ಕಲ್ಪ ಮೀಡಿಯಾ ಹೌಸ್
ಅದು ಮಲೆನಾಡಿನ ಮಡಿಲಿನಲ್ಲಿ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ ಒಂದು ಸೇವಾ ಸಂಸ್ಥೆ… ಅಲ್ಲಿ ಮಾನವೀಯತೆಯ ನೆಲೆಯಿದೆ, ಆತ್ಮೀಯತೆಯ ಅಕ್ಕರೆಯಿದೆ, ಮಾನವತ್ವದ ಸೆಲೆಯಿದೆ ಹಾಗೂ ಸೇವೆ ಎಂಬ ಮಹತ್ಕಾರದ ಆದರವಿದೆ. ಇಂತಹ ಒಂದು ಸ್ಥಳವೇ ಶರಣ್ಯ ಗ್ರಾಮೀಣ ನೋವು ಉಪಶಮನ ಆರೈಕೆ ಮತ್ತು ಸಂಶೋಧನಾ ಕೇಂದ್ರ.
ಹೌದು… ಶಿವಮೊಗ್ಗ ಜಿಲ್ಲೆಯ ಗಾಜನೂರು ಅಗ್ರಹಾರದ ಗ್ರಾಮದಲ್ಲಿರುವ ಶರಣ್ಯ ಗ್ರಾಮೀಣ ನೋವು ಉಪಶಮನ ಆರೈಕೆ ಮತ್ತು ಸಂಶೋಧನಾ ಕೇಂದ್ರ ಮಾನವೀಯ ನೆಲೆಯ ಒಂದು ಸೇವಾ ಕೇಂದ್ರವಾಗಿದೆ.
ಕರ್ನಾಟಕ ರಾಜ್ಯದ ಮತ್ತು ರಾಷ್ಟ್ರದ ಯಾವುದೇ ಯಾವುದೇ ವ್ಯಕ್ತಿಗಳಿಗೆ ಈ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಮಾನನವೀಯ ಸೇವೆ ಯಾವುದೇ ಚಿಕಿತ್ಸೆಯಿಂದ ಗುಣಪಡಿಸಲಾರದ ಉಲ್ಬಣ ಸ್ಥಿತಿಯಲ್ಲಿರುವ ರೋಗಿಗಳಿಗೆ ಒಳ ರೋಗಿಗಳಾಗಿ ಮತ್ತು ಗೃಹ ಶುಶ್ರೂಷಕಿಯಾಗಿ ಸೇವೆ, ಪಾಲಕರಿಲ್ಲದ ಮಕ್ಕಳಿಗೆ ಆಶ್ರಯ, ಹಿರಿಯ ನಾಗರೀಕರ ಯೋಗಕ್ಷೇಮ ಅಸಹಾಯಕ, ಸ್ತ್ರೀಯರಿಗೆ ಆಶ್ರಯ ಸೇವೆಯ ಸೌಲಭ್ಯ. ಹೀಗೆ ಮೇಲ್ಕಾಣಿಸಿದ ಎಲ್ಲಾ ರೀತಿಯ ಅಸಹಾಯಕ ವೃತ್ತಿಗಳಿಗೆ ಯಾವುದೇ ಜಾತಿ ಮತ ಭೇದವಿಲ್ಲದೆ, ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಕಳೆದ ಹದಿನೇಳು ವರ್ಷಗಳಿಂದ ಆರೈಕೆಯ ಆಶ್ರಯ ಮತ್ತು ಆಧ್ಯಾತ್ಮಿಕತೆ ನೀಡಿ ಧೈರ್ಯ ಮತ್ತು ಆತ್ಮ ಆತ್ಮಸ್ಥೈರ್ಯ ತುಂಬುವ ಮಾನವೀಯ ಸೇವೆಯನ್ನು ನಡೆಸಿಕೊಂಡು ಬರುತ್ತಿದೆ ಈ ಸಂಸ್ಥೆ. ಈ ಸಂಸ್ಥೆಯು ಡಿಎಸ್’ಎಲ್ ಟ್ರಸ್ಟ್’ನ ಸೇವಾ ಯೋಜನೆ ಆಗಿದೆ.
