ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜ.26 ಗಣರಾಜ್ಯೋತ್ಸವದಂದು ನಮ್ಮ ದೇಶದ ಪ್ರತಿಷ್ಠಿತ, ಹೆಮ್ಮೆಯ ಯುದ್ಧ ವಿಜೇತ ಟ್ಯಾಂಕರ್ ಭೂಪತಿ ಜೆಡ್ಎಕ್ಸ್ 1878 ಜಿ.ಎಂ. #Tanker Bhupathi ZX 1878 ನಗರದ ಫ್ರೀಡಂ ಪಾರ್ಕ್ನಲ್ಲಿ ಶಾಶ್ವತವಾಗಿ ಸ್ಥಾಪನೆಗೊಳ್ಳಲಿದೆ.
ಕಳೆದ ಒಂದು ವರ್ಷದಿಂದ ಎಂಆರ್ಎಸ್ ಸರ್ಕಲ್ನಲ್ಲಿ ಧೂಳು ಹಿಡಿಯುತ್ತ ನಿಂತಿರುವ ಯುದ್ಧ ಟ್ಯಾಂಕರ್ಗೆ ಕೊನೆಗೂ ಸೂಕ್ತ ಜಾಗ ದೊರಕಿಸಿಕೊಡುವಲ್ಲಿ ಸ್ಥಳೀಯ ಆಡಳಿತ ಯಶಸ್ವಿಯಾಗಿದೆ.
ಆ.13 2023ರಂದು ಶಿವಮೊಗ್ಗದ ಸಂಗೋಳ್ಳಿರಾಯಣ್ಣ ವೃತ್ತದಿಂದ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಯುದ್ಧ ಟ್ಯಾಂಕರ್ನ್ನು ಬರಮಾಡಿಕೊಳ್ಳಲಾಯಿತು. ಜನಪ್ರತಿನಿಧಿಗಳು, ಎನ್ಸಿಸಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿವಮೊಗ್ಗದ ನಾಗರಿಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ತಾತ್ಕಲಿಕವಾಗಿ ಎಂಆರ್ಎಸ್ ವೃತ್ತದ #MRS Circle ಬಳಿ ಇದನ್ನು ಇಡಲಾಗಿತ್ತು. ಶಾಶ್ವತವಾಗಿ ಎಲ್ಲಿ ಸ್ಥಾಪಿಸಬೇಕು ಎನ್ನುವ ಚರ್ಚೆ ನಡೆದಿತ್ತು. ಇನ್ನೊಂದು ಯುದ್ಧ ವಿಮಾನ ಕೂಡ ನಗರಕ್ಕೆ ಆಗಮಿಸಲಿದ್ದು, ಅಂತಿಮವಾಗಿ ಎರಡನ್ನು ನಗರದ ಫ್ರೀಡಂ ಪಾರ್ಕ್ #Freedompark (ಅಲ್ಲಮಪ್ರಭು ಉದ್ಯಾನವನ)ದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅದಕ್ಕೆ ಪೂರಕವಾಗಿ ಕಟ್ಟೆಯನ್ನು ಕೂಡ ನಿರ್ಮಿಸಲಾಗಿದ್ದು, ಟ್ಯಾಂಕರ್ನ್ನು ಸ್ಥಾಪಿಸಲಾಗಿದೆ. ಈಗ ಅದಕ್ಕೆ ಮೂಲರೂಪ ನೀಡುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಎಂಆರ್ಎಸ್ ಸರ್ಕಲ್ನಲ್ಲಿ ಅದನ್ನು ಸ್ಥಾಪಿಸುವ ಉದ್ದೇಶವಿತ್ತು. ಹಾಗಾಗಿ ಅಲ್ಲೆ ಪಕ್ಕದಲ್ಲಿರುವ ಮೆಸ್ಕಾಂ ವಸತಿ ಗೃಹಗಳ ಆವರಣದಲ್ಲಿ ಟ್ಯಾಂಕರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಅದರ ಸುತ್ತಲೂ ಪಂಜರ ಸ್ಥಾಪಿಸಲಾಗಿತ್ತು. ಆದರೆ ಎಂಆರ್ಎಸ್ ಸರ್ಕಲ್ನಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿರುವುದರಿಂದ ಅಲ್ಲಿಂದ ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು. ಅಲ್ಲದೆ ಅಲ್ಲಿಯೇ ಹೆದ್ದಾರಿ ಹಾದು ಹೋಗಲಿದೆ. ಹಾಗಾಗಿ ಅಲ್ಲಿ ಟ್ಯಾಂಕರ್ ಸ್ಥಾಪನೆಯ ಅನುಮತಿ ನಿರಾಕರಿಸಲಾಗಿತ್ತು.
