ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೇಡಿಗಳಂತೆ ಗೋಡೆಗಳ ಮೇಲೆ, ರಸ್ತೆ ಮೇಲೆ ಮರುಜನ್ಮ ತಗೊಂಡು ಬರುತ್ತೇವೆ. ಚಡ್ಡಿಗಳಿಗೆ ಬುದ್ದಿ ಕಲಿಸುತ್ತೇವೆ ಅಂತಾ ಬರೆದಿದ್ದಾರೆ. ಅವರಪ್ಪನ ಕೈನಿಂದಲೂ ಆರ್ ಎಸ್ ಎಸ್ಗೆ ಬುದ್ದಿ ಕಲಿಸಲು ಆಗಲ್ಲ. ವಿಧ್ವಂಸಕ ಚಟುವಟಿಕೆ ಮಾಡುವವರಿಗೆ ಬಿಗಿ ಕ್ರಮ ಕೈಗೊಳ್ಳಬೇಕು ಎಂಬುದೇ ಆರ್ ಎಸ್ ಎಸ್ ಉದ್ದೇಶ ಎಂದು ಶಾಸಕ ಈಶ್ವರಪ್ಪ ಕಟುವಾಗಿ ಉತ್ತರ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ವಿರುದ್ಧ ರಸ್ತೆ ಮೇಲೆ ಬರೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದರು.
ಕೊಲೆ ಸುಲಿಗೆ ಮಾಡುತ್ತಿರುವ ಪಿಎಫ್ಐಗೆ ವಿದೇಶಿ ಹಣ ಬರುತ್ತಿದೆ. ಪಿಎಫ್ಐ ನಿಷೇಧ ಮಾಡಿದ ನಂತರವಾದರೂ ಅವರ ತಂದೆ ತಾಯಿಯರು ಹುಷಾರಾಗಿರಬೇಕಿತ್ತು. ತಪ್ಪೊಪ್ಪಿಗೆ ಒಪ್ಪಿಕೊಂಡು ರಾಷ್ಟ್ರವಾದಿಗಳ ಜೊತೆ ಇರಬೇಕಿತ್ತು. ಭಾರತದ ಮುಸಲ್ಮಾನ ಯುವಕರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತಿರುವ ಪಿಎಫ್ಐ ಒಂದು ರಾಷ್ಟ್ರದ್ರೋಹಿ ಸಂಘಟನೆಯಾಗಿದ್ದು, ಇದೆಲ್ಲಾ ಗಮನಿಸಿಯೇ ಪಿಎಫ್ಐ ನಿಷೇಧಿಸಲಾಗಿದೆ ಎಂದು ಶಾಸಕ ಈಶ್ವರಪ್ಪ ಹೇಳಿದರು.
Also read: ಭಾರಿ ಮಳೆಯಿಂದ ತೊಟ್ಟಿಲು ಸೇತುವೆಗೆ ಹಾನಿ: ಸ್ಥಳಕ್ಕೆ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭೇಟಿ
ಮುಸ್ಲಿಂ ಯುವಕರು ಅನೇಕರು ರಾಷ್ಟ್ರ ಭಕ್ತರಿದ್ದಾರೆ. ಪಿಎಫ್ಐ ಕುಮ್ಮಕ್ಕಿನಿಂದ ಯುವಕರು ಹಾಳಾಗಿದ್ದಾರೆ. ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿ, ಜೈಲಿಗೆ ಹೋಗಿ ಇಡೀ ಜೀವನ ಕಳೆದುಕೊಳ್ಳುತ್ತಾರೆ. ದಾರಿ ತಪ್ಪಿರುವ ಮುಸ್ಲಿಂ ಗೂಂಡಾಗಳಿಗೆ ಅವರ ಹಿರಿಯರು ಬುದ್ದಿ ಹೇಳಬೇಕು ಎಂದರು.