ಶರಣ್ಯ ಸಂಸ್ಥೆಯ ಮೂಲ ಉದ್ದೇಶ ಮತ್ತು ಗುರಿ:
ಪ್ರತಿಯೊಬ್ಬ ಒಳರೋಗಿಯಾಗಿ ಬಂದವರು ಗೌರವಯುತವಾಗಿ ತಮ್ಮ ಉಳಿದ ಜೀವಿತಾವಧಿಯನ್ನು ಅನುಭವಿಸಬೇಕು. ಅಲ್ಲದೆ ಉತ್ತಮ ಸೌಲಭ್ಯ ಸೌಕರ್ಯಗಳಿಂದ ತನ್ನ ಅಂತಿಮ ದಿನಗಳಲ್ಲಿ ನೆಮ್ಮದಿಯ ತಾಣಕ್ಕೆ ಸೇರಿರುವುದಕ್ಕೆ ಭಗವಂತನನ್ನು ಸ್ಮರಿಸುವಂತಾಗಬೇಕು. ಒಂಟಿತನವನ್ನು ಹೋಗಲಾಡಿಸಿ ತನ್ನ ಎಲ್ಲ ಸಿಬ್ಬಂದಿಯೊಂದಿಗೆ ಪ್ರೀತಿಯ ವಾತಾವರಣವನ್ನು ಹೊಂದಿ, ಒಬ್ಬ ರೋಗಿಗೆ ಅಸಹಾಯಕರಿಗೆ ಹಿಂದೆಂದೂ ದೊರೆಯದಂತಹ ಸಂಬಂಧದ ಅನುಭವವನ್ನು ನೀಡುವುದೇ ಸಂಸ್ಥೆಯ ಮೂಲ ಉದ್ದೇಶವಾಗಿದೆ.
ಸಂಸ್ಥೆಯ ವತಿಯಿಂದ ಹೆಚ್ಚು ಹೆಚ್ಚು ರೋಗಿಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತವಾಗಿ ನೀಡುವುದು ಮುಖ್ಯ ಗುರಿಯಾಗಿದೆ. ಈ ಗುರಿಯನ್ನು ಆರೈಕೆ ಕೇಂದ್ರದ ಎಲ್ಲ ಸೇವೆಗಳಲ್ಲಿ ತೊಡಗಿಸಿಕೊಂಡು ನೀಡುವುದಾಗಿದೆ. ಪ್ರಾರಂಭಿಕ ಹಂತದಲ್ಲಿ ಎಂಬತ್ತು ಜನರಿಗೆ ಯೋಜನೆ ರೂಪಿತಗೊಂಡಿದ್ದು, ಈಗ ಪ್ರಸ್ತುತ ಸುಸಜ್ಜಿತ ಸ್ವಚ್ಛವಾಗಿರುವ 2 ವಾರ್ಡ್’ಗಳನ್ನು ನಿರ್ಮಿಸಿ, ಇಪ್ಪತ್ತು ಒಳ ರೋಗಿಗಳಿಗೆ ಆಶ್ರಯ ನೀಡಿ ಆರೈಕೆ ಸುಶ್ರೂಷೆ ಸೇವೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಮಿತಿ ಇದ್ದರೂ ಆರೈಕೆಗೆ ಮಿತಿ ಇಲ್ಲ ಎಂಬ ಮೂಲ ಮಂತ್ರ ಸಂಸ್ಥೆಯ ಧ್ಯೇಯವಾಗಿದೆ. ಈ ಸೇವೆಯನ್ನು ಪ್ರಾರಂಭಿಸಿದ ದಿನದಿಂದ ಇಂದಿನವರೆಗೆ ಹದಿನೇಳು ವರ್ಷಗಳ ಸುಧೀರ್ಘ ಪಯಣದಲ್ಲಿ ಹಲವಾರು ರೀತಿಯ ಉಲ್ಬಣಿಸಿದ ಮತ್ತು ವಿವಿಧ ಸಾಮಾಜಿಕ ಪರಿಸ್ಥಿತಿಯ ರೋಗಿಗಳಿಗೆ ಆರೈಕೆ ನೀಡಲಾಗಿದೆ.
