ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜಕ್ಕೆ ನೀಡುವ ಉತ್ತಮ ಕೊಡುಗೆಯೇ ನಾವು ಕಲಿತ ಶಿಕ್ಷಣದ ಸಾರ್ಥಕತೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ಇಂದು ನಗರದ ಎಸ್.ಆರ್. ನಾಗಪ್ಪಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಬಿ.ಸಿ.ಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಟೆಕ್ನೊ ವಿಷನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕೆ ಮತ್ತು ವಿಚಾರಗಳ ಅಳವಡಿಕೆ ಶಿಕ್ಷಣದ ಎರಡು ಪ್ರಮುಖ ಉದ್ದೇಶಗಳು. ಉತ್ತಮ ಉದ್ಯೋಗವಕಾಶಗಳು ನಾವು ಕಲಿತ ಜ್ಞಾನ ಮತ್ತು ಕೌಶಲ್ಯತೆಯ ಬಳಕೆಯ ಆಧಾರದ ಮೇಲಿದೆ. ಕಂಪ್ಯೂಟರ್ ಅಪ್ಲಿಕೇಷನ್ ನಮ್ಮ ಪ್ರತಿಯೊಂದು ದೈನಂದಿನ ಬದುಕಿನ ಚಟುವಟಿಕೆಗಳಲ್ಲಿ ಅಳವಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಹೊಸತನದ ಚಿಂತನೆಗಳನ್ನು ಕಂಪ್ಯೂಟರ್ ಅಪ್ಲಿಕೇಷನ್ ವಿದ್ಯಾರ್ಥಿಗಳು ಮಾಡಬೇಕಿದೆ. ತರಗತಿಗಳು ಜ್ಞಾನದ ಏಕಮುಖ ವರ್ಗಾವಣೆಯಾಗಬಾರದು ಎಂದರು.

ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಚರ್ಚಿತ ವೇದಿಕೆಯಾಗಿ ರೂಪಗೊಳ್ಳಬೇಕು. ತರಗತಿಗೆ ಬರುವಾಗ ಅಂದಿನ ಚರ್ಚಿತ ಪಾಠದ ಕುರಿತು ಪೂರ್ವ ಸಿದ್ದತೆಯೊಂದಿಗೆ ಬನ್ನಿ. ಇದರಿಂದ ಕಲಿಕೆಯ ವಿಷಯಗಳ ಮೇಲೆ ಹೆಚ್ಚು ಹಿಡಿತ ಪಡೆಯಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಪೆಸಿಟ್ ಕಾಲೇಜಿನ ಉದ್ಯೋಗಾಧಿಕಾರಿ ಡಾ.ಪ್ರಸನ್ನ ಕುಮಾರ್.ಟಿ.ಎಂ, ಬಿಸಿಎ ವಿಭಾಗದ ಮುಖ್ಯಸ್ಥರಾದ ಹೆಚ್.ಎಸ್.ದತ್ತಾತ್ರಿ, ಕಾಲೇಜಿನ ಹಳೆಯ ವಿದ್ಯಾರ್ಥಿ ಹೆಚ್.ಜಿ.ರಾಕೇಶ್, ಉದ್ಯೋಗಾಧಿಕಾರಿ ಪ್ರದೀಪ್.ಜಿ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















