ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಲ ಮಿಂಚಿಲ್ಲ, ಈಗಲೂ ಬಿಜೆಪಿಯೊಂದಿಗೆ ಸೇರಿಕೊಳ್ಳಿ ಎಂದು ಹೇಳುವ ಬಿ.ವೈ. ವಿಜಯೇಂದ್ರ ನನಗೆ ಹೇಳುವ ಬದಲು ಚುನಾವಣೆಯಿಂದ ಹಿಂದೆ ಸರಿಯುವಂತೆ ನಿಮ್ಮ ಅಣ್ಣನಿಗೆ ಹೇಳುವ ತಾಕತ್ ಇಲ್ಲವಾ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ತಿರುಗೇಟು ನೀಡಿದ್ದಾರೆ.
ಈಶ್ವರಪ್ಪ ಅವರು ಈಗಲೂ ಬಿಜೆಪಿಗೆ ಸೇರಿಕೊಳ್ಳಲಿ ಎಂದು ಕರೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #BYVijayendra ಅವರ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, ನನಗೆ ಹೇಳುವ ಬದಲು ನಿಮ್ಮ ಅಣ್ಣನಿಗೆ ಹೇಳು. ಚುನಾವಣೆಯಿಂದ ನಿಮ್ಮ ಅಣ್ಣ ಹಿಂದೆ ಸರಿಯಲಿ, ನೀನು ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡು ನೋಡೋಣ ಎಂದು ಏಕವಚನದಲ್ಲೇ ಸವಾಲು ಹಾಕಿದರು.
ನನಗೆ ಯಾಕೆ ಹಿಂದೆ ಸರಿಯಲು ಹೇಳುತ್ತೀಯಾ? ಇದೇ ವಿಷಯವನ್ನು ನಿಮ್ಮ ಅಣ್ಣನಿಗೆ ಹೇಳುವ ತಾಕತ್ ಇಲ್ಲವಾ? ನಿಮ್ಮ ಅಣ್ಣನಿಗೆ ಚುನಾವಣೆಯಿಂದ ಹಿಂದೆ ಸರಿಯಲು ಹೇಳು? ನೀವು ರಾಜ್ಯಾಧ್ಯಕ್ಷ #StatePresident ಸ್ಥಾನ ಬಿಟ್ಟುಕೊಡು ನೋಡೋಣ ಎಂದರು.
ಆರು ತಿಂಗಳು ಕಾದು ಕಾಟ ಕೊಟ್ಟು ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿರಲ್ಲ. ಏನ್ ನೀವೇ ಗೂಟ ಹೊಡೆದುಕೊಂಡು ಇರಬೇಕಾ? ಬಿಜೆಪಿಯನ್ನು ಅನಂತಕುಮಾರ್, ನಾನು ಸೇರಿ ಬಹಳಷ್ಟು ಶ್ರಮದಿಂದ ಕಟ್ಟಲಾಗಿದೆ. ನಮ್ಮನ್ನೆಲ್ಲಾ ನಾಯಕರು ಎಂದು ಕರೆದು, ನಾವೇನು ಮನೆಯಲ್ಲಿ ಕುಳಿತಿರಬೇಕಾ? ನೀವು ಮಾತ್ರ ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.
ನಾನು ಸ್ಪರ್ಧೆ ಮಾಡಲು ನಿರ್ಧಾರ ಮಾಡಿಯಾಗಿದೆ. ರಣರಂಗಕ್ಕೆ ಇಳಿದಾಗಿದೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇನೆ. ಇನ್ನೂ ಒಂದು ತಿಂಗಳು ಸಮಯವಿದ್ದು, ಅಷ್ಟರಲ್ಲಿ ಗೆಲುವಿನ ಅಂತರವನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತೇವೆ ಎಂದರು.
ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ನನ್ನನ್ನು ಉಚ್ಛಾಟನೆ ಮಾಡಬಹುದು ಅಷ್ಟೆ. ನಾನು ಯಾವತ್ತೂ ಪಕ್ಷ ಬಿಟ್ಟು ಹೋಗಿಲ್ಲ. ಈಗಲೂ ಪಕ್ಷದಲ್ಲೇ ಇದ್ದೇನೆ. ಯಡಿಯೂರಪ್ಪ #BSYediyurappa ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದರು. ಜಗದೀಶ್ ಶೆಟ್ಟರ್ #JagadeeshShetter ಕಾಂಗ್ರೆಸ್’ಗೆ ಹೋಗಿ, ಚುನಾವಣೆಯಲ್ಲಿ ಸೋತು ಮತ್ತೆ ಬಿಜೆಪಿಗೆ ಬಂದರು. ಅವರಿಗೆ ಲೋಕಸಭಾ ಚುನಾವಣೆಯ ಟಿಕೇಟ್ ನೀಡಿದ್ದೀರಿ. ಹಾಗಾದರೆ, ನನ್ನನ್ನು ನಿರ್ಲಕ್ಷಿಸಲು ನಾನೇನು ಮಾಡಿದ್ದೆ ಎಂದು ಖಾರವಾಗಿ ಪ್ರಶ್ನಿಸಿದರು.
ಚುನಾವಣೆಯಲ್ಲಿ ನಾನು ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಟಿಕೇಟ್ ನೀಡುವುದು ನಾನೇ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















