ಬಗ್ಗೆ ಭರವಸೆ ಇರಲಿ. ಎಲ್ಲರೂ ನಿಮ್ಮ ಸುರಕ್ಷತೆಗೆ 24×7 ಕಾರ್ಯನಿರ್ವಹಣೆ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.
ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ, ಶಿವಮೊಗ್ಗ
ಶಿವಾನಂದಪ್ಪ ವಿಠುಗೊಂಡನಕೊಪ್ಪ ಕರೆ ಮಾಡಿ ಹಂಪ್’ಗೆ ಸ್ಟಿಕ್ಕರ್ ಬೇಕು, ಪಾದಚಾರಿ ಮಾರ್ಗ ತೆರವು, ಕೆಲವು ಗ್ರಾಮಗಳಲ್ಲಿ ರೈಲ್ವೇ ಸ್ಟೇಷನ್ ಹತ್ತಿರ ದರೋಡೆ ಯತ್ನ ನಡಿತಾ ಇದೆ ಎಂದರು. ಇದಕ್ಕೆ ಉತ್ತರಿಸಿದ ಎಸ್’ಪಿ ಅವರು, ಅಂತಹ ಪ್ರಕರಣಗಳ ನಡೆಯುತ್ತಿರುವ ಊರುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗಿರೀಶ್ ಆಚಾರ್ ಮರುಳು ಗಣಿಗಾರಿಕೆಯ ಬಗ್ಗೆ ಪ್ರಸ್ತಾಪ ಮಾಡಿದಾಗ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಇಂತಹ ಪ್ರಕರಣಗಳಿದ್ದರೆ ತಿಳಿಸುವಂತೆ ಹೇಳಿದರು.
ರಾಘವೇಂದ್ರ ಅವರು ನಂಬರ್ ಪ್ಲೇಟ್, ಇಂಡಿಕೇಟರ್ ಬಗ್ಗೆ ಮಾತನಾಡಿದರು. ಶೋಭಾ ವಿನೋಬನಗರದವರು ಮಾತನಾಡಿ ಆಗಂತುಕ ಕರೆಗಳ ಬಗ್ಗೆ ಕೇಳಿದರು. ಇದಕ್ಕೆ ಸ್ಪಂದಿಸಿದ ಎಸ್’ಪಿ ಇಂತಹ ಕರೆಗಳು ಬಂದಾಗ ಪೊಲೀಸ್ ಠಾಣೆಗೆ ತಿಳಿಸಿ, ಗೌಪ್ಯತೆ ಕಾಪಾಡಲಾಗುವುದು ಎಂದರು.
ದಿನೇಶ್ ಹೊಸನಗರ ಮಾತನಾಡಿ, ಮಕ್ಕಳ ಕಳ್ಳರ ಬಗ್ಗೆ ಕೇಳಿದರು. ಇದೊಂದು ಶುದ್ಧ ವದಂತಿಯಾಗಿದೆ. ಇದಕ್ಕೆ ಯಾರೂ ಕಿವಿಗೊಡದಿರಿ, ಇದನ್ನು ಪ್ರಚಾರ ಮಾಡದರಿ. ಅನುಮಾನಾಸ್ಪದ ವ್ಯಕ್ತಿಗಳು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ವಾಹನ ಕಳ್ಳತನಗಳನ್ನು ನಿಯಂತ್ರಿಸಲು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಇದು ನಿಯಮವೂ ಹೌದು. ಕಾಲೇಜು ವ್ಯಾಪ್ತಿಯಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು 15 ದಿನದಲ್ಲಿ 41 ಪ್ರಕರಣಗಳನ್ನು ಬೇಧಿಸಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದರೆ ತಿಳಿಸಿ ಎಂದರು.
ಚಂದ್ರು ಮಾತನಾಡಿ, ಆಟೋ ಅನಧಿಕೃತ ಪಾರ್ಕಿಂಗ್ ಬಗ್ಗೆ ಕೇಳಿದರು. ಸೂಕ್ತ ಆಟೋ ನಿಲ್ದಾಣ ಇಲ್ಲ, ಸ್ಮಾರ್ಟ್ ಸಿಟಿಯಿಂದ ನಿಲ್ದಾಣ ಮಾಡಲಾಗುತ್ತಿದೆ. ಆಟೋ ಡ್ರೆÊವರ್ ಸಮಗ್ರ ಮಾಹಿತಿಯುಳ್ಳ ಡಿಸ್ ಪ್ಲೇ ಕಾರ್ಡ್ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು. ಓಸಿ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದರು. ಅಕ್ಬರ್ ಸಾಗರ ಕರೆ ಮಾಡಿ ಅಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ತಿಳಿಸಿದರು. ಇದರ ಬಗ್ಗೆ ಕ್ರಮದ ಭರವಸೆಯನ್ನಿತ್ತರು.
ಆರ್’ಜೆ ಅರ್ಪಿತಾ ಕಾರ್ಯಕ್ರಮ ನಡೆಸಿದರು. ನಿಲಯ ನಿರ್ದೇಶಕರಾದ ಜಿ.ಎಲ್. ಜನಾರ್ಧನ್ ಉಪಸ್ಥಿತರಿದ್ದು, ಸೂಕ್ತ ಮಾರ್ಗದರ್ಶನ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post