ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮಾಡುತ್ತಾ ಬಂದಿದ್ದು, ಮಾಜಿ ಪ್ರಧಾನಿ ದಿ. ನೆಹರು ಅವರು ವಕ್ಫ್ ಕಾಯ್ದೆ ಜಾರಿಗೆ ತಂದಿದ್ದರು. ಕಾಂಗ್ರೆಸ್ ಸರ್ಕಾರದ ಇನ್ನೋರ್ವ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾಗ ಈ ಕಾಯ್ದೆಯನ್ನು ಇನ್ನೂ ಬಲಪಡಿಸಿದರು. ಇದರಿಂದ ದೇಶದ ಅನೇಕ ಕಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಭೂಮಿ ಕೆಲವೆಡೆ ಈಗ ವಕ್ಪ್ ಭೂಮಿ ಎಂದು ಆಗಿರುವುದು ದುರಂತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaraya Sarji ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಜಿಲ್ಲಾ ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾದಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ #Waqf Amendment Act ಪಾಸಾಗಿರುವುದಕ್ಕೆ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿ ಮಾತನಾಡಿದರು.
ಮತಕ್ಕಾಗಿ ದೇಶವನ್ನು, ಧರ್ಮವನ್ನು ಒಡೆದವರು ಕಾಂಗ್ರೆಸಿಗರು. ನಿರಂತರವಾಗಿ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಾ ಬಂದಿದ್ದು, ಪ್ರಧಾನಿ ಮೋದಿ ಅವರು ವಕ್ಫ್ ತಿದ್ದುಪಡಿ ಕಾಯ್ದೆ ತಂದು ದೇಶದ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು.
Also read: ಮೈಸೂರು | ತತ್ವ ಸಂಖ್ಯಾನ ಗ್ರಂಥದ ಸ್ಪರ್ಧೆಯಲ್ಲಿ ನೀಲಕಂಠ, ಶ್ರೀಹರಿಗೆ ಬಹುಮಾನ
ಎಸ್ಸಿ ಎಸ್ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಮಾತನಾಡಿ, ಬಿಜೆಪಿ ದೇಶದ ಎಸ್ಸಿ ಎಸ್ಟಿ ಸಮುದಾಯದವರಿಗೆ ಬೆನ್ನೆಲುಬಾಗಿದೆ. ಬಿಜೆಪಿ ಕೇಂದ್ರ ಸರ್ಕಾರ ಈ ಕಾಯ್ದೆ ತಂದು ದೇಶದ ದಲಿತ ವರ್ಗಕ್ಕೆ ಉತ್ತಮ ಸಂದೇಶ ನೀಡಿದ್ದು, ಅದಕ್ಕಾಗಿ ಪ್ರಧಾನಿಯವರಿಗೆ ಅಭಿನಂದಿಸುತ್ತೇನೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ವಕ್ಪ್ ತಿದ್ದುಪಡಿ ಕಾಯ್ದೆಯನ್ನು ‘ಉಮೀದ್’ ಎಂದು ಬದಲಾವಣೆ ಮಾಡಿ ತರಲಾಗಿದೆ. ಹಿಂದೆ ವಕ್ಪ್ ಕಾಯ್ದೆಯಿಂದ ನೊಂದವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಹಾಗಿರಲಿಲ್ಲ. ವಕ್ಪ್ ಆಸ್ತಿ ಎಂದು ಘೋಷಣೆಯಾದರೆ ಮೇಲ್ಮನವಿ ಸಲ್ಲಿಸುವ ಹಾಗೆ ಇರಲಿಲ್ಲ. ಇನ್ನುಮುಂದೆ ಹಾಗೇ ಆಗುವುದಿಲ್ಲ. ವಕ್ಫ್ ಆಸ್ತಿ ಎಂದು ಎಲ್ಲಿಯೇ ನಮೂದಾದರೂ ನಿಮಗೆ ಅದು ಆನ್ ಲೈನ್ ಮೂಲಕ ತಿಳಿಯುತ್ತದೆ, ಕೋರ್ಟ್ನಲ್ಲೂ ಪ್ರಶ್ನಿಸುವ ಅಧಿಕಾರವನ್ನು ಈಗಿನ ಕಾಯ್ದೆ ನೀಡುತ್ತದೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ಕೂಡ ತನಿಖಾಧಿಕಾರಿಗಳಾಗಿ ಅವರು ಭಾಗವಹಿಸಬಹುದು. ದೇಶದ ಎಸ್ಸಿ ಎಸ್ಟಿ ಸಮಾಜಕ್ಕೆ ಭೂಮಿಯ ಹಕ್ಕು ಉಳಿಸಲು ಈ ಕಾಯ್ದೆ ಸಹಕಾರಿಯಾಗಲಿದೆ ಎಂದರು.
ವಿಜಯೋತ್ಸವದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿಗಳಾದ ಮಾಲತೇಶ್, ಶಿವರಾಜ್, ಪ್ರಮುಖರಾದ ಶಿವಾನಂದ್, ಅಣ್ಣಪ್ಪ, ಗಣೇಶ್ ಬೀಳಗಿ, ಮೋಹನ್, ರಾಜು ತಲ್ಲೂರು, ಸುಮಲತಾ, ಶುಭಾ, ಮಂಜುನಾಥ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post