ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಹಲವು ಬಡಾವಣೆಗಳಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಏರ್ಪಟ್ಟಿರುವ ಗುಂಡಿಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಕಂಟಕ ಎದುರಾಗಿದೆ.
ಪ್ರಮುಖ ರಸ್ತೆಗಳಾದ ಜೈಲ್ ರಸ್ತೆ, ಗಾಂಧಿನಗರ ಮುಖ್ಯರಸ್ತೆ, ಕುವೆಂಪು ರಸ್ತೆ, ದುರ್ಗಿಗುಡಿ, ಸವಾರ್ ಲೈನ್ ರಸ್ತೆ, ರವೀಂದ್ರನಗರ, ವಿನೋಬನಗರಕ್ಕೆ ತೆರಳುವ 100 ಅಡಿ ರಸ್ತೆ, ಶರಾವತಿ ನಗರ ಮುಖ್ಯ ರಸ್ತೆ, ಗಾಂಧಿಬಜಾರ್, ಎಂಕೆಕೆ ರಸ್ತೆಗಳ ಬಳಿ ಕಾಮಗಾರಿಗಾಗಿ ರಸ್ತೆ ಅಗೆದು ಗುಂಡಿಗಳು ಏರ್ಪಟ್ಟಿವೆ. ಆದರೆ, ಕಾಮಗಾರಿ ಮುಗಿದರೂ ಸದರಿ ರಸ್ತೆಗಳ ಗುಂಡಿಗಳನ್ನು ಮುಚ್ಚದೆ, ಹಾಗೆ ಬಿಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕಾರು, ದ್ವಿ ಚಕ್ರವಾಹನ ಸವಾರರು ಅಷ್ಟೇ ಅಲ್ಲದೆ ಪಾದಚಾರಿಗಳಿಗೂ ಓಡಾಡಲೂ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಕೆಲವೆಡೆ ಗುಂಡಿಗಳು ಸಾಕಷ್ಟು ಆಳದಿಂದ ಕೂಡಿದ್ದು, ಜೀವಕ್ಕೆ ಅಪಾಯ ತಂದೊಡ್ಡುವ ಲಕ್ಷಣವಿದೆ. ಕುಟುಂಬ ಸಮೇತ ಸಣ್ಣಮಕ್ಕಳ ಜತೆ ದ್ವಿಚಕ್ರ ವಾಹನ ಸವಾರರು ಬಂದರೆ, ನಿಯಂತ್ರಣ ತಪ್ಪಿದಲ್ಲಿ ಅವಘಡ ಸಂಭವಿಸುವುದು ಖಚಿತ.
ಇನ್ನಾದರೂ ಪಾಲಿಕೆ ಆಡಳಿತ, ಸಂಬಂಧಪಟ್ಟವರು ಇತ್ತ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂಬುದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post