ಪ್ರಮುಖವಾಗಿ ರೋಗ ಅತಿ ಉಲ್ಬಣಗೊಂಡು ಕೀವು, ರಕ್ತಸ್ರಾವ ಆಗುವಂತಹುದು, ಆಹಾರವೇ ಸೇರದೇ ಇರುವುದು ಲಿವರ್ ಕ್ಯಾನ್ಸರ್’ನಲ್ಲಿ ಹೊಟ್ಟೆಯಲ್ಲಿ ದ್ರವ ಶೇಖರಣೆಯಾಗಿ ನೋವು ಸಂಕಟ ಅನುಭವಿಸಿರುವುದು ಮತ್ತು ಗುದದ್ವಾರದ ಕ್ಯಾನ್ಸರ್’ನಂತಹ ಉಲ್ಬಣತೆ; ಹೀಗೆ ಹತ್ತು ಹಲವಾರು ಸಂದರ್ಭದಲ್ಲಿ ರೋಗಿಯ ಒಂದೊಂದು ದಿನವೂ ಬಹಳ ಸವಾಲಾಗಿರುತ್ತದೆ. ಕೆಲವು ಸಾರಿ ತುಂಬಾ ಚಿಕ್ಕ ವಯಸ್ಸಿನಲ್ಲಿ ಮಾರಕ ಕಾಯಿಲೆಗೆ ತುತ್ತಾಗಿ ಗಂಡನೋ-ಹೆಂಡತಿಯೋ ನರಳುತ್ತಿರುವಾಗ ಇರುವ ಮುದ್ದಾದ ಮಗುವಿನೊಂದಿಗೆ ಇರುವಷ್ಟು ದಿನ ನೆಮ್ಮದಿಯಿಂದಿರಲು ಅವಕಾಶ ಮಾಡಿಕೊಡುವ ಯೋಜನೆಯ ಸೇವೆ ಇದಾಗಿದೆ. ಇಂತಹ ರೋಗಿಗಳಿಗೆಂದೇ ಹದಿನಾರು ಪ್ರತ್ಯೇಕ ಕೊಠಡಿಗಳನ್ನು ಹೊಂದಿರುವ ಕಟ್ಟಡವನ್ನು ನಿರ್ಮಿಸಿ, ಸೇವೆಗೆ ನೀಡಲು ಶರಣ್ಯ ಮುಂದಾಗಿದೆ.
ಮೇಲಿನ ಈ ಸೇವೆಗೆ ಹೊರತಾಗಿ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೋಗಿಗಳಿಗೆ ಅವರವರ ಮನೆಯಲ್ಲೇ ಆರೈಕೆ ಶುಶ್ರೂಷೆ ನೀಡುವ ಕಾರ್ಯವನ್ನು ಪ್ರತ್ಯೇಕವಾಗಿ ತಂಡ ನಿರ್ವಹಿಸುತ್ತದೆ. ಈ ಆರೈಕೆಯಿಂದ ರೋಗಿಗೆ ಮತ್ತು ಕುಟುಂಬದವರಿಗೆ ದೈಹಿಕ ಮತ್ತು ಮಾನಸಿಕ ಸಾಂತ್ವನ ನೀಡುವುದಲ್ಲದೆ ರೋಗಿಗಳಿಗೆ ನೀಡುವ ಸಂಪೂರ್ಣ ಆರೈಕೆಯಿಂದ ಆತನು ಆ ದಿನಗಳನ್ನು ಶಾಂತಿ ನೆಮ್ಮದಿ ಮತ್ತು ಗೌರವಯುತವಾಗಿ ಕಳೆಯಬಹುದೆಂಬ ಆಶಯದಿಂದ ಈ ಯೋಜನೆ ನಿರೂಪಿತವಾಗಿದೆ. ರೋಗಿಗೆ ತನ್ನ ಅಂತಿಮ ದಿನಗಳು ನೋವಿಲ್ಲದ ಮಾನಸಿಕ ಸ್ಥೈರ್ಯದ ದಿನಗಳಾಗಲಿ ಎಂಬ ದಿಕ್ಕಿನಲ್ಲಿ ಇದೊಂದು ಪ್ರಯತ್ನವಾಗಿದೆ.
