ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್, ಶ್ರೀವರಸಿದ್ಧಿ ವಿನಾಯಕ ಹಾಗೂ ಶ್ರೀ ಶನೈಶ್ಚರ ದೇವಾಲಯ ಅರ್ಚಕ ವೃಂದ ಹಾಗೂ ಧರ್ಮವರ್ಧಿನಿ ಇವರ ಸಂಯುಕ್ತಾಶ್ರಯದಲ್ಲಿ ಜು.4ರಿಂದ 9ರವರೆಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ಯಜುಃಸಂಹಿತಾ ಯಾಗ, ಶ್ರೀ ಶನೈಶ್ಚರ ದೇವರ ಗರ್ಭಗುಡಿಗೆ ಕವಚ ಸಮರ್ಪಣೆ, 2022ನೇ ಸಾಲಿನ ಶ್ರೀ ವೇದನಾರಾಯಣಾನುಗ್ರಹ ಪ್ರಶಸ್ತಿ ಪ್ರಧಾನ, ಹಾಗೂ ಧಾರ್ಮಿಕ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶನೈಶ್ಚರ ದೇವಾಲಯದ ಪ್ರಧಾನ ಅರ್ಚಕ ವಿನಾಯಕ ಬಾಯರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಧರ್ಮವು ಸದಾ ಜಯವನ್ನು ಹೊಂದಿ ಅಧರ್ಮವು ಪರಾಭವಗೊಳ್ಳಲಿ. ಎಲ್ಲಾ ಪ್ರಾಣಿಗಳು ಉತ್ತಮ ಭಾವಪೂರ್ಣವಾಗಿ ತಮ್ಮ ಮಿತಿಯಲ್ಲಿದ್ದು ಹಿತವನ್ನು ತರಲಿ. ಜಗತ್ತೆಲ್ಲಾ ಭಾಧಾರಹಿತವಾಗಿ ಸುಖ ಶಾಂತಿ ಸಮೃದ್ದವಾಗಲಿ. ದುಃಖರಹಿತವಾದ ಮಂಗಲಮಯವಾದ ಈ ಜಗತ್ತನ್ನು ನೋಡುವ ಭಾಗ್ಯ ನಮ್ಮದಾಗಲಿ ಎಂಬ ಸಂಕಲ್ಪದೊಂದಿಗೆ ಪ್ರತಿ ವರ್ಷವೂ ಒಂದೊಂದು ವೇದದ ಸಂಹಿತಾ ಯಾಗವನ್ನು ಭಕ್ತಾಧಿಗಳ ಸಹಕಾರದೊಂದಿಗೆ ನಡೆಯುತ್ತಿದ್ದು, ಈ ವರ್ಷ ಸಹ ಶ್ರೀ ಯಜುಃಸಂಹಿತಾ ಯಾಗ ನಡೆಯಲಿದೆ ಎಂದರು.
ಜು.9ರ ಶನಿವಾರ ಬೆಳಿಗ್ಗೆ 9.30ಕ್ಕೆ ಹರಿಹರಪುರ ಶ್ರೀಮಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿ ನೃಸಿಂಹ ಪೀಠಾಧೀಶ್ವರರಾದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ, ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಪೂರ್ಣಕುಂಭ ಸ್ವಾಗತ, ಮಹಾಸ್ವಾಮಿಗಳವರಿಂದ ಶ್ರೀಶನೈಶ್ಚರ ದೇವರ ಗರ್ಭಗುಡಿಗೆ ಕವಚ ಸಮರ್ಪಣೆ, ನಂತರ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಶ್ರೀ ಯಜುಃಸಂಹಿತಾ ಯಾಗದ ಮಹಾ ಪೂರ್ಣಾಹುತಿ ಹಾಗೂ 10 ಗಂಟೆಗೆ ನಗರದ ಭಜನಾ ಪರಿಷತ್ನ 500ಕ್ಕೂ ಹೆಚ್ಚು ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮವೂ ನಡೆಯಲಿದೆ.
