ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ರಂಗಾಯಣದ Shivamogga Rangayana ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಅವಧಿಯಲ್ಲಿ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದು, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ Sandesh Jawali ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕ ಸರ್ಕಾರ 27-12-2019ರಂದು ನನ್ನನ್ನು ಮುಂದಿನ ಆದೇಶದವರೆಗೆ ಅನ್ವಯವಾಗುವಂತೆ ಶಿವಮೊಗ್ಗ ರಂಗಾಯಣದ ನಿರ್ದೇಶಕನನ್ನಾಗಿ ನೇಮಕ ಮಾಡಿ, ಆದೇಶ ಹೊರಡಿಸಿತ್ತು. ಅದರಂತೆ ನಾನು ಮೂರು ವರ್ಷ ಮೂರು ತಿಂಗಳು ಕಾಲ ಈ ಹುದ್ದೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ತೀರ್ಥಹಳ್ಳಿಯಂತಹ ಗ್ರಾಮೀಣ ಭಾಗದಲ್ಲಿ ಕಳೆದ ಮೂರು ದಶಕಗಳಿಂದ ರಂಗಭೂಮಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡ ನನಗೆ ಸಂಘಟನೆಯ ಹಿರಿಯರು ಅನಿರೀಕ್ಷಿತವಾಗಿ ಈ ಜವಾಬ್ದಾರಿಯನ್ನು ನೀಡಿದರು.
ನನ್ನ ಅವಧಿಯಲ್ಲಿ ಬಿಎಸ್ವೈ. ಬಿವೈಆರ್, ಆರಗ ಜ್ಞಾನೇಂದ್ರ, ಕೆ.ಎಸ್. ಈಶ್ವರಪ್ಪ, ಸಿ.ಟಿ ರವಿ. ಅರವಿಂದ ಲಿಂಬಾವಳಿ ಮೊದಲಾದ ನಾಯಕರು ಬೆನ್ನಿಗೆ ನಿಂತು ಸಹಕರಿಸಿದ್ದು, ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನನ್ನ ಅವಧಿಯಲ್ಲಿ ಶಿವಮೊಗ್ಗ ರಂಗಾಯಣದಲ್ಲಿ ವಾರಾಂತ್ಯ ನಾಟಕಗಳ ಪ್ರದರ್ಶನ ಬಹುಮುಖಿ ರಾಷ್ಟ್ರೀಯ ಉತ್ಸವಗಳ ಆಯೋಜನೆ, ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ,- ಬೇಸಿಗೆ ಶಿಬಿರಗಳು, ಯುವ ಹವ್ಯಾಸಿ ಕಲಾವಿದರಿಗಾಗಿ 3 ತಿಂಗಳ ರಂಗ ಶಿಕ್ಷಣ ಸರ್ಟಿಫಿಕೇಟ್ ಕೋರ್ಸ್, ಯುವಜನತೆಯನ್ನು ರಂಗಭೂಮಿಯೆಡೆಗೆ ಸೆಳೆಯುವ ಪ್ರಯತ್ನವಾಗಿ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಲೇಜು ರಂಗೋತ್ಸವ, ಕೋವಿಡ್ನ ಸಂದರ್ಭದಲ್ಲಿಯೂ ವಿರಮಿಸದೆ ಆನ್ಲೈನ್ ಕಾರ್ಯಕ್ರಗಳ ಆಯೋಜನೆ, ಜೀವನ್ಮುಖಿ ಮಹಿಳಾ ರಂಗೋತ್ಸವ, ವಿಶ್ವ ರಂಗಭೂಮಿ ದಿನಾಚರಣೆ, ರಂಗಾಯಣ ರೆಪೆರ್ಟರಿಯ ನಾಟಕಗಳ ಪ್ರದರ್ಶನ, ಮತ್ತು ರಾಜ್ಯಾದ್ಯಂತ ರಂಗತೇರು-ರಂಗಪಯಣದ ಹೆಸರಿನಲ್ಲಿ ತಿರುಗಾಟ, ಹೊರರಾಜ್ಯ ವಿಶೇಷವಾಗಿ ದೆಹಲಿಯಲ್ಲಿ ಶಿವಮೊಗ್ಗ ರಂಗಾಯಣದ ನಾಟಕಗಳ ಪ್ರದರ್ಶನ, ರಂಗಭೂಮಿ ಕುರಿತಂತೆ ವಿಚಾರ ಸಂಕಿರಣಗಳು, ಸರ್ಕಾರದ ಸರ್ವರಿಗೂ ಸಂವಿಧಾನ ಯೋಜನೆಯಡಿ ವಿ ದ ಪೀಪಲ್ ಆಫ್ ಇಂಡಿಯಾ ನಾಟಕದ ಸುಮಾರು 60 ಕಡೆಗಳಲ್ಲಿ ಯಶಸ್ವೀ ಪ್ರದರ್ಶನ ನಡೆಸಿದೆ. ಅಷ್ಟೇ ಅಲ್ಲದೆ ರಂಗಾಯಣದ ಆವರಣದಲ್ಲಿ ಭಿತ್ತಿಚಿತ್ರಗಳು, ಸಿಮೆಂಟ್ ಶಿಲ್ಪಗಳ ಅನಾವರಣ, ಭವನದ ಸಮೀಪ ಬಯಲು ರಂಗಮಂದಿರದ ಕಾಮಗಾರಿ. ಇವಿಷ್ಟು ನನ್ನ ಅವಧಿಯಲ್ಲಿ ನಡೆದಿದೆ ಎಂದರು.
ರಾಜಕೀಯ ಬಿಟ್ಟು ಶುದ್ಧ ಮನಸ್ಸಿನಿಂದ ಕೆಲಸ ನಿರ್ವಹಿಸಿದ ತೃಪ್ತಿ ನನಗಿದ್ದು, ಸುವರ್ಣ ಸಂಸ್ಕೃತಿ ಭವನದ ಪ್ರೇಕ್ಷಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳ ಮಾಡಿದ ತೃಪ್ತಿ ಕೂಡ ಇದೆ. ನನ್ನ ಅವಧಿಯಲ್ಲಿ ಸಹಕರಿಸಿದ ರಂಗಾಯಣದ ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗ, ರೆಪರ್ಟರಿ ಕಲಾವಿದರು, ಶಿವಮೊಗ್ಗ ಕಲಾವಿದರ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಸಚಿವರು ಮತ್ತು ಮಾಧ್ಯಮ ಮಿತ್ರರು ಹಾಗೂ ಕಲಾಭಿಮಾನಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ತೀರ್ಥಹಳ್ಳಿಯಲ್ಲಿ ಮುಂದಿನ ರಂಗಪಯಣಕ್ಕೆ ಯೋಜನೆ ಹಾಕಿಕೊಂಡಿದ್ದು, ಎಲ್ಲರ ಸಹಕಾರ ಕೋರುವುದಾಗಿ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post