ಶರಣ್ಯ ಸಂಸ್ಥೆಯ ಶುಶ್ರೂಷಾ ತಂಡವು ಆರೈಕೆಯ ಸೇವೆ ನಿರ್ವಹಿಸುತ್ತದೆ. ತಂಡವು ನುರಿತ ಶುಶ್ರೂಷಕರು ರೋಗಿಗಳ ಸಲಹಾ ಸದಸ್ಯರು ಕೌಟುಂಬಿಕ ಸಲಹಾ ಸದಸ್ಯರು ಮತ್ತು ಆಧ್ಯಾತ್ಮಿಕತೆ ನೀಡುವವರನ್ನು ಒಳಗೊಂಡಿರುತ್ತದೆ. ನುರಿತ ಶುಶ್ರೂಷಕರು ರೋಗಿಯ ಬಾಹ್ಯ ಅವಶ್ಯಕತೆಗಳನ್ನು ಪೂರೈಸುತ್ತಾರೆ. ವಿವಿಧ ಸಲಹೆ ಸದಸ್ಯರು ಕಾಲಕಾಲಕ್ಕೆ ರೋಗಿಗೆ ತನ್ನ ಪರಿಸ್ಥಿತಿಯ ಬಗ್ಗೆ ಮಾನಸಿಕವಾಗಿ ಒಪ್ಪಿಕೊಳ್ಳುವಂತೆಯೂ ಮತ್ತು ಉಳಿದ ಅಮೂಲ್ಯ ಸಮಯವನ್ನು ಭಗವಂತನ ಧ್ಯಾನ ಚಿಂತನೆ ಯಲ್ಲಿ ತೊಡಗಿಸಿಕೊಳ್ಳುವಂತೆಯೂ ರೂಪಿಸಿ ನೆಮ್ಮದಿಯ ಜೀವನ ಕಳೆಯುವ ಮೂಲ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಾರೆ.
ಶುಶ್ರೂಷಾ ತಂಡವು ರೋಗಿಯ ಬಟ್ಟೆ ಬದಲಿಸುವುದು, ಹಾಸಿಗೆ ಸಿದ್ಧಪಡಿಸುವುದು, ಹಾಸಿಗೆ ಹುಣ್ಣು ಆಗದಂತೆ ಎಚ್ಚರ ವಹಿಸುವುದು, ಮೈ ಒರೆಸುವುದು ಅಥವಾ ಸ್ನಾನ ಮಾಡಿಸುವುದು, ರೋಗಿಯ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು, ರೋಗಿಯ ಉಷ್ಣತೆ-ರಕ್ತದೊತ್ತಡ ಪರೀಕ್ಷೆ ಬರೆದಿಡುವುದು, ಅವಶ್ಯವಿದ್ದೆಡೆ ಗಾಯ ಹುಣ್ಣು ಒರೆಸಿ ಬ್ಯಾಂಡೇಜ್ ಮಾಡುವುದು, ವೈದ್ಯರು ಸೂಚಿಸಿರುವ ಔಷಧವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡಿರುವ ಬಗ್ಗೆ ಗಮನ ಹರಿಸುವುದು ಮತ್ತು ನೋವು ನಿವಾರಿಸುವಲ್ಲಿ ಸಹಕರಿಸುವುದು ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಾರೆ.
