ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕ ತಂತ್ರಜ್ಞಾನಗಳ ಪರಿಣಾಮಕಾರಿ ಅನುಷ್ಟಾನಗೊಳಿಸಲು 5ಜಿ ಪೂರಕವಾಗಿದ್ದು ತಂತ್ರಜ್ಞಾನ ಕ್ರಾಂತಿಯಾಗಲಿದೆ ಎಂದು ಸಿಸ್ಕೊ ಕಂಪನಿ ಉಪಾಧ್ಯಕ್ಷರಾದ ಪಲ್ಲವಿ ಅರೋರ ಅಭಿಪ್ರಾಯಪಟ್ಟರು.

ಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಹಾಗೂ ಐಇಟಿಇ ಮತ್ತು ಐಇಇಇ ವಿದ್ಯಾರ್ಥಿ ಘಟಕ ಸಂಯುಕ್ತವಾಗಿ ಏರ್ಪಡಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ‘ಮಿಸ್ಟಿರಿಯೊ-2.0’ ಕಾರ್ಯಕ್ರಮ ಆನ್ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ದಿಮತ್ತೆಯ ಮೂಲಕ ಕಾರು ಬೈಕುಗಳ ಸ್ವಯಂ ಚಾಲನೆ ಮತ್ತು ದತ್ತಾಂಶಗಳ ಸ್ವಯಂ ನಿರ್ವಹಣೆಯಂತಹ ಆಧುನಿಕ ಆವಿಷ್ಕಾರಗಳು ರೂಪಗೊಳ್ಳುತ್ತಿದ್ದು ಪರಿಣಾಮಕಾರಿ ನಿರ್ವಹಣೆಗೆ 5ಜಿ ನೆಟ್ವರ್ಕ್ನಿಂದ ಸಾಧ್ಯವಾಗಲಿದೆ. ನೆಟ್ವರ್ಕ್, ಸಂಗ್ರಹಣಾ ಸಾಮರ್ಥ್ಯ, ಕಾಂಪ್ಯೂಟಿಂಗ್, ಭದ್ರತೆ ಇವುಗಳು ಆಧುನಿಕ ಆವಿಷ್ಕಾರಗಳ ಪ್ರಮುಖ ಸ್ತಂಬಗಳಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮೂಲ ಪ್ರೊಗ್ರಾಮಿಂಗ್ ಕೌಶಲ್ಯಗಳ ಜೊತೆಗೆ ತಂತ್ರಜ್ಞಾನಗಳ ಬೆಳವಣಿಗೆಯಲ್ಲಿ ಸ್ಥಾನ ಪಡೆದಿರುವ ತ್ರಾಂತಿಕ ಸ್ತಂಬಗಳ ಕುರಿತು ಹೆಚ್ಚು ಅಧ್ಯಯನ ನಡೆಸಲಿ. ಹಲವು ದಶಕಗಳ ಹಿಂದೆ ಸಾಂಕ್ರಾಮಿಕ ರೋಗಗಳು ನಿರ್ಮಾಣವಾದಾಗ ಈಗಿನಷ್ಟು ತಾಂತ್ರಿಕ ಸೌಲಭ್ಯಗಳು ಲಭ್ಯವಿರಲಿಲ್ಲ. ಅದರೇ ಪ್ರಸ್ತುತ ವರ್ಚುವಲ್ ಪ್ರಂಪಚದಲ್ಲಾದ ವೇಗದ ಪ್ರಗತಿ ಮನೆಯಿಂದಲೇ ಕಾರ್ಯನಿರ್ವಹಿಸಲು, ಪರಸ್ಪರ ಸಂವಹನ ನಡೆಸಲು ಸಾಧ್ಯವಾಯಿತು. ಕಲಿಕೆಯ ನಿಜವಾದ ಪ್ರಾರಂಭ ಶುರುವಾಗುವುದು ಎಂಜಿನಿಯರಿಂಗ್ ನಂತರ. ಪ್ರತಿದಿನವು ಹೊಸತನದ ಕುರಿತು ಕಲಿಯುವ ಮತ್ತು ಅವಲೋಕಿಸುವ ಗುಣಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಿ, ಆಗ ಮಾತ್ರ ಹೆಚ್ಚು ಉನ್ನತಿಯೆಡೆಗೆ ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ವಿಷಯಾಧಾರಿತ ಶಿಕ್ಷಣ ಸದಾ ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತದೆ. ಅಂತಹ ಕಲಿಕಾ ಪ್ರಕ್ರಿಯೆಯು ಹೆಚ್ಚು ಮೌಲ್ಯಮಾಪನಕ್ಕೆ ಒಳಪಟ್ಟಾಗ ಉತ್ತಮ ಕಲಿಕೆ ಸಾಧ್ಯವಾಗಲಿದೆ. ಇಂತಹ ಮೌಲ್ಯಮಾಪನ ಕಾರ್ಯ ನಡೆಸಲು ಕಲಿಕಾ ಕಾರ್ಯಾಗಾರ ಪೂರಕ ವೇದಿಕೆಯಾಗಲಿದೆ. ನಾವು ಕಲಿಯುತ್ತಿರುವ ತಾಂತ್ರಿಕ ವಿಷಯಗಳು ಪ್ರಸ್ತುತ ಅನುಷ್ಟಾನಗೊಂಡ ತಂತ್ರಜ್ಞಾನಗಳೊಂದಿಗೆ ಸಾಮ್ಯಥೆ ಮಾಡಿಕೊಳ್ಳಿ. ಇದರಿಂದ ನಾವಿನ್ಯಯುತ ಚಿಂತನೆಗಳು ರೂಡಿಸಿಕೊಳ್ಳಲು ಪೂರಕವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್. ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಮಂಜುನಾಥ.ಪಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ ಮಾತನಾಡಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಕೊಡಿಂಗ್, ಸರ್ಕ್ಯೂಟ್, ರೊಬೊಟ್, ಆರ್ಡಿನೊ ಕುರಿತ ಮೂಲ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















