ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಜೂ.22ರಿಂದ 26ರವರೆಗೆ ಸಾಮವೇದ ಸಂಹಿತಾ ಯಾಗ, ಚತುರ್ವೇದ ಪಾರಾಯಣ, ಸಾಂಸ್ಕøತಿಕ ಕಾರ್ಯಕ್ರಮ, ಭಜನೆ ಹಾಗೂ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಳೆದ 32 ವರ್ಷಗಳಿಂದ ಲೋಕ ಕಲ್ಯಾಣಾರ್ಥ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ದಿವಂಗತ ಅ.ಪ. ರಾಮಭಟ್ಟರು ಈ ಯಾಗ ನಡೆಸಿಕೊಂಡು ಬಂದಿದ್ದು, ವೇದದ ಸಂರಕ್ಷಣೆ ಹಾಗೂ ವೇದದ ಪ್ರಸಾರಕ್ಕೆ ಈ ಸಾಮ ಸಂಹಿತಾ ಯಾಗ ನಡೆಸಲಾಗುತ್ತಿದೆ. ಈ ಯಾಗದ ಸಂದರ್ಭದಲ್ಲಿ ಜೂ.22ರ ಗುರುವಾರ ಸಂಜೆ 6ಕ್ಕೆ ಸಾಂಸ್ಕøತಿ ಹಾಗೂ ಭಜನಾ ಕಾರ್ಯಕ್ರಮದ ಉದ್ಘಾಟನೆ ಇರುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಗೌರವ ಅಧ್ಯಕ್ಷ ಎಸ್.ಕೆ. ಮರಿಯಪ್ಪನವರು ವಹಿಸಲಿದ್ದು, ಉಪಾಧ್ಯಕ್ಷ ಎಂ. ಉಮಾಶಂಕರ ಉಪಾಧ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಯಕ್ಷಗಾನ ಗುರು ಐನಬೈಲು ಪರಮೇಶ್ವರ ಹೆಗಡೆಯವರು ಭಾಗವಹಿಸಲಿದ್ದಾರೆ.
ಈ ಸಂಹಿತಾ ಯಾಗ ಸಂದರ್ಭದಲ್ಲಿ ಪ್ರತಿದಿನ ಸಂಜೆ 5ರಿಂದ 6ರವರೆಗೆ ಭಜನಾ ಪರಿಷತ್ ಸಹಯೋಗದಿಂದ 5 ದಿನ ಭಜನಾ ಕಾರ್ಯಕ್ರಮ ನಡೆಯಲಿದೆ. ಜೂ. 22ರಂದು ಸಂಜೆ 6-30ಕ್ಕೆ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಜೂ.23ರಂದು ಗಮಕ ವಾಚನ ವ್ಯಾಖ್ಯಾನವನ್ನು ವಿದ್ವಾನ್ ಎಲ್. ವಾಸುದೇವ ಭಟ್ಟರು ನಡೆಸಿಕೊಡಲಿದ್ದಾರೆ. ಜೂ.24ರಂದು ಯಕ್ಷಕೂಟ ಮಹಿಳಾ ಕಲಾವಿದರಿಂದ ಶ್ರೀರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಜೂ.25ರಂದು ರಾಜ್ಯದ ಪ್ರಸಿದ್ಧ ಕಲಾವಿದರಿಂದ ಕದಂಬ ಕೌಶಿಕೆ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಜೂ.26ರಂದು ಕೂಡಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳವರು ಹಾಗೂ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆ. 11ಗಂಟೆಗೆ ಸಾಮಸಂಹಿತಾ ಯಾಗದ ಮಹಾ ಪೂರ್ಣಾಹುತಿ ನಡೆಯಲಿದ್ದು, ನಂತರ ಶ್ರೀಗಳ ಆಶೀರ್ವಚನ ನಡೆಯಲಿದೆ.
Also read: ಅಬ್ಬಬ್ಬಾ! ಶೆಡ್’ನಲ್ಲಿ ವಾಸಿಸುವ ಮಹಿಳೆಗೆ ಬಂದ ಕರೆಂಟ್ ಬಿಲ್ ಇಷ್ಟೊಂದಾ?
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಲವು ದಶಕಗಳಿಂದ ಸಹಸ್ರಾರು ಮಾತೆಯರಿಗೆ ಸೌಂದರ್ಯಲಹರಿ, ಅನೇಕ ಸ್ತೋತ್ರ, ಭಜನೆ, ಮತ್ತು ಕೀರ್ತನೆ ಕಲಿಸಿದ ರಾಜಲಕ್ಷ್ಮಿ ಮತ್ತು ಕಾಮಾಕ್ಷಮ್ಮ ಇವರಿಗೆ ಈ ಸಾಲಿನ ಪ್ರಶಸ್ತಿ ಪ್ರದಾನವನ್ನು ಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಲಾಗುವದು. ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಈ ಸತ್ಕಾರ್ಯದಲ್ಲಿ ಸರ್ವರೂ ಭಾಗವಹಿಸುವಂತೆ ಅರ್ಚಕ ಶಂಕರನಾರಾಯಣ ಎ.ಆರ್. ಭಟ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post