ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಂದಾಯ ನೌಕರರ ಸಂಘದ ಪ್ರತಿಭಟನೆಯ ಹಿಂದೆ ಅನೇಕರ ಕೈವಾಡವಿದೆ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ MLA Kumar Bangarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ವಿರುದ್ಧ ಕಂದಾಯ ನೌಕರರ ಸಂಘದವರು ತಹಸೀಲ್ದಾರ್ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆ ಮಾಡಿರುವುದರಲ್ಲಿ ಯಾವ ಹುರುಳೂ ಇಲ್ಲ. ವಿಚಾರವನ್ನು ತಿಳಿದುಕೊಳ್ಳದೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಮಾಡಲಾಗಿದೆ. ಇದರ ಹಿಂದೆ ಹಲವರ ಕೈವಾಡವಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಸಹ ಯಾವ ಮಾಹಿತಿಯೂ ಇಲ್ಲದೆ ಈ ಪ್ರತಿಭಟನೆಗೆ ಸಹಕಾರ ನೀಡಿದ್ದಾರೆ ಎಂದರೆ ಅದು ವಿಷಾದನೀಯ ಎಂದರು.
ಕಂದಾಯ ನೌಕರರ ಸಂಘ ಆರೋಪಿಸುವಂತೆ ೧೪ ಜನ ತಹಸೀಲ್ದಾರರು ತಮ್ಮ ಅವಧಿಯಲ್ಲಿ ವರ್ಗಾವಣೆಯಾಗಿದ್ದಾರೆ ಎಂದು ಹೇಳುತ್ತಾರೆ. ಇವರಿಗೆ ವರ್ಗಾವಣೆ ಮಾಡುವವರು ಯಾರು? ನಾನು ಹೇಳಿದ ಮಾತ್ರಕ್ಕೆ 14 ಜನ ತಹಸೀಲ್ದಾರರ ವರ್ಗಾವಣೆ ಆಗುತ್ತದೆಯೇ, ವರ್ಗಾವಣೆ ಎಂಬುದು ಸರ್ಕಾರ ಮಾಡುವ ಒಂದು ಪ್ರಕ್ರಿಯೆ. ಇದು ಇವರಿಗೆ ಗೊತ್ತಿಲ್ಲವೇ, ವರ್ಗಾವಣೆಗೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಗಳನ್ನಾಗಲಿ, ಕಂದಾಯ ಸಚಿವರನ್ನಾಗಲಿ ಭೇಟಿಯೂ ಮಾಡಿಲ್ಲ. ಒಂದು ಪತ್ರವನ್ನು ಕೂಡ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂದಾಯ ನೌಕರರ ಜಿಲ್ಲಾಧ್ಯಕ್ಷ ಅರುಣ್ಕುಮಾರ್ ಎಂಬಾತ ಆರ್ಐ ಎಂಬುದು ನಿನ್ನೆ ತಾನೇ ಗೊತ್ತಾಯಿತು. ಈತ ಆರ್ಐ ಆಗಿದ್ದರೂ ಕೂಡ ಜಿಲ್ಲಾಧ್ಯಕ್ಷ ಎಂಬ ಕಾರಣಕ್ಕಾಗಿ ಈತನಿಗೆ ಉಪ ತಹಸೀಲ್ದಾರ್ ಪಟ್ಟ ಕೊಡಲಾಗಿದೆ. ಮೊದಲು ಈತನನ್ನು ಮೂಲ ಹುದ್ದೆಗೆ ವರ್ಗಾಯಿಸಬೇಕು. ಕೆಲವೇ ಜನ ಹಿಂಬಾಲಕರನ್ನು ಕಟ್ಟಿಕೊಂಡು ಈ ರೀತಿಯ ಪ್ರತಿಭಟನೆ ಮಾಡುತ್ತಾನೆ. ಕಂದಾಯ ಇಲಾಖೆಯಲ್ಲಿ ಮಾಡಬೇಕಾದ ಕೆಲಸ ಬೇಕಾದಷ್ಟಿದೆ. ನನ್ನ ಕ್ಷೇತ್ರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು. ಸಿಬ್ಬಂದಿಗಳು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಇವರ್ಯಾರೂ ಪ್ರತಿಭಟನೆಗೆ ಹಾಜರಾಗಿಲ್ಲ ಎಂದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಗ್ರೇಡ್-1, ಗ್ರೇಡ್-2 ತಹಸೀಲ್ದಾರರು ಇರುತ್ತಾರೆ. ಸೊರಬ ತಾಲೂಕು ಸೇರಿದಂತೆ ಕೆಲವು ತಾಲೂಕಿನಲ್ಲಿ ಗ್ರೇಡ್-1 ತಹಸೀಲ್ದಾರ್ ಇಲ್ಲ. ಸೊರಬ ತಾಲೂಕಿಗೆ ಗ್ರೇಡ್-1 ತಹಸೀಲ್ದಾರರು ಬೇಕು ಮತ್ತು ಹತ್ತು ಹದಿನೈದು ವರ್ಷಗಳಿಂದ ಇಲ್ಲೇ ಬೇರು ಬಿಟ್ಟಿರುವ ಕಂದಾಯ ಇಲಾಖೆಯ ಅಧಿಕಾರಿಗಳು ವರ್ಗಾವಣೆ ಆಗಬೇಕಾಗಿದೆ. ಈಗಾಗಲೇ ಅನೇಕ ಆರೋಪಗಳನ್ನು ಹೊತ್ತು ಅಮಾನತ್ತಾಗಿರುವ ಅಧಿಕಾರಿಗಳು ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.
