ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ ಮತ್ತು ಪುಷ್ಪಕೃಷಿಯನ್ನು ಚಾಂಪಿಯನ್ ಸೇವಾ ವಲಯಗಳಲ್ಲಿ ಒಂದು ಎಂದು ಸರ್ಕಾರ ಗುರುತಿಸಿದ್ದು, ಈ ವಲಯದ ಈ ಕುರಿತು ಹೆಚ್ಚಿನ ಚರ್ಚೆ, ಅಧ್ಯಯನ ನಡೆಸಿ, ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕೆಂದು ಐಎಸ್ಓಹೆಚ್ ನ ಅಧ್ಯಕ್ಷರು ಹಾಗೂ ಹರಿಯಾಣದ ಎಂಹೆಚ್ಯು ಕುಲಪತಿಗಳಾದ ಡಾ.ಎಸ್.ಕೆ. ಮಲ್ಹೋತ್ರಾ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, #Keladi Shivappanayaka Agricultural University ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘ, ಐಸಿಎಆರ್-ಐಎಆರ್ಐ ನವದೆಹಲಿ, ಐಸಿಎಆರ್-ಪುಷ್ಪ ಕೃಷಿ ಸಂಶೋಧನಾ ನಿರ್ದೇಶನಾಲಯ ಪುಣೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಐಸಿಎಆರ್-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಈ ಸಂಸ್ಥೆಗಳ ಸಹಯೋಗದೊಂದಿಗೆ ಮಾರ್ಚ್ 23 ರಿಂದ 25 ರವರೆಗೆ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲದ ಆವರಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಕಸಿತ ಭಾರತ@2047ರ ಪುಷ್ಪ ಕೃಷಿ ಮತ್ತು ಭೂದೃಶ್ಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2047ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ನೋಟ ಹೊಂದಿದೆ. ಆದರೆ ಇದನ್ನು ಸಾಧಿಸಲು ಹವಾಮಾನ ಬದಲಾವಣೆಯಂತಹ ಹಲವಾರು ಸವಾಲುಗಳಿವೆ. ಮಣ್ಣಿನಲ್ಲಿನ ಇಂಗಾಲದ ಡೈ ಆಕ್ಸೈಡ್ ಪ್ರಮಾಣ, ಹಸಿರು ಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸುವುದು ಹೇಗೆಂದು ಚಿಂತಿಸಬೇಕಿದೆ. ಹಸಿರುಮನೆ ಅನಿಲಗಳನ್ನು ಶೇ.15 ರಿಂದ ಶೇ.5 ಕ್ಕೆ ಇಳಿಸಬೇಕಿದೆ. ಸುಸ್ಥಿರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಈ ಪರಿಣಾಮಗಳನ್ನೆಲ್ಲ ತಗ್ಗಿಸಬೇಕಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಶ್ರಮಿಸಬೇಕಿದೆ. ಕೃಷಿಯಲ್ಲಿ ಆಧುನಿಕತೆ, ಎಐ ಬಳಕೆ ಮತ್ತು ಯಂತ್ರೋಪಕರಣಗಳನ್ನು ಹೆಚ್ಚಿಸಬೇಕಿದೆ ಎಂದರು.
ರಸ್ತೆಗಳಲ್ಲಿ, ಅವೆನ್ಯು, ಬ್ಯಾಕ್ಯಾರ್ಡ್ಗಳಲ್ಲಿ ಬೆಳೆಯಲಾಗುತ್ತಿರುವ ಈ ಪುಷ್ಪಗಳು, ಅಲಂಕಾರಿಕ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದು ಇದನ್ನು ಗುರುತಿಸಲಾಗುತ್ತಿಲ್ಲ. ಇದನ್ನು ಗುರುತಿಸಿ ಈ ಕುರಿತು ಅಧ್ಯಯನ ಮಾಡಬೇಕಿದೆ. ನಾವು ಸಮ್ಮೇಳನದಲ್ಲಿ ಇಂತಹ ವಿಷಯಗಳನ್ನು ಚರ್ಚಿಸಿ, ಅದನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮಾಡುತ್ತೇವೆ. ಇಂತಹ ಸಮ್ಮೇಳನದ ಮೂಲಕವೇ ಅನೇಕ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ವರ್ಟಿಕಲ್ ಗಾರ್ಡನಿಂಗ್, ಹೈಡ್ರೋಫೋನಿಕ್ಸ್ಗಳನ್ನು ಮಾರ್ಗಸೂಚಿಗಳಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದರು.
