ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೊಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ನೂತನವಾಗಿ ಜಾರಿಗೆ ಬಂದಿರುವ ಕಾವೇರಿ-2 ತಂತ್ರಾಂಶ ಕುರಿತು ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಾಗಾರವನ್ನು ಇಂದು ವಿನೋಬನಗರದ ವಿಪ್ರ ಟ್ರಸ್ಟ್ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ನೊಂದಣಾಧಿಕಾರಿ ಗಿರೀಶ್ ಎನ್. ಬಸಪ್ಪ ಗೌಡರ್ ಕಂದಾಯ ಇಲಾಖೆಯಲ್ಲಿ ಜಾರಿಗೆ ಬಂದಿರುವ ಕಾವೇರಿ ತಂತ್ರಾಂಶ-2 ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗಿದ್ದು, ಕೇವಲ 10 ನಿಮಿಷಗಳಲ್ಲಿಯೇ ಆಸ್ತಿ ನೊಂದಣಿ ಮಾಡಿಕೊಳ್ಳಬಹುದು. ಈ ತಂತ್ರಾಂಶ ನಾಗರಿಕಸ್ನೇಹಿಯಾಗಿದೆ ಎಂದರು.
ಬಹಳ ಮುಖ್ಯವಾಗಿ ಮಧ್ಯವರ್ತಿ ಹಾವಳಿ ಇದರಿಂದ ತಪ್ಪುತ್ತದೆ. ಸಮಯ ಕೂಡ ಉಳಿತಾಯವಾಗುತ್ತದೆ ಕಡಿಮೆ ದಾಖಲಾತಿಗಳಿದ್ದರೆ ಸಾಕು. ತಾಂತ್ರಿಕ ಅಂಶಗಳು ಇರುವ ಕಾರಣ ಎಲ್ಲಿಯೂ ಮೋಸವಾಗಲು ಸಾಧ್ವಯವಿಲ್ಲ. ಈ ತಂತ್ರಾಂಶ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಮುಖ್ಯವಾಗಿ ಬೆಳಗಿನಿಂದ ಸಂಜೆವರೆಗೆ ನೊಂದಣಿಗಾಗಿ ಸಾರ್ವಜನಿಕರು ಕಾಯುವುದು ತಪ್ಪುತ್ತದೆ ಎಂದರು.
ಸಾಗರ ಉಪ ನೊಂದಣಾಧಿಕಾರಿ ಚೇತನ್ ಪ್ರಾತ್ಯಕ್ಷತೆ ಮೂಲಕ ತಂತ್ರಾಂಶ ಕುರಿತು ವಿವರಗಳನ್ನು ನೀಡಿ, ಸಆರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಈ ಮೂಲಕ ಕಂದಾಯ ಇಲಾಖೆಯಲ್ಲಿ ಹಲವು ಸುಧಾರಣೆಗಳು ನಡೆಯುತ್ತವೆ. ಶಿವಮೊಗ್ಗದಲ್ಲಿಯೂ ಕೂಡ ಇದು ಅಭಿವೃದ್ಧಿಯಾಗಿದ್ದು, ಹಲವು ಕಡೆ ತರಬೇತಿಯನ್ನು ನೀಡಲಾಗುತ್ತಿದೆ. ಆನ್ಲೈನ್ ಮೂಲಕ ಆಗುವುದರಿಂದ ಯಾವುದೇ ದಾಖಲೆಗಳನ್ನು ತಿದ್ದಲು ಅವಕಾಶವಾಗುವುದಿಲ್ಲ. ಆದ್ದರಿಂದ ಇದು ಸಾರ್ವಜನಿಕ ಸ್ನೇಹಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಟಿ.ಎಸ್. ರವಿ, ವಿಜಯ್ ಎಂ.ಇ., ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್, ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















