ಮೂರು ಬಾರಿ ಲೋಕಸಭಾ ಸದಸ್ಯರಾಗಿರುವ ಮತ್ತು ಜೀವನದ 50 ವರ್ಷಗಳನ್ನು ಪೂರೈಸಿರುವ ಬಿ.ವೈ.ರಾಘವೇಂದ್ರ BYRaghavendra ಅವರಿಗೆ ಮಲೆನಾಡು ವೀರಶೈವ ಲಿಂಗಾಯಿತ ಮಠಾಧೀಶರರ ಪರಿಷತ್ತು ವತಿಯಿಂದ ಸಾರ್ಥಕ ಸುವರ್ಣ ಎಂಬ ಹೆಸರಲ್ಲಿ ಡಿ.8ರಂದು ಸಂಜೆ 5.30ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಬೆಕ್ಕಿನ ಕಲ್ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ರಾಘವೇಂದ್ರರವರ ಕೊಡುಗೆ ಜಿಲ್ಲೆಗೆ ಬಹಳಷ್ಟಿದೆ. ಅಭಿವೃದ್ಧಿ ಹರಿಕಾರ ಎಂದೇ ಜನಪ್ರಿಯರಾಗಿದ್ದಾರೆ. ಸಿಗಂದೂರು ಸೇತುವೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು, ನೀರಾವರಿ, ವಿಮಾನ ನಿಲ್ದಾಣ ಹೀಗೆ ಹಲವು ಅಭಿವೃದ್ಧಿಗಳನ್ನು ಮಾಡಿದ್ದಾರೆ. ಮಠಮಂದಿರಗಳಿಗೆ ಅನುದಾನ ಸರ್ವ ಜನಾಂಗದವರ ಕಲ್ಯಾಣ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಕೊಡುಗೆ ನೀಡಿರುವ ಬಿ.ವೈ.ರಾಘವೇಂದ್ರರವರನ್ನು ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಮ್ಮ ಸಾನಿಧ್ಯದಲ್ಲಿ ಹೊಂಬುಜ ಹುಂಚಾ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಮಹಾಸ್ವಾಮೀಜಿ, ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಮಹಾಸ್ವಾಮಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶರಣ ಸಾಹಿತ್ಯ ಪರಿಷತ್ನ ರಾಷ್ಟ್ರೀಯ ಅಧ್ಯಕ್ಷ ಡಾ. ಶ್ರೀ ಸೋಮಶೇಖರ್ ಉಪನ್ಯಾಸ ನೀಡಲಿದ್ದಾರೆ. ರಾಯಚೂರಿನ ಹಿಂದೂಸ್ತಾನಿ ಗಾಯಕ ಪಂಡಿತ್ ಅಂಬಯ್ಯನುಲಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ಇರುತ್ತದೆ ಎಂದರು.
ಆನಂದಪುರಂ ಮಹಾಸಂಸ್ಥಾನ ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ
ಡಿ.12ರಂದು ಆನಂದ ಪುರಂನಲ್ಲಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಅಂದು ಬೆಳಿಗ್ಗೆ 9.30ಕ್ಕೆ ಶರಣ ಸಾಹಿತ್ಯದ 573ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. 10ಕ್ಕೆ ಶರಣ ಸಾಹಿತ್ಯ ಸಮ್ಮೇಳನವನ್ನು ಗೋಣಿಬೀಡಿನ ಶೀಲಸಂಪಾದನ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿಸುವರು. ಹಲವು ಸ್ವಾಮೀಜಿಗಳು ಇದರಲ್ಲಿ ಭಾಗವಹಿಸುವರು. ಆರೋಗ್ಯ ತಪಾಸಣಾ ಶಿಬಿರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಕೇಶ್ ಸುರಗಿಹಳ್ಳಿ ಉದ್ಘಾಟಿಸುವರು. ಸಂಜೆ 4.30ಕ್ಕೆ ಭಾವೈಕ್ಯ ಸಮ್ಮೇಳನ ನಡೆಯಲಿದೆ. ಹುಂಚಾ ಜೈನಮಠದ ಶ್ರೀಗಳ ಸಮ್ಮುಖದಲ್ಲಿ ಬಸವಕೇಂದ್ರದ ಡಾ. ಬಸವ ಮರಳು ಸಿದ್ಧ ಮಹಾಸ್ವಾಮಿಗಳು ಉಪನ್ಯಾಸ ನೀಡುವರು. ಸಚಿವ ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಪದ್ಮಶ್ರೀ ಮಂಜಮ್ಮಜೋಗತಿಗೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಶಾಸಕರುಗಳು, ವಿವಿಧ ಮುಖಂಡರು ಭಾಗವಹಿಸುವರು. ಕಾಗೋಡು ತಿಮ್ಮಪ್ಪ ಹಾಗೂ ನಟ ದೊಡ್ಡಣ್ಣರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಹಾಗೂ ಹಲವರಿಗೆ ಸಮಾಜ ಸೇವಾ ರತ್ನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಡೆಶ್ರೀಗಳಾದ ಮಹಂತಸ್ವಾಮಿ, ಬಿಳಕಿ ಶ್ರೀಗಳಾದ ರಾಚೋಟೇಶ್ವರ ಸ್ವಾಮಿ, ತೋಗರ್ಸಿಯ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಮಾಜದ ಮುಖಂಡರುಗಳಾದ ಡಾ. ಧನಂಜಯ್ ಸರ್ಜಿ, ಜ್ಯೋತಿಪ್ರಕಾಶ್,ಮಹೇಶ್ ಮೂರ್ತಿ ಸಿ. ಶಾಂತವೀರಪ್ಪ, ರುದ್ರೇಶ್, ಇ. ವಿಶ್ವಾಸ್ ಮೊದಲಾದವರು ಇದ್ದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post