ವಿಶೇಷವೆಂದರೆ ಶುಶ್ರೂಷ ತಂಡ ಬಂದಾಗ ರೋಗಿಯ ಕುಟುಂಬದವರು ಸಹಕರಿಸಬೇಕಾಗುತ್ತದೆ. ಹಂತಹಂತವಾಗಿ ರೋಗಿಯ ಕುಟುಂಬದವರಿಗೆ ಶುಶ್ರೂಷೆಯ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಸ್ವಲ್ಪ ಸಮಯದ ನಂತರ ರೋಗಿಯ ಶುಶ್ರೂಷೆಯನ್ನು ಕುಟುಂಬದವರೇ ನೋಡಿಕೊಳ್ಳಲು ಅನುವಾದಾಗ ತಂಡವು ಇನ್ನೂ ಹೆಚ್ಚಿನ ರೋಗಿಗಳನ್ನು ಶುಶ್ರೂಷೆ ಮಾಡಲು ಸಹಕಾರಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳ ಮನೆಗೆ ೨೩ ದಿನಕ್ಕೊಮ್ಮೆ ಭೇಟಿ ನೀಡಿ ವಿಚಾರಿಸಿಕೊಂಡು ಬರುತ್ತಾರೆ. ಶರಣ್ಯ ತಂಡವು ರೋಗಿಗಳ ಸರ್ವತೋಮುಖ ಶಾಂತಿ ನೆಮ್ಮದಿ ಕಾರ್ಯನಿರ್ವಹಿಸುತ್ತದೆ. ಈ ಮೂಲ ಉದ್ದೇಶವನ್ನು ರೋಗಿಯ ಕುಟುಂಬದವರು ಪ್ರಾಥಮಿಕವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಶರಣ್ಯದ ಸೇವೆ ಕುಟುಂಬದವರನ್ನು ಹೊರತುಪಡಿಸಿ ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ. ಈ ಸೇವೆಯು ಯಾವುದೇ ಜಾತಿ ಮತ ಭೇದವಿಲ್ಲದೆ, ಬಡವ ಬಲ್ಲಿದನೆಂಬ ಬೇಧವಿಲ್ಲದೇ ಸಂಪೂರ್ಣ ಉಚಿತವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡಲಾಗುತ್ತದೆ. ಸಂಸ್ಥೆಯ ತಂಡವು ರೋಗಿಯ ಕುಟುಂಬದವರು ಯಾವುದೇ ಧಾರ್ಮಿಕ ಭಾವನೆಗಳಲ್ಲಿ ಭಾಗಿಯಾಗುವುದಿಲ್ಲ.
ನಮಗೆಲ್ಲರಿಗೂ ತಿಳಿದಿರುವಂತೆ ಮನುಷ್ಯ ಚೆನ್ನಾಗಿರುವಾಗ ಎಲ್ಲರೂ ಅತಿಪ್ರೀತಿಯಿಂದ ಆದರಿಸುತ್ತಾರೆ. ಆದರೆ ಇವರು ಕಾಯಿಲೆಯಿಂದ ಉಲ್ಬಣಿಸಿದ ಸ್ಥಿತಿ ತಲುಪಿ ಆಸ್ಪತ್ರೆಯವರು ಸಹ ನೋಡಿಕೊಳ್ಳಲು ನಿರಾಕರಿಸಿದಾಗ ಸಾಮಾನ್ಯವಾಗಿ ರೋಗಿಯ ಪಾಡು ಹೇಳತೀರದು. ಪ್ರತಿಯೊಂದು ಮನೆಯ ವಾಸ್ತವಿಕ ಸಂಗತಿಯನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲಾಗದೇ ವಿಭಿನ್ನವಾಗಿರುತ್ತದೆ. ಇಂತಹುದರಲ್ಲಿ ಕೆಲವು ಸನ್ನಿವೇಶಗಳು ಭಯಾನಕವಾಗಿರುತ್ತದೆ. ಎಷ್ಟು ಆಸ್ತಿ ಅಂತಸ್ತು ಇದ್ದರೂ, ಪ್ರೀತಿ ವಾತ್ಸಲ್ಯ ತೋರದೆ ಮನೆಯಲ್ಲಿ ಮಕ್ಕಳು ಇದ್ದೂ ಇಲ್ಲದಂತಿರುವ ಪರಿಸ್ಥಿತಿ ಕೆಲವರಿಗೆ ಮಕ್ಕಳೇ ಇಲ್ಲದ ಪರಿಸ್ಥಿತಿ ಹದಿಹರೆಯದವರಿಗೆ ಈ ಕಾಯಿಲೆಯ ಅನುಭವ ಹೇಳುವಂತಿಲ್ಲ. ಇವೆಲ್ಲದರ ಒತ್ತಡದಿಂದ ಹೇ ಭಗವಂತ ನನಗೆ ಇಷ್ಟೊಂದು ಕಷ್ಟ ಕೊಡುವೆ ತೊಟ್ಟು ವಿಷ ನೀಡಬಾರದು ಎಂಬ ಹತಾಶ ಉದ್ಧಾರದ ಮಾತು ಇಂತಹ ಎಲ್ಲ ಪರಿಸ್ಥಿತಿಗಳಿಗೆ ಪರಿಹಾರವೆಂಬಂತೆ ಶರಣ್ಯ ಸಂಸ್ಥೆಯು ಕೆಲಸ ನಿರ್ವಹಿಸುತ್ತದೆ.