1919 ರಲ್ಲಿ ಇಂಡಿಯನ್ ಸೊಸೈಟಿ ಆಫ್ ಆರ್ನಮೆಂಟಲ್ ಹಾರ್ಟಿಕಲ್ಚರ್ ರಚನೆಯಾಗಿದ್ದು, ಅಲಂಕಾರಿಕ ಸಸ್ಯಗಳು ಮತ್ತು ಪುಷ್ಪಕೃಷಿ ಕುರಿತು ಭಾಗೀದಾರರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಅರ್ಬನ್, ಪೆರಿ ಅರ್ಬನ್ ತೋಟಗಾರಿಕೆ, ಗ್ರಾಮೀಣ ತೋಟಗಾರಿಕೆ, ಬಲ್ಬಸ್ ಹೂವು ಬೆಳೆ, ಬಯೋ ಡೈವರ್ಸಿಟಿ ಸೇರಿದಂತೆ ಹಲವಾರು ತೋಟಗಾರಿಕಾ ವಿಷಯಗಳಿಗೆ ಸಂಬAಧಿಸಿದAತೆ ಬೇರೆ ಬೇರೆ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಲಾಗಿದ್ದು, ಪುಷ್ಪಕೃಷಿ ಮತ್ತು ಭೂದೃಶ್ಯ ಕುರಿತು ಇಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಿ, ಅತ್ಯುತ್ತಮವಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೈಎಸ್ ಆರ್ ತೋಟಗಾರಿಕಾ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ.ಟಿ.ಜಾನಕಿರಾಮ್ ಮಾತನಾಡಿ, ದೇಶದಲ್ಲಿ 371 ಮಿಲಿಯನ್ ಟನ್ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ದಿ, ಸರ್ಕಾರದ ನಿಯಮಗಳು, ರೈತರ ಭಾಗವಹಿಸುವಿಕೆ, ರೈತ ಕೇಂದ್ರಗಳು ಇವರೆಲ್ಲರ ಸಹಕಾರದಿಂದ ಈ ಅಭಿವೃದ್ದಿ ಸಾಧಿಸಲಾಗಿದೆ.
ಪುಷ್ಪ ಕೃಷಿಯು ಕೃಷಿ ವಿದ್ಯಾರ್ಥಿಗಳ ದೃಷ್ಟಿಯಿಂದ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಕೌಶಲ್ಯ ಅಭಿವೃದ್ಧಿಗೆ, ಹೊಸ ಸ್ಟಾರ್ಟ್ ಅಪ್ಗಳ ಆರಂಭಕ್ಕೆ ಅನುಕೂಲಕರವಾಗಿದೆ. ಸ್ವಂತ ಉದ್ಯಮ ಒದಗಿಸುವ ಜೊತೆ ಇತರರಿಗೂ ಉದ್ಯೋಗ ನೀಡುತ್ತಿದೆ. ಪುಷ್ಪಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ ಬಳಕೆ ಕೂಡ ಬಹಳ ಮುಖ್ಯವಾಗಿದ್ದು, ಇದರಿಂದ ಪುಷ್ಪ ಕೃಷಿ ಮತ್ತು ಉದ್ಯಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಬಹುದು ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ಸು ಸಾಧಿಸುತ್ತಿದೆ. ವಿಶ್ವವಿದ್ಯಾಲಯ ಅಭಿವೃದ್ದಿಪಡಿಸಿರುವ ಸಹ್ಯಾದ್ರಿ ಕೆಂಪುಮುಕ್ತಿ ಅಕ್ಕಿ ತಳಿ ಬಹಳ ಪ್ರಸಿದ್ದಿಯಾಗಿದ್ದು ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಬಿ. ಹೇಮ್ಲಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪುಷ್ಪಕೃಷಿಯು ಜಾಗತಿಕವಾಗಿ ಮಲ್ಟಿ ಬಿಲಿಯನ್ ಡಾಲರ್ ಉದ್ಯಮವಾಗಿ ಹೊರಹೊಮ್ಮಿದ್ದು, ಇದರಿಂದ 55 ಬಿಲಿಯನ್ ಡಾಲರ್ ಆದಾಯ ಬರುತ್ತಿದೆ. 10 ಮಿಲಿಯನ್ ಜನರಿಗೆ ಉದ್ಯೋಗ ಒದಗಿದೆ. ಭಾರತ ದೇಶ ಪುಷ್ಪಕೃಷಿಯಲ್ಲಿ ಚೀನಾದ ನಂತರ ಎರಡನೇ ದೊಡ್ಡ ದೇಶವಾಗಿದೆ. 2.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪಕೃಷಿ ಮಾಡಲಾಗುತ್ತಿದೆ.
