ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೇ ಹಳಿ ಅತಿಕ್ರಮಣ ಮತ್ತು ಅದರ ಅಪರಾಧ, ರೈಲುಗಳ ಮೇಲೆ ಕಲ್ಲು ತೂರಾಟದ ಗಂಭೀರತೆ, ರೈಲು ತಾತ್ಕಾಲಿಕ ನಿಲುಗಡೆ ಪ್ರದೇಶಗಳಲ್ಲಿ ಕಲ್ಲು ತೂರಾಟ ಮತ್ತು ನಾಣ್ಯಗಳು ಮತ್ತು ಬ್ಯಾಲೆಸ್ಟ್ ಅನ್ನು ಟ್ರ್ಯಾಕ್ನಲ್ಲಿ ಇಡುವುದು, ಟ್ರ್ಯಾಕ್ ಮತ್ತು ಆನ್ಲೈನ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆಯಿಂದಿದ್ದು, ಸಂಭವಿಸಬಹುದಾದ ಆಕಸ್ಮಿಕ ಅಪಘಾತಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ರೈಲ್ವೇ ಸುರಕ್ಷಾ ವಿಭಾಗದ ಮುಖ್ಯ ಅಧಿಕಾರಿ ಬಿ.ಎನ್.ಕುಬೇರಪ್ಪ ಮನವಿ ಮಾಡಿದರು.
ಅವರು ಇಂದು ಭದ್ರಾವತಿಯ ಅನನ್ಯ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ರೈಲ್ವೇ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಲ್ಲದೇ ಸಾಕುಪ್ರಾಣಿಗಳಾದ ದನ, ನಾಯಿ, ಕುದುರೆ ಇತ್ಯಾದಿಗಳನ್ನು ಹಳಿಗಳ ಮೇಲೆ ಬಿಡುವುದು, ಬೆಂಕಿ ಹೊತ್ತಿಸುವ ವಸ್ತುಗಳನ್ನು ಒಯ್ಯುವುದು ಅಕ್ಷಮ್ಯ ಅಪರಾಧವೆಂದು ತಿಳಿದಿದ್ದರೂ ಅಂತಹ ದುಷ್ಕøತ್ಯಗಳಲ್ಲಿ ಭಾಗವಹಿಸುವುದು ಸಲ್ಲದು ಎಂದರು.
ಚಲಿಸುವ ರೈಲುಗಳ ಫುಟ್ ಬೋರ್ಡ್ ಮೇಲೆ ನಿಲ್ಲುವುದು, ರೈಲಿನಲ್ಲಿ ಧೂಮಪಾನ ಮಾಡುವುದು, ಕ್ಷುಲ್ಲಕ ಕಾರಣಗಳಿಗಾಗಿ ರೈಲ್ವೆ ಹಳಿಗಳಲ್ಲಿ ಆತ್ಮಹತ್ಯೆಗೆ ಯತ್ನಿಸುವುದು, ಮೊಬೈಲ್ ಸೆಲ್ಫಿ ತೆಗೆದುಕೊಳ್ಳುವುದು ಮುಂತಾದ ರೀತಿಯ ಬಾಲಿಶ ವರ್ತನೆ ಮಾಡದಂತೆ ಅವರು ಹೇಳಿದರು.
Also read: ರಾಷ್ಟ್ರೀಯ ಶಿಕ್ಷಣ ಸಮಿತಿ ಚುನಾವಣೆ : 15 ಜನ ನಿರ್ದೇಶಕರಾಗಿ ಆಯ್ಕೆ
ಪ್ರಯಾಣ ಸಂದರ್ಭದಲ್ಲಿ ಅಪರಿಚಿತರಿಂದ ಆಹಾರ ತೆಗೆದುಕೊಳ್ಳುವುದು, ಅಪರಿಚಿತ ಪ್ರಯಾಣಿಕರಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಹಾಗೂ ಅಂತಹ ವ್ಯಕ್ತಿಗಳ ಬಗ್ಗೆ ಸದಾ ಜಾಗೃತರಾಗಿರುವಂತೆ ಸೂಚಿಸಿದರು.
ರೈಲ್ವೇ ಸಂಬಂಧಿತ ಸಹಾಯಗಳ ಸಹಾಯ ವಾಣಿ ಸಂಖ್ಯೆ 139, ಮಕ್ಕಳ ವಾಣಿ ಸಂಖ್ಯೆ 1098 ಮತ್ತು ರೈಲ್ವೆಯಲ್ಲಿ ಅದರ ಕೆಲಸದ ಮಾದರಿಯನ್ನು ಸಹ ಪ್ರದರ್ಶಿಸಲಾಗುತ್ತದೆ. ಈ ಮಾಹಿತಿಗಳನ್ನು ಎಲ್ಲರೂ ತಮ್ಮ ಕುಟುಂಬದ ಸದಸ್ಯರು ಮತ್ತು ಇತರರಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಕರಪತ್ರಗಳನ್ನು ಸುತ್ತಮುತ್ತಲ ಪ್ರದೇಶ ಮತ್ತು ಕಾಲೋನಿಗಳಲ್ಲಿ ಹಂಚಿ ಜಾಗೃತಿ ಮೂಡಿಸಲಾಯಿತು. ರೈಲ್ವೆ ಇಲಾಖೆಯು ಸುಗಮವಾಗಿ ಕಾರ್ಯನಿರ್ವಹಿಸಲು ಮತ್ತು ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವಂತೆ ಅವರು ಎಲ್ಲರಲ್ಲಿಯೂ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ವಿಭಾಗದ ರೈಲ್ವೆ ಮಾರ್ಗದ ಪಕ್ಕದ ಶಾಲೆಗಳ ಸಹಸ್ರಾರು ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರುಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post