ಸರಣಿ ಆರೈಕೆ ಕೇಂದ್ರದ ಈ ಸೇವೆಗೆಂದು ಬೆನ್ನೆಲುಬಾಗಿ ನಿಂತಿರುವ ಡಿಎಸ್’ಎಲ್ ಟ್ರಸ್ಟ್ ರಿಜಿಸ್ಟರ್ಡ್ ಶಿವಮೊಗ್ಗ ನಗರದ ಸಮೀಪ ಹತ್ತು ಎಕರೆ ಜಾಗವನ್ನು ಖರೀದಿಸಿ ಈ ಸೇವೆಯು ಎಲ್ಲ ತರಹದ ವಿವಿಧ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ನೆಮ್ಮದಿಯ ಆಶ್ರಯತಾಣ ಆಗಲೆಂದು ಅಭಿವದ್ಧಿಗೊಳಿಸುತ್ತಿದ್ದೇವೆ ಎನ್ನುತ್ತಾರೆ ಸಂಸ್ಥೆಯವರು.
ಇಡೀ ಪರಿಸರವನ್ನು ಗಿಡಮರಗಳಿಂದ ತುಂಬಿ ತುಳುಕುತ್ತಾ ಪ್ರಕೃತಿಯ ಕೃಪಾಶೀರ್ವಾದದೊಂದಿಗೆ ಆಯುರ್ವೇದ ಮರಗಳ ವನ ರಾಶಿ ನಕ್ಷತ್ರ ಮತ್ತು ಗ್ರಹಗಳ ಲಕ್ಷ್ಮಿ ಪವಿತ್ರ ವನ ಚಂದ್ರ ಸುಚೇತಾ ಉದ್ಯಾನವನ ಹೀಗೆ ಇಡೀ ಪ್ರದೇಶವನ್ನು ಪ್ರಾಕೃತಿಕವಾಗಿ ಬೆಳೆಸಿಕೊಂಡು ಉತ್ತಮ ಆರೊಗ್ಯದಾಯಕ ವಾತಾವರಣದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಇಂತಹ ರೋಗಿಗಳಿಗೆಂದು ನಿರ್ಮಾಣವಾಗಿರುವ ಆರೈಕೆ ಕೇಂದ್ರ ಇಡೀ ರಾಜ್ಯದಲ್ಲೇ ಎರಡನೆಯದೆಂದು ತಿಳಿಸಲು ಹೆಮ್ಮೆಯೆನಿಸುತ್ತದೆ. ಇದರ ಕಲ್ಪನೆಯೇ ವಿಶೇಷ. ಸಾಧಾರಣವಾಗಿ ರೋಗಿಯನ್ನು ಗುಣಪಡಿಸಲು ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು ಚಿರಪರಿಚಿತ. ಆದರೆ ರೋಗ ಗುಣಪಡಿಸಲಾಗದೆ ಉಲ್ಬಣ ಸ್ಥಿತಿಯಲ್ಲಿರುವ ವ್ಯಕ್ತಿಗೆ ಆರೈಕೆ ಆಶ್ರಯ ನೀಡಿ ತನ್ನ ಜೀವಿತದ ಉಳಿದಿರುವಷ್ಟು ಸಮಯವನ್ನು ನೆಮ್ಮದಿಯ ನೋವುರಹಿತ ಪ್ರೀತಿಯ ದಿನಗಳನ್ನಾಗಿ ಪರಿವರ್ತಿಸುವ ಈ ಪ್ರಯತ್ನ ನಿಜಕ್ಕೂ ಒಂದು ಸವಾಲೇ ಸರಿ. ಈ ಸಾಧನೆಗೆ ವೈದ್ಯಕೀಯ ತಂಡ ಶುಶ್ರೂಷಾ ತಂಡ ಸ್ವಚ್ಚತಾ ಸಿಬ್ಬಂದಿ ಊಟೋಪಚಾರದ ವ್ಯವಸ್ಥೆ ಆಧ್ಯಾತ್ಮಿಕ ಚಿಂತನೆ ಆಪ್ತಸಮಾಲೋಚನೆ ಧೈರ್ಯ ತುಂಬುವಂತಹ ಪರಿಣಿತಿ ಹೀಗೆ ಹಲವಾರು ವಿಭಾಗಗಳ ಸಮ್ಮಿಳಿತದ ಸೇವೆಯೇ ಶರಣ್ಯ ನೋವು ಉಪಶಮನ ಆರೈಕೆ ಮತ್ತು ಶುಶ್ರೂಷಾ ಕೇಂದ್ರವಾಗಿದೆ.
