ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎರಡು ಕಾಲಿನ ಮಂಡಿನೋವಿನಿಂದ ಬಳಲುತ್ತಿದ್ದ ಶಿಕ್ಷಕಿಯೊಬ್ಬರಿಗೆ ಪಾರ್ಶಿಯಲ್ ಅಥವಾ ಯುನಿಕಾಂಡಿಲಾರ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯ ಕೀಲು ಮೂಳೆ, ಕ್ರೀಡಾ ವೈದ್ಯ, ಕೀಲು ಮರುಜೋಡಣಾ ತಜ್ಞ ವೈದ್ಯ ಡಾ. ಅಭಿಷೇಕ್ ಎಂ.ಬಿ. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡೂರು ತಾಲ್ಲೂಕಿನ 52 ವರ್ಷದ ಶಿಕ್ಷಕಿಯೊಬ್ಬರು ಒಂದು ವರ್ಷದಿಂದ 2 ಕಾಲಿನ ಮಂಡಿನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾದರು. ಅವರ ದೈನ್ಯಂದಿನ ಚಟುವಟಿಕೆಯ ಮೇಲೆ ಮಂಡಿನೋವು ತೀವ್ರ ಪರಿಣಾಮ ಬೀರುತ್ತಿತ್ತು. ಶಿಕ್ಷಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಎರಡು ಮೊಣಕಾಲಿನ ಕೀಲುಗಳ ಒಳಭಾಗದಲ್ಲಿ ತೀವ್ರವಾದ ಅಸ್ತಿ ಸವಕಳಿಯಾಗಿರುವುದು ದೃಢವಾದ ನಂತರ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆ ಎರಡು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದರು.
ಒಂದು ತಿಂಗಳ ನಂತರ ಮತ್ತೆ ಅವರನ್ನು ತಪಾಸಣೆ ಮಾಡಲಾಯಿತು. ಅವರು ಆರೋಗ್ಯವಂತರಾಗಿದ್ದು, ದೈನಂದಿನ ಚಟುವಟಿಕೆಯಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇದ್ದ ನೋವಿನಿಂದ ಸಂಪೂರ್ಣ ಗುಣಮುಖರಾಗಿ ಶಿಕ್ಷಕಿ ವೃತ್ತಿಯನ್ನು ಮುಂದುವರೆಸಿದ್ದಾರೆ ಎಂದರು.
Also read: ಶಿವಮೊಗ್ಗ | ನಿಮ್ಮ ಬೈಕ್ ವಿಚಾರದಲ್ಲಿ ಈ ತಪ್ಪು ಮಾಡಿದಿರೋ, ಬೀಳತ್ತೆ ಭಾರೀ ದಂಡ
ಯುನಿಕಾಂಡಿಲಾರ್ ಕಡಿಮೆ ಔಷದೋಪಚಾರ ಮತ್ತು ಸಂಪನ್ಮೂಲಗಳನ್ನು ಉಪಯೋಗಿಸುವ ಶಸ್ತ್ರ ಚಿಕಿತ್ಸೆಯಾಗಿದೆ. ಆಸ್ಪತ್ರೆ ಒಳರೋಗಿಯಾಗಿರುವ ಅವಧಿಯು ಕಡಿಮೆಯಾಗಿರುತ್ತದೆ. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕಡಿಮೆ ರಕ್ತಸ್ತ್ರಾವ, ಕಡಿಮೆ ಮೂಳೆ ನಷ್ಟವಾಗಲಿದೆ. ರೋಗಿಗೆ ನೋವಿನ ಅನುಭವ ಕಡಿಮೆ ಮತ್ತು ವೇಗವಾಗಿ ಚೇತರಿಸಿಕೊಳ್ಳುತ್ತಾರೆ. ಕಡಿಮೆ ಅಕ್ರಮಣಶೀಲ ಮತ್ತು ಅಲ್ಪಾವಧಿಯ ಶಸ್ತ್ರ ಚಿಕಿತ್ಸೆ ಇದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್. ಶೈಲೇಶ್, ಸಂತೋಷ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