Also read: ಅಲ್ಪಾವಧಿಯಲ್ಲಿ ತಯಾರಾದ ಎಲ್ಲರ ಬೆರಗುಗೊಳಿಸುವಂತಹ ‘ನಾರಿ ಶಕ್ತಿ’ ಸ್ತಬ್ಧಚಿತ್ರ…
ವರ್ಗಾವಣೆ ಎಂಬುದು ನಾನು ಮಾಡುವುದಲ್ಲ. ಎಲ್ಲವೂ ಸರ್ಕಾರದ ನಿಯಮಗಳ ಪ್ರಕಾರವೇ ಆಗುತ್ತದೆ. ಈ ಹಿಂದೆ ಸೊರಬ ತಾಲೂಕಿನಲ್ಲಿದ್ದ ತಹಸೀಲ್ದಾರ್ ಅನಧಿಕೃತ ಭೋಗಸ್ ದಾಖಲೆ ಸೃಷ್ಟಿಸಿ ಅಮಾನತ್ತಾಗಿದ್ದರು. ಪತ್ನಿಯ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿದ್ದರು. ಶ್ರೀಮಂತರಿಗೆಯೇ ಹತ್ತಾರು ಎಕರೆ ಬಗರ್ಹುಕುಂ ಜಮೀನನ್ನು ನೀಡಿ ಸರ್ಕಾರದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದರು. ಆಗ ಏಕೆ ಈ ಕಂದಾಯ ಇಲಾಖೆ ನೌಕರರು ಪ್ರತಿಭಟನೆ ಮಾಡಲಿಲ್ಲ. ರಾಜ್ಯಾಧ್ಯಕ್ಷರಾಗಲಿ, ಜಿಲ್ಲಾಧ್ಯಕ್ಷರಾಗಲಿ ಏಕೆ ಕೇಳಲಿಲ್ಲ ಎಂದರು.
ಆಡಳಿತಾತ್ಮಕವಾಗಿ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ತಾಲೂಕಿಗೆ ಗ್ರೇಡ್-1 ತಹಸೀಲ್ದಾರ್ ಬೇಕು ಎಂದು ಹೇಳಿದ್ದು ನಿಜ. ಆದರೆ 14 ಜನ ತಹಸೀಲ್ದಾರರನ್ನು ವರ್ಗಾವಣೆ ಮಾಡಿಸಿದ್ದೇನೆ ಎಂಬುದನ್ನು ಕಂದಾಯ ನೌಕರರ ಜಿಲ್ಲಾಧ್ಯಕ್ಷರಾಗಲಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಲಿ ಸಾಬೀತುಪಡಿಸಬೇಕು ಎಂದ ಅವರು, ನನ್ನ ಅವಧಿಯಲ್ಲಿ ಇಲ್ಲಿಗೆ ಬಂದವರು ಹೆಚ್ಚಿನವರು ಪ್ರೊಬೆಷನರಿ ಅಧಿಕಾರಿಗಳಾಗಿದ್ದು, ಅವರ ಅವಧಿ ಮುಗಿದೊಡನೆ ವರ್ಗಾವಣೆ ಆಗುತ್ತಿದ್ದಾರೆ ಅಷ್ಟೆ. ಈತನಕ ನನಗೆ ಕೊಟ್ಟಿರುವುದು ಮೂವರು ತಹಸೀಲ್ದಾರರನ್ನು ಮಾತ್ರ ಎಂದರು.
ಮಧು ಬಂಗಾರಪ್ಪ ಅವರ ವಿರುದ್ಧ ಕಿಡಿ ಕಾರಿದ ಕುಮಾರ್ ಬಂಗಾರಪ್ಪ, ಈ ಮಧು ಬಂಗಾರಪ್ಪನಿಗೆ ಮೆದುಳೇ ಇಲ್ಲ. ನಿಯಮಗಳೂ ಗೊತ್ತಿಲ್ಲ. ಅರ್ಥವಿಲ್ಲದ ಮಾತನಾಡುತ್ತಾರೆ. ಬಗರ್ಹುಕುಂ ಸಾಗುವಳಿದಾರರಿಗೆ ಸಂಬಂಧಿಸಿದಂತೆ ಅವರನ್ನು ವಂಚಿಸಿದ್ದಾರೆ. ಈಗಾಗಲೇ 6.6ಕೋಟಿ ಹಣಕ್ಕೆ ಸಂಬಂಧಿಸಿದಂತೆ ಚೆಕ್ ಬೌನ್ಸ್ ಆಗಿ ಜಾಮೀನು ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಇವರ ಕಾಲದಲ್ಲಿ ಆದ ಅನೇಕ ಅವ್ಯವಹಾರಗಳು ಇನ್ನೂ ಇವೆ. ಆಡಳಿತದ ಅನುಭವವೇ ಇಲ್ಲದ ಈತ ತನ್ನ ಹಿಂಬಾಲಕರನ್ನು ಕಟ್ಟಿಕೊಂಡು ಓಡಾಡುತ್ತಿದ್ದಾನೆ. ನನ್ನ ಬಗ್ಗೆ ಮಾತನಾಡುವ ಈತ ಯಾವ ಯಾವ ಪಕ್ಷದಿಂದ ಬಂದವನು ಎಂಬುದನ್ನು ಆತನೇ ಹೇಳಬೇಕು. ಈ ಬಾರಿ ಆತನಿಗೆ ಸೊರಬ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಳದ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post