ಈ ಆರೈಕೆ ಕೇಂದ್ರದ ಪ್ರಾರಂಭದ ಕಲ್ಪನೆಯೇ ರೋಚಕವಾಗಿದೆ. ಈ ಸೇವೆಯ ಅವ್ಯಕ್ತ ಶಕ್ತಿ ಆದ ದಿವಂಗತ ಡಿ.ಎಸ್. ಲಕ್ಷ್ಮೀ ನಾರಾಯಣ ಶೆಟ್ಟಿ ಅವರು ನಿಧನರಾದ ನಂತರ ಅವರ ಸಾಮಾಜಿಕ ಸೇವೆ ಕಳಕಳಿಯನ್ನು ಸ್ಮರಿಸಿದ ಅವರು ಡೀಲ್ ನೀಲಮ್ಮ ಅವರು ತಮ್ಮ ಕುಟುಂಬದವರೊಂದಿಗೆ ತನ್ನ ಪಾಲಿಗಿರುವ ಆಸ್ತಿಯನ್ನು ಉಪಯೋಗಿಸಿಕೊಂಡು ಯಾವುದಾದರೂ ಅವಶ್ಯಕವಾದ ಮಾನವೀಯ ಸೇವೆಯ ಬಗ್ಗೆ ಗಮನಹರಿಸಬೇಕೆಂದು ಸಮಾಲೋಚಿಸಿದರು. ಇದರ ಪ್ರತಿಫಲವಾಗಿ ಉಲ್ಬಣಿಸಿದ ರೋಗಿಗಳ ಸೇವೆ, ಹಿರಿಯ ನಾಗರಿಕರ ಸೇವೆ, ಪಾಲಕರಿಲ್ಲದ ಮಕ್ಕಳ ಸೇವೆ ಮತ್ತು ಅಸಹಾಯಕ ಸ್ತ್ರೀಯರಿಗೆ ಆಶ್ರಯ ಎಂಬ ವಿವಿಧ ಕ್ಷೇತ್ರಗಳ ಸಾಮಾಜಿಕ ಸೇವೆಗೆ ಸಂಕಲ್ಪ ಮಾಡಿ ಶರಣ್ಯ ಸೇವಾ ಯೋಜನೆಯ ಮೂಲಕ ರಲ್ಲಿ ಪ್ರಥಮ ಹೆಜ್ಜೆ ಇಟ್ಟಿತ್ತು ಎಂದು ಜ್ಞಾಪಿಸಿಕೊಳ್ಳುತ್ತೇವೆ ಎನ್ನುತ್ತಾರೆ ಸಂಸ್ಥೆಯವರು.
ಶರಣ್ಯ ಎಂಬ ಹೆಸರೇ ವಿಶೇಷ ಅರ್ಥ ಕೊಡುವಂತಹುದಾಗಿದೆ. ದುರ್ಗಾ ಸ್ತೋತ್ರದಲ್ಲಿ ಬರುವಂತೆ ಏನೇ ಸಮಸ್ಯೆಗಳಿದ್ದರೂ ಪ್ರಾಮಾಣಿಕ ಪ್ರಯತ್ನ ಪರಿಶ್ರಮ ಮತ್ತು ತಾಯಿ ದುರ್ಗಾ ಮಾತೆಯನ್ನು ಸಮರ್ಪಣೆ ಈ ಮೂಲ ಮಂತ್ರವೇ ನಮ್ಮ ಎಲ್ಲಾ ನೋವು ಸಂಕಟಗಳಿಗೆ ಪರಿಹಾರ ದೊರಕುವುದೆಂಬ ಸಾರಾಂಶದ ಸಂದೇಶವೇ ಶರಣ್ಯ.