ಕಿಡಿಗೇಡಿಗಳ ಗೂಂಡಾಗಿರಿ ಹೇಳಿಕೆಗೆ ಯಾವ ಆರ್ಎಸ್ಎಸ್ನವರು ಹೆದರುವುದಿಲ್ಲ. ಕತ್ತಲೆಯಲ್ಲಿ ಹೇಡಿಗಳ ರೂಪದಲ್ಲಿ ರಸ್ತೆಯಲ್ಲಿ ಬರೆದು ಹೋಗಿದ್ದಾರೆ. ಇದರ ಬಗ್ಗೆ ಒಬ್ಬನೇ ಒಬ್ಬ ಕಾಂಗ್ರೆಸ್ಸಿಗನು ಮಾತನಾಡಿಲ್ಲ. ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದಲೇ ಇಲ್ಲಿಯವರೆಗೆ ರಾಷ್ಟ್ರದ್ರೋಹಿಗಳಾಗಿ ಮುಂದುವರಿದಿದ್ದಾರೆ. ಕಾಂಗ್ರೆಸ್ ನವರು ನಮ್ಮ ಜೊತೆ ಇದ್ದಾರೆ ಎಂಬ ಧೈರ್ಯದಿಂದಲೇ ಪಿಎಫ್ಐ ನವರು ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಯಾವುದೇ ಬೇರೆ ಹೆಸರಿನಲ್ಲಿ ಪಿಎಫ್ ಐ ಬಂದರೂ ಅವರ ಸೊಂಟ ಮುರಿಯುವ ಕೆಲಸವನ್ನು ಮೋದಿ ಹಾಗೂ ಅಮಿತ್ ಶಾ ಮಾಡುತ್ತಾರೆ ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದರು.
ಆರ್ಎಸ್ಎಸ್ ರಾಷ್ಟ್ರ ಪ್ರೇಮ ಜಾಗೃತಿ ಮಾಡುತ್ತಿದೆ. ರಾಷ್ಟ್ರದ್ರೋಹಕ್ಕೆ ಬೆಂಬಲ ಕೊಡ್ತಿರೋದು ಪಿಎಫ್ಐ. ಪಿಎಫ್ಐಗೆ ಸಾಥ್ ಕೊಡುತ್ತಿರುವುದು ಕಾಂಗ್ರೆಸ್. ನಿಮ್ಮ ಮಕ್ಕಳಿಗೆ ಇಂತಹ ಪರಿಸ್ಥಿತಿ ಬಂದಿದ್ರೆ ಕಾಂಗ್ರೆಸ್ನವರು ಏನು ಮಾಡುತ್ತಿದ್ರಿ? ಕಾಂಗ್ರೆಸ್ನವರು ಪಿಎಫ್ಐ ಅವರಿಗೆ ಬುದ್ದಿ ಹೇಳಬೇಕು ಎಂದು ಹೇಳಿದರು.
ಪರೇಶ್ ಮೆಸ್ತಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಪರೇಶ್ ಮೆಸ್ತಾ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅವರ ತಂದೆ ತಾಯಿ, ಹಿಂದು ಯುವಕರು ಹೇಳುತ್ತಿದ್ದಾರೆ, ಸಿದ್ದರಾಮಯ್ಯ ಅವರ ಕಾಲದಲ್ಲಿ ಸರಿಯಾಗಿ ತನಿಖೆ ಆಗಲಿಲ್ಲ. ಬಹಳಷ್ಟು ದಾಖಲಾತಿ ಮುಚ್ಚಿ ಹಾಕಿದ್ದಾರೆ. ಮುಚ್ಚಿ ಹಾಕಿರೋದಕ್ಕೆ ಸರಿಯಾದ ತನಿಖೆಯ ಸರಿಯಾದ ವರದಿ ಬಂದಿಲ್ಲ. ಮರು ತನಿಖೆ ಮಾಡುವಂತೆ ಅವರ ತಂದೆ ತಾಯಿ ಹಾಗೂ ಹಿಂದು ಯುವಕರು ಆಗ್ರಹಿಸಿದ್ದಾರೆ. ತಾವೂ ಸಹ ಮರು ತನಿಖೆಗೆ ಒತ್ತಾಯಿಸುತ್ತೇನೆ ಎಂದರು.
