ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭಾರತರತ್ನ, ಕರ್ನಾಟಕ ಶಿಲ್ಪಿ ಸರ್ ಎಮ್. ವಿಶ್ವೇಶ್ವರಯ್ಯ ನವರ 161ನೇ ಜಯಂತಿಯನ್ನು ಶಿವಮೊಗ್ಗದ ರಿಟೈರ್ಡ್ ಇಂಜಿನಿಯರ್ಸ್ ಕೆಫೆ ಎಂಬ ಲೋಕೋಪಯೋಗಿ, ನೀರಾವರಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ನಿವೃತ್ತ ಇಂಜಿನಿಯರುಗಳ ವತಿಯಿಂದ ಇಂದು ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ, ಸರ್ ಎಮ್.ವಿ. ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವುದೇ ಅಲ್ಲದೆ, ಹಾಜರಿದ್ದ ಪ್ರತಿಯೊಬ್ಬ ಇಂಜಿನಿಯರುಗಳು ಅವರ ಕುಟುಂಬದವರು, ದೇಶ ಕಂಡ ಅಪ್ರತಿಮ ತಂತ್ರಜ್ಞ, ಆಡಳಿತಗಾರ, ಅರ್ಥಜ್ಞ, ದಾರ್ಶನಿಕ ಸರ್ ಎಮ್.ವಿ. ಯವರ ಸಾಧನೆ, ಮೈಲುಗಲ್ಲುಗಳ ಬಗ್ಗೆ ನೆನಪಿಸಿಕೊಂಡರು. ಪ್ರಸಕ್ತ ಸನ್ನಿವೇಶದಲ್ಲೂ ಸರ್ ಎಮ್.ವಿ. ಯವರ ಜೀವನಶೈಲಿ ಪ್ರಸ್ತುತ ಎಂಬುದನ್ನು ವಿವರಿಸಿದರು.


ಹಿರಿಯ ಇಂಜಿನಿಯರುಗಳಾದ ಹನುಮಂತಪ್ಪ, ಮಂಜುನಾಥ್, ಗುರುಲಿಂಗಸ್ವಾಮಿ, ಯೋಗೇಶ್, ನಂಜುಂಡಸ್ವಾಮಿ, ಭಂಡಿಗಡಿ ಕುಮಾರಸ್ವಾಮಿ, ಮೂಲಿಮನಿ, ಗುರುಮೂರ್ತಿ, ಅಣ್ಣಪ್ಪ, ರವಿಕುಮಾರ್, ನಾಗರಾಜ್, ಆನಂದಮೂರ್ತಿ, ಗಂಗಾಧರಪ್ಪ, ವಸಂತ್, ದೀಕ್ಷಿತ್ ಇವರುಗಳು ಇದ್ದರು. ಇವರ ಕುಟುಂಬದವರೂ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ, ದೇಶಕ್ಕೆ ಸರ್ ಎಮ್.ವಿ. ಯವರ ಕೊಡುಗೆ ಬಗ್ಗೆ ಮಾತನಾಡಿದರು.

ಕೆಫೆಯ ಅಧ್ಯಕ್ಷರಾದ ಇಂ. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ನೆರೆಹೊರೆಯವರನ್ನು ಸೇರಿಸಿಕೊಂಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಿಹಿಯೊಂದಿಗೆ ಸಂತಸ ಹಂಚಿಕೊಂಡು ಕಾರ್ಯಕ್ರಮ ಪೂರ್ಣಗೊಳಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