ಟ್ಯಾಂಕರ್ ನಿರ್ವಹಣೆ ಮಾಡದಿರುವುದು ಮತ್ತು ಸ್ಥಾಪನೆಗೆ ಸೂಕ್ತ ಜಾಗ ನಿಗದಿ ಮಾಡದಿರುವ ಕುರಿತು ಮಾಧ್ಯಮಗಳು ಸರಣಿ ವರದಿ ಮಾಡಿದ್ದವು. ಅಲಂಕಾರಕ್ಕೆ ಹಾಕಿದ್ದ ಹೂವು ಕೊಳೆತು, ಒಣಗಿದ್ದರೂ ತೆಗೆದಿರಲಿಲ್ಲ. ಟ್ಯಾಂಕರ್ ಸಂಪೂರ್ಣ ಧೂಳಿನಲ್ಲಿ ಮುಳುಗಿದೆ.
ಅಕ್ಕಪಕ್ಕ ಸಂಪೂರ್ಣ ಕೆಸರುಮಯವಾಗಿತ್ತು. ಈಗ ಅದಕ್ಕೆ ಮುಕ್ತಿ ದೊರಕಿದೆ. 71ರ ಬಾಂಗ್ಲಾ ಯುದ್ಧದಲ್ಲಿ ಈ ಟ್ಯಾಂಕರ್ ಉಪಯೋಗವಾಗಿತ್ತು. ಅಲ್ಲದೆ ಇಂಡೋ ಪಾಕ್ ಯುದ್ಧದಲ್ಲೂ ಕೂಡ ಇದರ ಕೊಡುಗೆ ಇತ್ತು ಎಂದು ನಿವೃತ್ತ ಸೈನಿಕರ ಸಂಘದ ಪ್ರಮುಖರು ತಿಳಿಸಿದ್ದಾರೆ.
1983-84ರವರೆಗೆ ಈ ಟ್ಯಾಂಕರ್ ಸೇವೆಯಲ್ಲಿತ್ತು. ಅದು ನಿಷ್ಕ್ರೀಯಗೊಂಡ ಬಳಿಕ ಅದನ್ನು ರಕ್ಷಣ ಇಲಾಖೆಯ ಅನುಮತಿ ಪಡೆದು ಇಲ್ಲಿಗೆ ತರುವುದು ಸಾಹಸದ ಕೆಲಸವಾಗಿತ್ತು, ಸಂಸದ ಬಿ.ವೈ.ರಾಘವೇಂದ್ರ ಮತ್ತು ಸೈನಿಕ ಇಲಾಖೆಯ ಅಂದಿನ ಉಪನಿರ್ದೇಶಕರಾದ ಡಾ.ಸಿ.ಎಸ್.ಹೀರೇಮಠ್ ಮತ್ತು ಜಿಲ್ಲಾ ಮಾಜಿ ಸೈನಿಕರ ಸಂಘದ ಸತತ ಪ್ರಯತ್ನದಿಂದ ಈ ಕಾರ್ಯ ಯಶಸ್ವಿಯಾಗಿದೆ.
ಯುವಕ ಯುವತಿಯರಿಗೆ ದೇಶ ಪ್ರೇಮ ಮತ್ತು ಸೈನ್ಯಕ್ಕೆ ಭರ್ತಿಯಾಗಲು ಪ್ರೇರಣೆ ನೀಡುವ ಈ ಯುದ್ಧ ಟ್ಯಾಂಕರ್ನ ಸ್ಥಾಪನೆ ಕಾರ್ಯಕ್ಕೆ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ.26, 2025ರಂದು ಸಕಲ ಗೌರವಗಳೊಂದಿಗೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post