ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀವ್ರ ಕೂತೂಹಲ ಮೂಡಿಸಿರುವ ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಚುನಾವಣೆ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮತಗಟ್ಟೆ ಸುತ್ತಮುತ್ತಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದ್ದು, ಒಬ್ಬೊಬ್ಬರೇ ಬಂದು ಮತದಾನ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದ್ದು, ಮುಂಜಾನೆ ಮತದಾರರ ಸಂಖ್ಯೆ ವಿರಳವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮತದಾನ ಪ್ರಕ್ರಿಯೆ ಚುರುಕುಗೊಳ್ಳಲಿದೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 728886 ಪುರುಷ, 743713 ಮಹಿಳಾ, 32 ಇತರೆ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 1473327 ಮತದಾರರಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ 1775 + 07 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2050 ಪಿಆರ್ಓ, 2050 ಎಪಿಆರ್ಓ, 4100 ಪಿಓ ಸೇರಿದಂತೆ ಒಟ್ಟು 8200 ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೂ 83 ಮೈಕ್ರೋ ಅಬ್ಸರ್ವರ್ಸ್ಗಳನ್ನು ನೇಮಕ ಮಾಡಲಾಗಿದೆ.
ಇಬ್ಬರು ಅಧಿಕಾರಿಗಳ ಅಮಾನತು
ವಿಧಾನಸಭಾ ಚುನಾವಣೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪಾನಮತ್ತರಾಗಿ ಬಂದ ಆರೋಪ ಹಿನ್ನೆಲೆ ರಮೇಶ್ ಮತ್ತು ಎಂ.ಬಿ. ಮಾಲತೇಶ್ ಎಂಬವರನ್ನು ಕರ್ತವ್ಯ ಲೋಪ ವಿಚಾರದಲ್ಲಿ ಅಮಾನತು ಮಾಡಲಾಗಿದೆ.
ಎಚ್.ಎಸ್.ರುದ್ರಪ್ಪ ಪಿಯು ಕಾಲೇಜಿನಲ್ಲಿ ಮಂಗಳವಾರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ನಡೆಯುತ್ತಿತ್ತು. ಈ ವೇಳೆ ಗ್ರಾಮಾಂತರ ಭಾಗದ ಮತಗಟ್ಟೆಗಳಿಗೆ ಮತ ಯಂತ್ರಗಳನ್ನು ಸಿಬ್ಬಂದಿ ಕೊಂಡೊಯ್ಯಬೇಕಾಗಿತ್ತು.
ಈ ವೇಳೆ ರಮೇಶ್ ಮತ್ತು ಎಂ.ಬಿ. ಮಾಲತೇಶ್ ಪಾನಮತ್ತರಾಗಿ ಬಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ ಈ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post