ಅ.30ರಂದು ಬಿಜೆಪಿ ಓಬಿಸಿ ಸಮಾವೇಶ:
ಅ.30ರಂದು ಗುಲ್ಬರ್ಗಾದಲ್ಲಿ ರಾಜ್ಯದ ಹಿಂದುಳಿದ ವರ್ಗದ ದೊಡ್ಡ ಸಮಾವೇಶ ನಡೆಯುತ್ತಿದೆ. ೫ ಲಕ್ಷಕ್ಕೂ ಹೆಚ್ಚು ಹಿಂದುಳಿದವರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಐದು ತಂಡಗಳಲ್ಲಿ ಈಗಾಗಲೇ ಪ್ರವಾಸ ಮಾಡಲು ಯೋಜನೆ ರೂಪಿಸಲಾಗಿದ್ದು, ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಹಿಂದುಳಿದವರ ವರ್ಗದ ಸಮಾಜ ಬಿಜೆಪಿ ಜೊತೆ ಇದೆ ಎಂಬುದು ಈ ಸಮಾವೇಶದಿಂದ ತಿಳಿಯುತ್ತದೆ ಎಂದರು.
ರಾಜ್ಯದಲ್ಲಿ ಇದೇ ರೀತಿ ದಲಿತ ಮೋರ್ಚಾದಿಂದ ದೊಡ್ಡ ಸಮಾವೇಶ ನಡೆಯುತ್ತದೆ. ಯುವ ಮೋರ್ಚಾ, ಮಹಿಳಾ ಸಮಾವೇಶ ಸಹ ಚುನಾವಣೆಗೂ ಮೊದಲೇ ನಡೆಯಲಿದೆ. ಇಡೀ ಸಮಾಜ ಬಿಜೆಪಿ ಜೊತೆ ಇದೆ ಎಂಬುದನ್ನು ತೋರಿಸೋದು ಈ ಸಮಾವೇಶದ ಉದ್ದೇಶ ಎಂದು ತಿಳಿಸಿದರು.
ಮಹಾರಾಷ್ಟ್ರ, ಉತ್ತರಪ್ರದೇಶ, ನಮ್ಮ ರಾಜ್ಯದಲ್ಲೂ ಸಹ ಗುಲಾಮಗಿರಿಯ ಸಂಕೇತವನ್ನು ತೆಗೆದು ಹಾಕುವ ಪ್ರಯತ್ನ ನಡೆಯುತ್ತಿದೆ. ಹಲೋ ಎನ್ನುವ ಬದಲು ವಂದೇ ಮಾತರಂ ಎನ್ನಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ರಾಷ್ಟ್ರಭಕ್ತರಿಗೆ ಸ್ಫೂರ್ತಿ ಕೊಡುವ ಕಾರ್ಯಕ್ರಮ ಆಗುತ್ತಿದ್ದು, ಅನೇಕ ಕಡೆ ಬ್ರಿಟಿಷರ ಪ್ರತಿಮೆ ತೆಗೆದು ಹಾಕಲಾಗುತ್ತಿದೆ. ಅನೇಕ ಕಡೆ ರಸ್ತೆಗಳಿಗೆ ರಾಷ್ಟ್ರ ಭಕ್ತರ ಹೆಸರಿಡುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಈ ಕೆಲಸ ಮಾಡಬೇಕಿತ್ತು. ಕಾಂಗ್ರೆಸ್ ಮಾಡೋದು ವಿಳಂಬ ಆಗಿರುವುದರಿಂದ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಈ ಕಾರ್ಯ ಭರದಿಂದ ಸಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post