ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಸಿಎಂ ದಿ. ಬಂಗಾರಪ್ಪ #S Bangarappa ಬಡವರ ಕಣ್ಮಣಿಯಾಗಿದ್ದರು ಎಂದು ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಹೇಳಿದರು.
ಅವರು ಇಂದು ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ಎಸ್. ಬಂಗಾರಪ್ಪ ಅವರ 13ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದಿ. ಬಂಗಾರಪ್ಪನವರು ಕೇವಲ ವ್ಯಕ್ತಿಯಾಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಅವರು ಬಹುಮುಖ ವ್ಯಕ್ತಿತ್ವವುಳ್ಳವರು. ಕೇವಲ ರಾಜಕಾರಣಿ ಮಾತ್ರವಲ್ಲ, ಹಾಡುಗಾರ, ಸಂಗೀತ ಕೇಳುಗ, ಸಾಹಿತ್ಯಾಸಕ್ತಿ, ಜನಪದ ಪ್ರೇಮಿಯೂ ಆಗಿದ್ದರು. ಕ್ರೀಡೆಗಳಲ್ಲೂ ಅವರಿಗೆ ಆಸಕ್ತಿ ಇತ್ತು ಎಂದರು.
ಬಂಗಾರಪ್ಪನವರಿಗೆ ಬಡವರ ಬಗ್ಗೆ ಕಾಳಜಿ ಇತ್ತು. ಹಾಗಾಗಿಯೇ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅವರ ಆಶ್ರಯ, ಆರಾಧನಾ, ಅಕ್ಷಯ ಮುಂತಾದ ಯೋಜನಗಳು ಈಗಲೂ ಕೂಡ ಬೇರೆ ಬೇರೆ ರೂಪದಲ್ಲಿ ಕಾಣಸಿಗುತ್ತವೆ. ಜಿಲ್ಲೆಗೂ ಅವರ ಕೊಡುಗೆ ಅಪಾರವಿದೆ. ಮುಖ್ಯವಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದರು.
Also read: ಡಿ.28 | ಶಿವಮೊಗ್ಗ ಜಿಲ್ಲಾ ವಾಣಿಜ್ಯ-ಕೈಗಾರಿಕಾ ಸಂಘದ ಸಂಸ್ಥಾಪಕರ ದಿನಾಚರಣೆ
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಚಾಲಕ ಜಿ.ಡಿ. ಮಂಜುನಾಥ್ ಮಾತನಾಡಿ, ಬಂಗಾರಪ್ಪನವರು ಬಡವರ ಕಣ್ಣೀರನ್ನು ಒರೆಸುತ್ತಿದ್ದರು. ರೈತರು, ಕಾರ್ಮಿಕರ ಕಷ್ಟಗಳಿಗೆ ಮರುಗುತ್ತಿದ್ದರು. ಬರಗಾಲದಂತಹ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ಗೊಬ್ಬರ ನೀಡಿದವರು. ಶಿವಮೊಗ್ಗಕ್ಕೂ ಅವರ ಕೊಡುಗೆ ಸಾಕಷ್ಟಿದೆ. ಮೆಗ್ಗಾನ್ ಆಸ್ಪತ್ರೆ ವಿಸ್ತೀರ್ಣ, ಮಹಾನಗರ ಪಾಲಿಕೆ ರಚನೆಗೆ ಕ್ರಮ, ಕೃಷಿ ಕಾಲೇಜ್ ಸ್ಥಾಪನೆ, ವಿದ್ಯಾರ್ಥಿಗಳಿಗೆ ಶಕ್ತಿ, ಹಾಸ್ಟೆಲ್ ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಸ್.ಸಿ. ರಾಮಚಂದ್ರ, ಎನ್.ಪಿ. ಧನರಾಜ್, ಕಾಗೋಡು ರಾಮಪ್ಪ, ಉದಯಕುಮಾರ್ ಹೆಚ್.ಕೆ. ಕೃಷ್ಣಮೂರ್ತಿ, ಎಂ.ರಮೇಶ್, ಸುವರ್ಣಾ ನಾಗರಾಜ್, ಪುರದಾಳ್ ರವಿಕುಮಾರ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post