ಶರಣ್ಯದ ಚಿಹ್ನೆಗೂ ಕೂಡ ವಿಶೇಷ ಅರ್ಥಗರ್ಭಿತವಾಗಿದೆ. ಈ ಪ್ರಪಂಚದಲ್ಲಿ ವಾಸಿಸುವ ನಮಗೆ ೨ ರೀತಿಯ ಅನುಭವಗಳಾಗುತ್ತವೆ. ವಿಶೇಷವಾಗಿ ಉಲ್ಬಣಿಸಿದ ಸ್ಥಿತಿಯ ಖಾಯಿಲೆ ಸಂದರ್ಭ ಮತ್ತು ಅಸಹಾಯಕತೆಯ ಪರಿಸ್ಥಿತಿ ಇತ್ಯಾದಿಗಳಲ್ಲಿ ನೋವಿನ ಸಂಕಟದ ಮುಖಭಾವ ಪ್ರತಿಬಿಂಬಿಸುತ್ತದೆ. ಎಲ್ಲ ಪ್ರಯತ್ನದ ಎಲ್ಲ ಪ್ರಯತ್ನದ ನಂತರ ಶರಣ್ಯದ ಆಶ್ರಯಕ್ಕೆ ಬಂದ ಮೇಲೆ ನೆಮ್ಮದಿಯ ನಿಟ್ಟುಸಿರಿನ ಭಾವ ವ್ಯಕ್ತವಾಗುತ್ತದೆ ಈ ಚಮತ್ಕಾರದ ಪ್ರಭಾವವೇ ಶರಣ್ಯ ಸೇವೆಯದ್ದಾಗಿದೆ.
ಒಟ್ಟಾರೆ ಶರಣ್ಯ ಸೇವಾ ಸಂಸ್ಥೆಯು ಮೇಲ್ಕಾಣಿಸಿದ ಮಾನವೀಯ ಸೇವೆಯನ್ನು ಸಮಾಜಕ್ಕೆ ನೀಡುತ್ತ ಚಿಕಿತ್ಸೆಗೆ ಮೀರಿದ ಶುಶ್ರೂಷೆ ಮತ್ತು ಆರೈಕೆ. ಅಲ್ಲದೆ ನೀನು ಪವಿತ್ರವಾದ ಆತ್ಮ ನಿನ್ನನ್ನು ನೋವಿನಿಂದ ನರಳಲು ಬಿಡುವುದಿಲ್ಲ ನಿನಗೊಂದು ನೆಮ್ಮದಿಯ ಅಂತಿಮ ದಿನ ದೊರೆಯಲು ನಾವಲ್ಲ ಸಹಕರಿಸುತ್ತೇವೆ ಮತ್ತು ನಿನ್ನ ಅಂತಿಮ ದಿನದವರೆಗೆ ಸಂತೋಷದಿಂದ ಈ ಸಮಾಜದ ಋಣ ತೀರಿಸಲು ಅವಕಾಶವನ್ನು ಕಲ್ಪಿಸುತ್ತೇವೆ ಎನ್ನುತ್ತಾರೆ ಸಂಸ್ಥೆಯವರು.
ಈ ಸಂಸ್ಥೆಯ ಇದೇ ರೀತಿಯ ಸೇವಾಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ದಾನಿಗಳ ಅಗತ್ಯವಿದೆ. ದೇಣಿಗೆ ಕೊಡುವವರು: ದಾನಿಗಳು ೮೦ ಎ ಆದಾಯ ತೆರಿಗೆ ಇಲಾಖೆಯಿಂದ ವಿನಾಯಿತಿ ಪಡೆಯಬಹುದು ಹಾಗೂ ದೇಣಿಗೆಗಾಗಿ ನಾವು ಇಖ್ಕ ನಿಧಿಗಳನ್ನು ಮತ್ತು ವಿದೇಶಿ ನಿಧಿಗಳನ್ನು ಸ್ವೀಕರಿಸುತ್ತೇವೆ ಎನ್ನುತ್ತಾರೆ ಸಂಸ್ಥೆಯ ಪ್ರಮುಖರು.
ಶರಣ್ಯ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆಗಳು:
9980448485 ಮಂಜುನಾಥ್ ಬುಧಳ್
9945776583 ಮಂಜುನಾಥ್ ಡಿ.ಎಲ್.
ದೇಣಿಗೆ ನೀಡುವವರು ಈ ಬ್ಯಾಂಕ್ ಖಾತೆ ದೇಣಿಗೆ ಕಳಿಸಬಹುದುDBS Bank India Limited
IFSC code : DBSS0IN0672
Account number is
0672620000000750
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post