ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಗೆಲ್ಲುತ್ತದೆ ಎಂದು ಪಂಚಾಯತ್ರಾಜ್ ಗಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಕಡೆ ಕಾಂಗ್ರೆಸ್, ಜೆಡಿಎಸ್, ಮತದಾರರು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಮುಸಲ್ಮಾನರು ಕೂಡ ಈ ಬಾರಿ ಬಿಜೆಪಿಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ನವರು ದಲಿತರು, ಹಿಂದುಳಿದವರು ನಮ್ಮ ಜೊತೆಗ ಇದ್ದಾರೆ ಎನ್ನುತ್ತಿದ್ದಾರೆ. ಈ ಬಾರಿ ದಲಿತರು, ಹಿಂದುಳಿದವರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿನೇ ದಿನೇ ಕ್ಷೀಣಿಸುತ್ತಿದೆ. ಕೆಲವೆಡೆ ಪ್ರಾದೇಶಿಕ ಪಕ್ಷವಾಗುತ್ತಿದೆ. ಹಲವು ಕಡೆಗಳಲ್ಲಿ ಒಂದೆರೆಡು ಸ್ಥಾನಗಳನ್ನು ಸಹ ಗೆದ್ದಿಲ್ಲ. ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ತೃಪ್ತಿ ಪಡಿಸಿದರೆ, ನಮ್ಮ ಪಕ್ಷ ಉಳಿಯುತ್ತೇ ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಸಚಿವರು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.

ನಮ್ಮ ಹಿಂದುಗಳ ಬಡತನವನ್ನು ದುರುಪಯೋಗಪಡಿಸಿಕೊಂಡು ಹೆಣ್ಣುಮಕ್ಕಳಿಗೆ ಆಸೆ ಆಮಿಷ ತೋರಿಸಿ ಮತಾಂತರ ಮಾಡುವುದನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದರು.

ಬಿಪಿನ್ ರಾವತ್ ಅವರ ನಿಧನವನ್ನು ಕೆಲವು ವಿಕೃತ ಮನಸ್ಸಿನವರು ಸಂಭ್ರಮಿಸುತ್ತಿದ್ದಾರೆ. ಅವರು ಈ ದೇಶದಲ್ಲಿ ಇರೋದಕ್ಕೆ ಅಯೋಗ್ಯರು ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