10.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ರವೀಂದ್ರನಗರ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನದ ಪ್ರಧಾನ ಅರ್ಚಕರು, ಶಿವಮೊಗ್ಗ ನಗರದ 100ಕ್ಕೂ ಹೆಚ್ಚು ಭಜನಾ ಮಂಡಳಿಗಳ ಒಕ್ಕೂಟ-ಭಜನಾ ಪರಿಷತ್ನ ಅಧ್ಯಕ್ಷರಾದ ವೇ ಬ್ರ ಅ.ಪ. ರಾಮಭಟ್ ರವರಿಗೆ 2022ನೇ ಸಾಲಿನ ಶ್ರೀ ವೇದನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
Also read: ಸಮಗ್ರ ಪರಿಷ್ಕರಣೆ ನಂತರ ಪಠ್ಯಪುಸ್ತಕ ವಿತರಿಸಿ: ಸಿದ್ಧರಾಮಯ್ಯ ಆಗ್ರಹ
ಜು.4 ರಿಂದ 9ರವರೆಗೆ ಪ್ರತಿದಿನ ಸಂಜೆ 5.30ರಿಂದ 6.30ರವರೆಗೆ ಭಜನೋತ್ಸವ – ನಗರದ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ.
ಜು.4ರಂದು ಸಂಜೆ 6.30ಕ್ಕೆ ಖ್ಯಾತ ವಿದ್ವಾಂಸರಾದ ಡಾ. ವೀಣಾ ಬನ್ನಂಜೆಯವರು ಶ್ರೀ ಕೃಷ್ಣ ಜೀವನ ದರ್ಪಣ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವ ಮೂಲಕ ಧಾರ್ಮಿಕ ಉಪನ್ಯಾಸಕ್ಕೆ ಚಾಲನೆ ನೀಡಲಿದ್ದಾರೆ. ಜು.5ರಿಂದ ಪ್ರತಿ ದಿನ ಸಂಜೆ 6.30ರಿಂದ ಶುಭ ಮಂಗಳ ಸಮುದಾಯದಲ್ಲಿ ವಿದ್ವಾನ್ ಜಿ.ಎಸ್. ನಟೇಶ್ ಅವರಿಂದ ‘ಕಗ್ಗ ಬೀರಿದ ಜ್ಞಾನದ ಬೆಳಕು’ ಉಪನ್ಯಾಸ ನಡೆಯಲಿದೆ ಎಂದು ವಿನಾಯಕ ಬಾಯರಿ ತಿಳಿಸಿದರು.
ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ನ ಮುಖ್ಯಸ್ಥ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ವೇದಮೂರ್ತಿ ಅ.ಪ. ರಾಮಭಟ್ಟರು ಕಳೆದ ಹಲವು ವರ್ಷಗಳಿಂದ ವೇದ, ಸಂಸ್ಕೃತ, ಜ್ಯೋತಿಷ್ಯ, ಸಾಹಿತ್ಯ, ಕಲೆ, ಸಂಗೀತ, ಯಕ್ಷಗಾನ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಇನ್ನೂ ಹಲವು ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗೌರವಿಸಿ `ಶ್ರೀ ವೇದನಾರಾಯಣಾನುಗ್ರಹ’ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿದ್ದು, ಇದುವರೆಗೂ ಜಿಲ್ಲೆಯ ಹಾಗೂ ರಾಜ್ಯದ ಅನೇಕ ವೇದ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಪದಾಧಿಕಾರಿಗಳಾದ ವಿ. ರಾಜು, ಸಾ.ನ. ಮೂರ್ತಿ, ವೆಂಕಟೇಶ್, ರವೀಂದ್ರ ನಗರದ ಗಣಪತಿ ದೇವಸ್ಥಾನದ ಟಿ.ಆರ್. ಅಶ್ವಥ ನಾರಾಯಣ್, ಡಾ.ಪಿ. ನಾರಾಯಣ್, ರಮೇಶ್ ಬಾಬು ಜಾದವ್, ಶಬರೀಶ್ ಕಣ್ಣನ್, ದತ್ತಾತ್ರಿ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post