ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೇಡಿಮಣ್ಣಿನ ಗಣಪತಿ ವಿಗ್ರಹಗಳನ್ನು ನೈಸರ್ಗಿಕ ಮಣ್ಣು ಮತ್ತು ಸರಳ ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ, ನೈಸರ್ಗಿಕ ರಾಸಾಯನಿಕಗಳಿಂದ ಅಲಂಕರಿಸಲಾಗುತ್ತದೆ. ಈ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿದಾಗ ಅಥವಾ ಪ್ರಕೃತಿಗೆ ಬಿಟ್ಟಾಗ, ಅವು ಯಾವುದೇ ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡದೆ ಕರಗುತ್ತವೆ. ಪ್ರಕೃತಿ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪತಿ ವಿಗ್ರಹಗಳನ್ನು ಸ್ಥಳೀಯ ಕುಶಲಕರ್ಮಿಗಳಿಂದ ಪಡೆಯಲಾಗುತ್ತದೆ, ನೈಸರ್ಗಿಕ ಸಸ್ಯ ಆಧಾರಿತ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸಲು ಸಂಕಲ್ಪ ಮಾಡೋಣ. ಹಸಿರು ಪಟಾಕಿಯನ್ನೇ ಬಳಸೋಣ.
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು, ಶಿವಮೊಗ್ಗ
ಜಿಲ್ಲೆಯಾದ್ಯಂತ ಆಗಸ್ಟ್ 27ರಂದು ನಡೆಯಲಿರುವ ಗಣೇಶ ಚತುರ್ಥಿ ಮತ್ತು ಸೆ.5 ನಡೆಯಲಿರುವ ಈದ್ ಮಿಲಾದ್ ಹಬ್ಬಗಳನ್ನು ಸರ್ವಧರ್ಮಗಳ ಬಂಧುಗಳು ಸೌಹಾರ್ಧಯುತವಾಗಿ ಸಡಗರ ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯ ಅಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಹಬ್ಬಗಳ ಸಂದರ್ಭದಲ್ಲಿ ಬೈಕ್ ರ್ಯಾಲಿ ನಡೆಸದಂತೆ, ಡಿಜೆ ಧ್ವನಿವರ್ಧಕಗಳನ್ನು ಬಳಸಿ ಮೆರವಣಿಗೆ ಮಾಡದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಅಲ್ಲದೇ ವಿಶೇಷವಾಗಿ ಗಣಪತಿ ವಿಸರ್ಜನಾ ಸ್ಥಳಗಳಲ್ಲಿ ತೆಪ್ಪ ಇಟ್ಟುಕೊಂಡಿರಬೇಕು. ನೀರಿಗಿಳಿಯುವವರು ಈಜು ಬಲ್ಲವರಾಗಿದ್ದು, ಮೂರ್ನಾಲ್ಕು ಜನಕ್ಕಿಂತ ಹೆಚ್ಚಿನ ಸಂಖ್ಯೆಯ ಜನ ನೀರಿಗೆ ಇಳಿಯಬಾರದು. ಅಲ್ಲದೇ ಲೈಫ್ ಜಾಕೇಟ್’ಗಳನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದವರು ತಿಳಿಸಿದರು.
ಗಣಪತಿ ಅಥವಾ ಈದ್ ಮಿಲಾದ್ ಹಬ್ಬ ಸಂಭ್ರಮದ ಮೆರವಣಿಗೆಗಳು ಅತ್ಯಂತ ಶಾಂತಿಯುತವಾಗಿದ್ದು, ಮತ್ತೊಂದು ಸಮುದಾಯ, ಧರ್ಮ, ಜನಾಂಗಕ್ಕೆ ಅಥವಾ ಅವರ ಭಾವನೆಗಳಿಗೆ ಧಕ್ಕೆ ಉಂಟಾಗದಂತಿರಲಿ ಎಂದರು.
ನಡೆಯುವ ಪ್ರಮುಖ ಬೀದಿಗಳಲ್ಲಿ, ವರ್ತುಲಗಳಲ್ಲಿ ಸಾಕಷ್ಟು ಬೀದಿದೀಪಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿರುವಲ್ಲಿ ಡ್ರೋಣ ಕಣ್ಗಾವಲು ಇಡಲಾಗುವುದು ಎಂದರು.
ಇವುಗಳ ನಿಷೇಧ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆ ನಿಷೇಧ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಡೆಸುವಂತಿಲ್ಲ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವಂತಿಲ್ಲ ಥರ್ಮೋಕೋಲ್, ಪಿಒಪಿ ಗಣಪತಿ ಬಳಸುವಂತಿಲ್ಲ
ಇವುಗಳು ಕಡ್ಡಾಯ ಗಣೇಶ ವಿಸರ್ಜನೆ ವೇಳೆ ತೆಪ್ಪ ಬಳಸಬೇಕು ತೆಪ್ಪ ಬಳಸುವ ವೇಳೆ ಲೈಫ್ ಜಾಕೇಟ್ ಬಳಸಬೇಕು ವಿಸರ್ಜನೆಗೆ 4 ಜನಕ್ಕೂ ಹೆಚ್ಚು ಜನ ಇಳಿಯುವಂತಿಲ್ಲ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ
ಗಣಪತಿ ವಿಸರ್ಜನಾ ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಕೆರೆ, ಕಟ್ಟೆ-ಕಾಲುವೆಗಳು ಸುರಕ್ಷಿತ ತಾಣಗಳಾಗಿರುವ ಬಗ್ಗೆ ಹಾಗೂ ಅಗತ್ಯವಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಗಮನಹರಿಸಬೇಕೆಂದವರು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಧರ್ಮಗಳ ಹಬ್ಬ ಆಚರಣೆಗಳು ಶಾಂತಿ-ಸೌಹಾರ್ಧಯುತವಾಗಿ ನಡೆಯುವಲ್ಲಿ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಸ್ಥಳೀಯ ಪೊಲೀಸ್ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದರು.