ಹಲವಾರು ಕಮರ್ಷಿಯಲ್ ಪ್ಲಾಂಟ್ಗಳನ್ನು ಬೆಳೆಯಲಾಗುತ್ತಿದ್ದು ಪುಷ್ಪಕೃಷಿಯಲ್ಲಿ ದೇಶವು ಸುಮಾರು ರೂ. 2000 ಕೋಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ಹಲವು ಜಿಲ್ಲೆಗಳು ತಮ್ಮದೇ ಆದ ವಿಶೇಷ ಪುಷ್ಪಕೃಷಿ ವಲಯಗಳನ್ನು ಅಭಿವೃದ್ದಿಪಡಿಸಿವೆ. ಮಲ್ಲಿಗೆ ಕೃಷಿ ಹಲವರಿಗೆ ಉದ್ಯೋಗ ನೀಡಿದ್ದು ಹೂವಿನ ಹಡಗಲಿ ಮಲ್ಲಿಗೆ ಮೈಸೂರು, ಉಡುಪಿ, ಮಧುರೈ ಮಲ್ಲಿಗೆ ಸೇರಿದಂತೆ ಹಲವು ಮಲ್ಲಿಗೆ ಬೆಳೆಗಳು ಜಿಐ ಟ್ಯಾಗ್ ಪಡೆದಿವೆ. ಕರ್ನಾಟಕವು ಭಾರತದ ವಾಣಿಜ್ಯ ಪುಷ್ಪ ಕೃಷಿಯ ರಾಜಧಾನಿ ಎಂದೇ ಹೆಸರಾಗಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಹೂವುಗಳನ್ನು ವೈಜ್ಞಾನಿಕವಾಗಿ ಬೆಳೆದು ರಫ್ತು ಮಾಡುವ ಬೃಹತ್ ಉದ್ಯಮವಾಗಿ ಬೆಳೆದಿದೆ ಎಂದು ತಿಳಿಸಿದರು.
ಐಸಿಎಆರ್-ಐಎಆರ್ಐ ನಿಕಟಪೂರ್ವ ಡೀನ್ ಮತ್ತು ಮುಖ್ಯಸ್ಥ (ಎಫ್ಎಲ್ಎಸ್)ರಾದ ಡಾ.ಎಸ್.ಎಸ್.ಸಿಂಧು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ.ಜಗದೀಶ ಮಾತನಾಡಿದರು.
ಸಮ್ಮೇಳನದಲ್ಲಿ ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘದ ವತಿಯಿಂದ 5 ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಫೆಲೋಷಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಬ್ಬರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಡಾಕ್ಟೋರಲ್ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಹಾಗೂ 4 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ಇಬ್ಬರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಮ್ಮೇಳನದಲ್ಲಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವರಾಜ್, ಡಾ.ಬಿ.ಕೆ ಕುಮಾರಸ್ವಾಮಿ, ಹೆಚ್ ಡಿ ದೇವಿಕುಮಾರ್, ಜೆ.ಜಿ.ಕಾವೇರಿಯಪ್ಪ, ಹೆಚ್ ಎಸ್ ಶಶಾಂಕ್, ಕೃಷಿ ವಿರ್ಸವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು, ವಿಜ್ಞಾನಿಗಳು, ಕಾರ್ಪೂರೇಟರ್ ವಲಯದ ತಜ್ಞರು, ಪ್ರಗತಿಪರ ರೈತರು, ಉದ್ದಿಮೆದಾರರು, ಮಾರುಕಟ್ಟೆ ತಜ್ಞರು ಹಾಗೂ ಪುಷ್ಪ ಕೃಷಿ ರೈತರು, ಆಸಕ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















