ಶಿವಮೊಗ್ಗ: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅನಗತ್ಯವಾಗಿ ವಿಳಂಬವಾಗಿ ಮಾಡದೆ ನಿಗದಿತ ಸಮಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.
ಕಾನೂನು ಚೌಕಟ್ಟಿನೊಳಗೆ ವಿಲೇವಾರಿ ಮಾಡಬಹುದಾದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಇಲ್ಲದಿದ್ದರೆ ಮಾಡಲು ಸಾಧ್ಯವಿಲ್ಲ ಎಂದು ಷರಾ ಬರೆದು ಕಡತವನ್ನು ಮುಕ್ತಾಯಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ನೀತಿಯನ್ನು ಅನುಸರಿಸಬಾರದು. ಸಕಾಲ ಯೋಜನೆ ಅಡಿ ಜಿಲ್ಲೆಯ ರ್ಯಾಂಕಿಂಗ್ ಉತ್ತಮಪಡಿಸಬೇಕು. ಸಕಾಲ ಯೋಜನೆಯಡಿ ನಿಗದಿತ ಸಮಯದ ಒಳಗಾಗಿ ಅರ್ಜಿ ವಿಲೇವಾರಿ ಮಾಡಲು ವಿಫಲರಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ತಿಂಗಳು ಮುಖ್ಯಮಂತ್ರಿ ಅವರು ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಸೂಚಿಸಿರುವಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳ ಅನುಷ್ಟಾನ ಚುರುಕುಗೊಳಿಸಬೇಕು. ಗಂಗಾಕಲ್ಯಾಣ ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗುತ್ತಿಲ್ಲ. ವಿವಿಧ ನಿಗಮಗಳು ಇದುವರೆಗೆ ಕೊರೆದಿರುವ ಬೋರ್ವೆಲ್ಗಳ ಸಂಖ್ಯೆ, ವಿದ್ಯುದ್ದೀಕರಣಕ್ಕೆ ಬಾಕಿ ಇರುವ ಪ್ರಕರಣಗಳು, ವಿಳಂಬಕ್ಕೆ ಕಾರಣ ಕುರಿತಾದ ಸಮಗ್ರ ಮಾಹಿತಿಯನ್ನು ಒಂದು ವಾರದ ಒಳಗಾಗಿ ಸಲ್ಲಿಸಬೇಕು. ಈ ಕುರಿತು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ, ಪರಿಹಾರ ವಿತರಣೆ ಕಾರ್ಯ, ಬೆಳೆ ವಿಮೆ ವಿತರಣೆಯಲ್ಲಿನ ವಿಳಂಬವನ್ನು ಸರಿಪಡಿಸಬೇಕು. ಕಂದಾಯ ಅದಾಲತ್ ಇನ್ನೂ 6ತಿಂಗಳ ಕಾಲ ವಿಸ್ತರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 11ಸಾವಿರ ಪ್ರಕರಣಗಳು ಬಾಕಿಯಿವೆ. ಅವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. 94ಸಿ ಮತ್ತು 94ಸಿಸಿ ಪ್ರಕರಣಗಳಲ್ಲಿ ಅರ್ಜಿಯನ್ನು ವಿಳಂಬ ಮಾಡದೆ ಅರ್ಹತೆ ಆಧಾರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ 700 ಶಾಲೆ, ಅಂಗನವಾಡಿಗಳಲ್ಲಿ ತೆಂಗು, ನುಗ್ಗೆ, ಪಪ್ಪಾಯಿ, ಸಪೋಟ, ಬಾಳೆ ಗಿಡಗಳನ್ನು ಹಾಗೂ ತರಕಾರಿ ಬೀಜಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್ ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಸೇರಿದಂತೆ ಎಲ್ಲಾ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Discussion about this post