ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಕಾಂಗ್ರೆಸ್ ಪಾಪರ್ ಆಗಿದ್ದು ನೀರು ಗಂಟಿಗೆ ಸಂಬಳ ನೀಡದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿಬಿದ್ದ ರಸ್ತೆಗಳನ್ನು ರಿಪೇರಿ ಮಾಡಲಾಗದೆ ಉದ್ಯಮಿ ಕಿರಣ್ ಮುಜಮ್ದಾರ್ ಬೆಂಗಳೂರಿನ 15 ರಸ್ತೆಗಳ ಗುಂಡಿಯನ್ನು ತಮ್ಮ ಸಂಸ್ಥೆಯಿಂದ ಮುಚ್ಚುವುದಾಗಿ ಹೇಳಿದ್ದಾರೆ ಇದು ಗತಿಗೆಟ್ಟ ಸರಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿ, ಈ ಸರ್ಕಾರ ಲಜ್ಜೆಗೆಟ್ಟ ಸರ್ಕಾರವಾಗಿದ್ದು ಗುತ್ತಿಗೆದಾರರಿಗೆ 33,000 ಕೋಟಿ ರೂ. ಹಣ ಬಾಕಿ ಇಟ್ಟುಕೊಂಡಿದೆ. ಅನೇಕ ಗುತ್ತಿಗೆದಾರರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರು ಹಣ ಕೇಳಿದರೆ ರಾಜ್ಯದ ಮುಖ್ಯಮಂತ್ರಿ ಕೋರ್ಟಿಗೆ ಹೋಗಲಿ ಎಂದು ಹೇಳುತ್ತಿದ್ದಾರೆ. ಈ ನಿರ್ಲಜ್ಯ ಸರ್ಕಾರಕ್ಕೆ ಮಾನವೀಯತೆ ಇಲ್ಲ ಎಂದರು.
ಆರ್ಎಸ್ಎಸ್ ಶಾಖೆ ಮಾಡಲು ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣ ಹಾಗೂ ಸಾರ್ವಜನಿಕ ಜಾಗಗಳಲ್ಲಿ ಬ್ಯಾನ್ ಮಾಡಿರುವುದನ್ನು ಟೀಕಿಸಿದ ಅವರು, ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆ, ಕಾಂಗ್ರೆಸ್ಸಿಗೆ ಇಲ್ಲ. ಕುನ್ನಿಗಳು ಬೊಗಳುತ್ತಿವೆ ಆರೆಸ್ಸೆಸ್ ಅದನ್ನು ಲೆಕ್ಕದಲ್ಲಿಟ್ಟುಕೊಳ್ಳುವುದಿಲ್ಲ. ಉತ್ತರ ಕರ್ನಾಟಕದ ಪ್ರಸಿದ್ಧ ಕನ್ನೇರಿ ಸ್ವಾಮಿಗಳು ಬಾಗಲಕೋಟೆಗೆ ಹೋಗದಂತೆ ಜಿಲ್ಲಾಡಳಿತ ತಡೆ ಒಡ್ಡಿದೆ. ಇದು ಖಂಡನೀಯ ಆ ಭಾಗದಲ್ಲಿ ಗೋಶಾಲೆ, ವಿದ್ಯಾ ಕೇಂದ್ರಗಳು ಮತ್ತು ಬಡವರಿಗೆ ನಿರಂತರ ದಾಸೋಹ ಏರ್ಪಡಿಸಿದ ಈ ಸ್ವಾಮಿಗಳನ್ನು ನಗರ ಪ್ರವೇಶಿಸಿದಂತೆ ಈ ಸರ್ಕಾರ ನೀಡಿದ ಆದೇಶ ಹಿಂದೂ ಸಮಾಜದ ಸಾಧು-ಸಂತರ ಮೇಲಿನ ದೌರ್ಜನ್ಯ ಎಂದರು.
ಇದನ್ನು ಖಂಡಿಸಿ ನಾನು ಅ.24ರಂದು ಬಿಜಾಪುರಕ್ಕೆ ಹೋಗುತ್ತಾ ಇದ್ದೇನೆ. ಸ್ಥಳೀಯ ಮುಖಂಡರುಗಳು ಮತ್ತು ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ತಕ್ಷಣ ಕನ್ನೇರಿ ಸ್ವಾಮಿಗಳ ಮೇಲಿನ ನಗರ ಪ್ರವೇಶ ತಡೆ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಮುಸ್ಲಿಮರ ಬಗ್ಗೆ ಮಾತನಾಡಿದರೆ ಸರ್ಕಾರ ಸುಮ್ಮನಿರುತ್ತದೆ. ಆರ್ಎಸ್ಎಸ್ ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಆರ್ಎಸ್ಎಸ್ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದರು. ಆದರೆ ಆರ್ಎಸ್ಎಸ್ ಹೆಸರು ಹೇಳಲಿಕ್ಕೂ ಈ ಸರ್ಕಾರಕ್ಕೆ ಧೈರ್ಯ ಇಲ್ಲ. ಹಿಂದೆ ಮೂರು ಬಾರಿ ಕೇಂದ್ರ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿತ್ತು. ದೇಶದಲ್ಲಿ ಅವರೇ ನಾಶ ಆದ್ರೂ. ಆರ್ಎಸ್ಎಸ್ ಬಗ್ಗೆ ವಿರೋಧ ಬಂದಾಗೆಲ್ಲ ಆರ್ಎಸ್ ಎಸ್ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ನಿಂತಿದೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಈ ಬೊಗಳುವ ಕುನ್ನಿಗಳಿಲ್ಲ ಎಂದರು.
ಯತ್ನಾಳ್ ಅವರು ಹೊಸಪಕ್ಷ ಕಟ್ಟುತ್ತಾರಂತೆ ಎಂಬ ಪ್ರಶ್ನೆಗೆ ಆ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಪ್ರಾಣ ಇರುವವರೆಗೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ. ಹೋದರೆ ಬಿಜೆಪಿಗೇ ಮತ್ತೆ ಹೋಗುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post