ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಕೃತಿಯಲ್ಲಿ ನದಿಯಂತೆ ಸಮಾಜದಲ್ಲಿ ಮಹಿಳೆಯರ ಪಾತ್ರ, ಮಗಳಾಗಿ, ಅಕ್ಕ ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ವೈವಿಧ್ಯತೆಯಲ್ಲಿ ವಿಶೇಷತೆಯನ್ನು ಹೊಂದಿ ಬಹಳ ಪ್ರಾಮುಖ್ಯತೆ ಹೊಂದಿದೆ ಎಂದು ಭದ್ರಾವತಿಯ ಪಿ ಎಸ್ ಐ ಕವಿತಾ ಅಭಿಪ್ರಾಯಪಟ್ಟರು.
ಇಂದು ಮಾಚೇನಹಳ್ಳಿಯ ಎನ್ ಯು ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಇದರ ಪ್ರಯುಕ್ತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತ್ಯಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮನೆಯಲ್ಲಿ ಮಹಿಳೆಯರಿಲ್ಲದ ಜೀವನ ಬಲು ಕಷ್ಟಕರ. ಹಿಂದೆಲ್ಲಾ ಹೆಣ್ಣುಮಕ್ಕಳು ಬರೀ ಅಡುಗೆಮನೆಗೆ ಸೀಮಿತವಾಗಿದ್ದರು. ಆದರೆ ಈಗ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಮೆರೆದಿದ್ದಾರೆ. ಯಾವುದೇ ರೀತಿಯ ಸಮಸ್ಯೆಯಾದರೆ ಮಹಿಳೆಯರು ಮುಕ್ತವಾಗಿ ಪೋಲೀಸ್ ಠಾಣೆಗೆ ಬಂದು ದೂರು ಸಲ್ಲಿಸಬಹುದು. ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಕಠಿಣ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು ಮಕ್ಕಳ ಬೆಳವಣಿಗೆಯಲ್ಲೂ ಮಹಿಳೆಯರ ಪಾತ್ರದ ಬಗ್ಗೆ, ಹಾಗೂ ಇಂದಿನ ಸಾಮಾಜಿಕ ಜಾಲತಾಣದ ಪಿಡುಗಿನ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ. ಕಾವ್ಯ ವಿ ಪ್ರದೀಪ ಅವರು ಮಹಿಳೆಯರ ಆರೋಗ್ಯದ ಬಗ್ಗೆ ತಿಳಿಸಿಕೊಟ್ಟರು. ಮಹಿಳೆಯರ ಆರೋಗ್ಯ ಎಂದರೆ ಮನೆಗೆ ಅಡಿಪಾಯವಿದ್ದಂತೆ. ಅವರು ಆರೋಗ್ಯದಿಂದಷ್ಟು ಮನೆಯು ಸುಬಲವಾಗಿರುತ್ತದೆ ಎಂದು ಹೇಳಿದರು ಮತ್ತು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಾಡುವ ಸಾಮಾನ್ಯ ಕ್ಯಾನ್ಸರ್ ಗಳಾದ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ನಂತರ ಕವಿತಾರವರು ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಆಸ್ಪತ್ರೆಯ ಸೇವೆ ಮತ್ತು ತಂತ್ರಜ್ಞಾನದ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದರು. ಆಸ್ಪತ್ರೆಯ ಘಟಕ ಮುಖ್ಯಸ್ಥರಾದ ರಾಬಿನ್ ಜತ್ತನ್ನ, ಡಾ ಪ್ರದೀಪ, ಡಾ ಪ್ರವೀಣ್, ಡಾ ಕಾರ್ತಿಕ್, ಡಾ ಆಕಾಶ್, ರವಿ ಪೈ, ಚಿದಾನಂದ ಮತ್ತು ಆಸ್ಪತೆಯ ಆಡಳಿತ ಮತ್ತು ಸಿಬ್ಬಂದಿವರ್ಗದವರ ಜೊತೆಗೆ ಆಸ್ಪತ್ರೆಗೆ ಆಗಮಿಸಿದ್ದ ಹಲವಾರು ಹೊರರೋಗಿ ವಿಭಾಗದ ಜನರು ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷದರ್ಶಿಗಳಾದರು. ಮಾನವ ಸಂಪನ್ಮೂಲ ಅಧಿಕಾರಿ ಕುಮಾರಿ ಕೀರ್ತನಾ ಅವರು ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















