ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಗಾಗಲೇ ನಿರ್ಧರಿಸುವಂತೆ ಮಾರ್ಚ್ 22ರಂದು ಮಾರಿಕಾಂಬಾ ಜಾತ್ರೆಯನ್ನು ನಡೆಸಲಿದ್ದು, ಒಂದು ವೇಳೆ ಲಾಕ್ಡೌನ್ ಪರಿಸ್ಥಿತಿ ಎದುರಾದರೆ ಸಮಿತಿಯವರಿಂದಲೇ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಜಾತ್ರಾ ಸಮಿತಿಯ ಕಾರ್ಯದರ್ಶಿ ಎನ್. ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಫೆ.೨೨ಕ್ಕೆ ನಡೆಯಬೇಕಿದ್ದ ಜಾತ್ರೆ ಮಾರ್ಚ್ 22ಕ್ಕೆ ನಡೆಯಲಿದೆ. ಎಷ್ಟು ದಿನ ಜಾತ್ರೆ ನಡೆಸಬೇಕು ಎಂಬುದನ್ನು ಜಿಲ್ಲಾಧಿಕಾರಿಗಳವರೊಂದಿಗೆ ಚರ್ಚಿಸಿ ಅವರ ನಿರ್ದೇಶನದಂತೆ ತೀರ್ಮಾನಿಸುತ್ತೇವೆ. ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಸ್ತುಪ್ರದರ್ಶನ, ಅಂಗಡಿ ಮಳಿಗೆಗಳೂ ಸೇರಿದಂತೆ ಎಲ್ಲವನ್ನು ರದ್ದು ಮಾಡಲಾಗಿದೆ. ಈ ಬಾರಿಯ ಜಾತ್ರೆ ಸಮಿತಿಗೆ ಆರ್ಥಿಕವಾಗಿ ಹೊರೆಯಾದರೂ ಸಂಪ್ರದಾಯಕ್ಕೆ ಧಕ್ಕೆ ಬಾರದೆ ಇರುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತದೆ ಎಂದರು.
ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಕೊರೋನಾ ನಿಯಮಾವಳಿಗಳಂತೆ ಶಿಕಾರಿಪುರದಲ್ಲಿ ಜಾತ್ರೆ ನಡೆಸಲಾಗಿದೆ. ಅದರಂತೆಯೇ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿಯೂ ಸರಳವಾಗಿ ಜಾತ್ರೆ ಆಚರಿಸಲಾಗುತ್ತದೆ. ಜ.28ರಂದು ಸಾಂಪ್ರದಾಯಿಕವಾಗಿ ಮರ ತಂದು ದೇವಿಯ ತವರು ಮನೆಯಲ್ಲಿ ಇರಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಿ ಆಚರಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಅಣ್ಣಪ್ಪ, ಬಿ.ಎಮ್. ರಾಮಯ್ಯ, ಲೋಕೇಶ್, ಸತ್ಯನಾರಾಯಣ್, ವಿ. ರಾಜು, ಪ್ರಕಾಶ್ ಮನು, ಶ್ರೀಧರ ಮೂರ್ತಿ, ತುಕ್ಕೋಜಿ ರಾವ್, ಸೀತಾರಾಮ್ ನಾಯಕ್ ಸೇರಿ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post