ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗೆ ಶಿವಮೊಗ್ಗದ ಹಿರಿಯ ಸಂಗೀತ ವಿದ್ವಾಂಸ ಶೃಂಗೇರಿ ಎಚ್.ಎಸ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವ ನಾಗರಾಜ್, ನಾಡಿನ ಅಂಗ್ರಪಂಕ್ತಿಯ ಶಾಸ್ತ್ರೀಯ ಸಂಗೀತ ಗಾಯಕರೂ ಆಗಿದ್ದಾರೆ. ಅವರಿಗೆ ‘ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಅರಸಿ ಬಂದಿರುವುದು
ಮಲೆನಾಡಿಗೆ ಹೆಮ್ಮೆಯಾಗಿದೆ. ಮೈಸೂರಿನಲ್ಲಿ ಮೇ 26 ಮತ್ತು 27ರಂದು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವ ಕಾರ್ಯಕ್ರಮದ ಆಯೋಜನೆಗೊಂಡಿದ್ದು, ಸೋಮವಾರ (27) ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಂದು ಸಂಗೀತ ಒಕ್ಕೂಟ ಟ್ರಸ್ಟ್ನ ಟ್ರಸ್ಟಿ ಮತ್ತು ಹಿರಿಯ ವಿದ್ವಾಂಸ ಡಾ.ರಾ.ಸ. ನಂದಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Also read: ವಿದೇಶಕ್ಕೆ ನಿಮ್ಮ ಮಗ ಸಾಯಲಿ ಅಂತಲೇ ಕಳಿಸಿದ್ಧಿರಾ? ಸಿಎಂ ವಿರುದ್ಧ ಹೆಚ್ಡಿಕೆ ತೀಕ್ಷ್ಣ ವಾಗ್ದಾಳಿ
ಗಣ್ಯರ ಉಪಸ್ಥಿತಿ:
ದೇಶದ ಪ್ರಖ್ಯಾತ ಮತ್ತು ಹಿರಿಯ ವೀಣಾ ವಿದ್ವಾಂಸ ಪ್ರೊ. ರಾ. ವಿಶ್ವೇಶ್ವರನ್ ಅವರು ನಾಗರಾಜ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ. ಡಾ. ಸುಕನ್ಯಾ ಪ್ರಭಾಕರ, ಡಾ. ರಮಾ ಬೆಣ್ಣೂರು, ಲೇಖಕ ಎ.ಆರ್. ರಘುರಾಮ, ಮಾಧುರಿ ತಾತಾಚಾರಿ, ವೀಣಾವಿದ್ವಾಂಸ ಡಾ. ಮಧುಕರಂ ಪ್ರಶಾಂತ್ ಅಯ್ಯಂಗಾರ್ ಈ ಸಂದರ್ಭಕ್ಕೆ ಅತಿಥಿಗಳಾಗಿ ಸಾಕ್ಷಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾಧನೆ ಬಹು ದೊಡ್ಡದು:
ವಿದ್ವಾನ್ ನಾಗರಾಜ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ, ದಾಸ ಸಾಹಿತ್ಯದ ಅಭ್ಯುದಯಕ್ಕೆ ಕಳೆದ 40 ವರ್ಷಗಳಿಂದ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಗೀತ ಒಕ್ಕೂಟ ಟ್ರಸ್ಟ್ನ ಟ್ರಸ್ಟಿ ಮತ್ತು ಹಿರಿಯ ವಿದ್ವಾಂಸ ಡಾ.ರಾ.ಸ. ನಂದಕುಮಾರ್ ತಿಳಿಸಿದ್ದಾರೆ.
ಗುರುಗುಹ ವಾಗ್ಗೇಯ ಪ್ರತಿಷ್ಠಾನ, ಗುರುಗುಹ ಸಂಗೀತ ಸಮಗ್ರ ಮತ್ತು ಗುರುಗುಹ ವಿದ್ಯಾರ್ಥಿ ಬಳಗಗಳ ಮೂಲಕ ಇವರು ಶಿವಮೊಗ್ಗದಲ್ಲಿ ನಡೆಸುತ್ತಿರುವ ಸಂಗೀತ ಕಛೇರಿಗಳಲ್ಲಿ ಸ್ಥಳೀಯ, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿದ್ದಾರೆ. ಮಲೆನಾಡಿನಲ್ಲಿ ಶಾಸ್ತ್ರೀಯ ಸಂಗೀತದ ಕಂಪನ್ನು ಜತನವಾಗಿ ಕಾಪಾಡಿಕೊಂಡು ಬರುವಲ್ಲಿ ನಾಗರಾಜ್ ಅವರ ಶ್ರಮ ಮತ್ತು ಕಳಕಳಿ ಪ್ರಧಾನವಾಗಿದೆ. ಸಾವಿರಾರು ಸಂಗೀತ ಆಸಕ್ತರಿಗೆ ಬೋಧನೆ ಮಾಡಿರುವ ನಾಗರಾಜ್ ಅವರ ಗರಡಿಯಲ್ಲಿ ನಾಡಿಗೆ ನೂರಾರು ಸಂಗೀತ ವಿದ್ವಾಂಸರು ಕೊಡುಗೆಯಾಗಿದ್ದಾರೆ. ಇದು ದೊಡ್ಡ ಸಾಧನೆಯೇ ಆಗಿದೆ.
ಕಳೆದ 4 ದಶಕದಿಂದ ಶ್ರೀ ಪುರಂದರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಉತ್ಸವ, ರಾಷ್ಟ್ರೀಯ ವೀಣಾ ಉತ್ಸವ, ಮುತ್ತುಸ್ವಾಮಿ ದೀಕ್ಷಿತರ ಆರಾಧನೆಗಳನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿರುವ ನಾಗರಾಜ್ ಅವರು ನಾಡಿನ ಸಂಸ್ಕೃತಿ ಮತ್ತು ಕಲಾರಂಗದ ಮೇರು.
ಶ್ರೀ ಕ್ಷೇತ್ರ ಹರಿಹರಪುರ ಮಹಾ ಸಂಸ್ಥಾನ, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾಂಸರಾಗಿರುವ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಅಲಂಕರಿಸಿವೆ. ಅದರ ಸಾಲಿಗೆ ಈಗ ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿಯೂ ಮುಡಿಗೆ ಏರಿರುವುದು – ಪ್ರಶಸ್ತಿಯ ಮೌಲ್ಯವನ್ನೇ ಹೆಚ್ಚಿಸಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post