ಶಿವಮೊಗ್ಗ, ಭದ್ರಾವತಿ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಗಮನಹರಿಸಬೇಕು. ಸಂಘ-ಸಂಸ್ಥೆಗಳ ಹಲವು ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಸ್ಥಳೀಯ ಸಂಸ್ಥೆಗಳು ನೀಡಿರುವ ಪ್ರಚಾರ ಸಾಮಗ್ರಿಗಳನ್ನು ತಕ್ಷಣದಿಂದಲೇ ತೆರವುಗೊಳಿಸಲು ಸೂಚಿಸಬೇಕು. ಸರ್ಕಾರಿ ಸ್ವತ್ತುಗಳಿಗೆ ಹಾನಿ ಉಂಟಾದಲ್ಲಿ ಕಾರ್ಯಕ್ರಮಗಳ ಆಯೋಜಕರೇ ಹೊಣೆಗಾರರಾಗಿದ್ದು, ಅಲ್ಲಿನ ನಷ್ಟವನ್ನು ಭರಿಸಿಕೊಡಲು ಬದ್ದರಾಗಿರಬೇಕು. ಕೆಲವು ಸಂದರ್ಭಗಳಲ್ಲಿ ಮತೀಯ, ಜನಾಂಗೀಯ ವಿಷಯಗಳಿದ್ದಾಗ ಸೂಕ್ಷ್ಮವಾಗಿ ಕ್ರಮ ಕೈಗೊಳ್ಳಬೇಕು. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಈ ಹಬ್ಬಗಳ ಆಚರಣೆಯ ದಿನಗಳಲ್ಲಿ, ಮೆರವಣಿಗೆ ಸಾಗುವಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಗಣಪತಿ ಪ್ರತಿಷ್ಠಾಪನೆಗಾಗಿ ಏಕಗವಾಕ್ಷಿ ಸೌಲಭ್ಯದ ಮೂಲಕ ನಿಬಂಧನೆಗಳಿಗೊಳಪಟ್ಟು ಅನುಮತಿ ನೀಡಲು ಸೂಚಿಸಲಾಗಿದೆ ಎಂದರು.

ಥರ್ಮೋಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹಗಳನ್ನು ಪೂಜೆಗೆ ಬಳಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಇವು ನೈಸರ್ಗಿಕವಾಗಿ ಜೈವಿಕವಾಗಿ ವಿಘಟನೀಯವಲ್ಲದವು ಮತ್ತು ಅವುಗಳು ದೀರ್ಘಕಾಲದವರೆಗೆ ನೀರಿನ ಮೇಲೆ ತೇಲುತ್ತಲೇ ಇರುತ್ತವೆ. ಇದರಿಂದಾಗಿ ಜಲಮೂಲಗಳು ಮತ್ತು ಜಲ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಗ್ರಹಗಳನ್ನು ಹೆಚ್ಚಾಗಿ ಸೀಸ ಮತ್ತು ಪಾದರಸದಿಂದ ಕೂಡಿದ ಬಣ್ಣಗಳಿಂದ ಅಲಂಕರಿಸಲಾಗುತ್ತದೆ, ಇದು ಜಲಮೂಲಗಳ ಸಸ್ಯ ಮತ್ತು ಪ್ರಾಣಿಗಳನ್ನು ನಾಶಮಾಡುವ ನಿರಂತರ ಪ್ರಕ್ರಿಯೆಗೆ ಕಾರಣವಾಗುತ್ತದೆ.
ಜೇಡಿಮಣ್ಣಿನ ಗಣಪತಿ ವಿಗ್ರಹಗಳನ್ನು ನೈಸರ್ಗಿಕ ಮಣ್ಣು ಮತ್ತು ಸರಳ ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ, ನೈಸರ್ಗಿಕ ರಾಸಾಯನಿಕಗಳಿಂದ ಅಲಂಕರಿಸಲಾಗುತ್ತದೆ. ಈ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿದಾಗ ಅಥವಾ ಪ್ರಕೃತಿಗೆ ಬಿಟ್ಟಾಗ, ಅವು ಯಾವುದೇ ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡದೆ ಕರಗುತ್ತವೆ. ಪ್ರಕೃತಿ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪತಿ ವಿಗ್ರಹಗಳನ್ನು ಸ್ಥಳೀಯ ಕುಶಲಕರ್ಮಿಗಳಿಂದ ಪಡೆಯಲಾಗುತ್ತದೆ, ನೈಸರ್ಗಿಕ ಸಸ್ಯ ಆಧಾರಿತ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸಲು ಸಂಕಲ್ಪ ಮಾಡೋಣ. ಹಸಿರು ಪಟಾಕಿಯನ್ನೇ ಬಳಸೋಣ.
-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post