ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಜಿ ಫೌಂಡೇಷನ್ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ,(ರಿ) ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ತಾಲ್ಲೂಕಿನ 18 ಸರ್ಕಾರಿ ಶಾಲೆಗಳ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.
ಜೂ.25ರಂದು ನಗರದ ಸೀಗೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಎರಡು ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಹರಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಧನಂಜಯ ಸರ್ಜಿ, ಊಟ ಶರೀರಕ್ಕೆ, ಪಾಠ ಮೆದುಳಿಗೆ, ಆಟ ಮನಸ್ಸಿಗೆ ತೃಪ್ತಿಕೊಡುತ್ತದೆ. ಆದರೆ ಆತ್ಮಕ್ಕೆ ತೃಪ್ತಿಕೊಡುವುದೆಂದರೆ ಅದುವೇ ನಿಸ್ವಾರ್ಥ ಸೇವೆಯಾಗಿದೆ ಎಂದರು.
ಸಗಣಿಗೆ ಸಂಸ್ಕಾರ ನೀಡಿದರೆ ವಿಭೂತಿಯಾಗುತ್ತದೆ, ಕಲ್ಲಿಗೆ ಸಂಸ್ಕಾರ ನೀಡಿದರೆ ಶಿಲೆಯಾಗುತ್ತದೆ, ಮಣ್ಣಿಗೆ ಸಂಸ್ಕಾರ ನೀಡಿದರೆ ಮಡಿಕೆಯಾಗುತ್ತದೆ, ನೀರಿಗೆ ಸಂಸ್ಕಾರ ನೀಡಿದರೆ ನೈವೇದೈಯಾಗುತ್ತದೆ, ಅನ್ನಕ್ಕೆ ಸಂಸ್ಕಾರ ನೀಡಿದರೆ ದೇವರಿಗೆ ಪ್ರಸಾದವಾಗುತ್ತದೆ ಹಾಗೆಯೇ ಮನುಷ್ಯರಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮಹಾದೇವನಾಗುತ್ತಾನೆ ಎಂದರು.
ಈ ನಿಟ್ಟಿನಲ್ಲಿ ಸರ್ಜಿ ಫೌಂಡೇಷನ್ ಮತ್ತು ಎಸ್.ಎಮ್.ಎಸ್.ಎಸ್.ಎಸ್. ಸಂಸ್ಥೆಯ ವತಿಯಿಂದ ಈ ದಿನ ನೀಡುತ್ತಿರುವ ನೋಟ್ ಪುಸ್ತಕಗಳು ಸರಿಯಾದ ರೀತಿಯಲ್ಲಿ ಸದ್ಭಳಕೆಯಾಗಿ ತಮ್ಮ ಶಿಕ್ಷಣದ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಎಸ್.ಎಮ್.ಎಸ್.ಎಸ್. ಸಂಸ್ಥೆಯು ಅನ್ನದಾನ, ವಿದ್ಯಾದಾನ, ಮಹಿಳಾ ಸಬಲೀಕರಣ ಯೋಜನೆ, ಜನ ಸಾಮಾನ್ಯರಿಗಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳನ್ನು ಹಲವಾರು ವರ್ಷಗಳಿಂದ ಅಭೂತಪೂರ್ವ ಕಾರ್ಯಗಳನ್ನು ಮಾಡುತ್ತಿದೆ. ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಗಳು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿ ಎಂದರು.
ಈ ಕಾರ್ಯಕ್ರಮದಲ್ಲಿ ಉದ್ಯಮಿ ಅನಿಲ್ ಕುಮಾರ್, ಸೀಗೆಹಟ್ಟಿ ಶಾಲೆಯ ಮುಖ್ಯಶಿಕ್ಷಕಿ ಗಂಗಮ್ಮ, ಹರಕೆರೆ ಶಾಲೆಯ ಮುಖ್ಯೋಫಾಧ್ಯಾಯ ವೀರಪ್ಪ ಸೊಂಡೂರು, ಶಾಲಾ ಶಿಕ್ಷಕರು, ಮಕ್ಕಳು, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರುಗಳು, ಸಂಸ್ಥೆಯ ಸಂಯೋಜಕ ಜಗದೀಶ್, ಕಾರ್ಯಕರ್ತರಾದ ವತ್ಸಲ ಉಪಸ್ಥಿತರಿದ್ದರು ಹಾಗೂ ನಗರದ ಸ್ತ್ರೀ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















