ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯವರು ಇತರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡಲು ಆಗದಷ್ಟು ಬಹುಮತವನ್ನು ಕಾಂಗ್ರೆಸ್ ಈ ಬಾರಿ ಪಡೆಯುತ್ತದೆ ಎಂದು ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ Madhu Bangarappa ಹೇಳಿದರು.
ಅವರು ಇಂದು ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಯಾವಾಗಲೂ ಹಿಂಬಾಗಿಲಿನಿಂದಲೇ ಅಧಿಕಾರ ಪಡೆದಿದೆ ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ನಾವು ಈಗ ಎಷ್ಟು ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಏಕೆಂದರೆ ಅದು ಅವರಿಗೆ ಗೊತ್ತಾದರೆ ಈಗಿನಿಂದಲೇ ಶಾಸಕರ ಖರೀದಿಯಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ಶಾಸಕರನ್ನು ಕೊಂಡುಕೊಳ್ಳದಿರುವಷ್ಟು ಬಹುಮತವನ್ನು ಕಾಂಗ್ರೆಸ್ ಪಡೆಯುತ್ತದೆ ಎಂದರು.
ಬಿಜೆಪಿ ಸರ್ಕಾರದಲ್ಲ ಬಡವರ ಬದುಕು ದುಸ್ತರವಾಗಿದೆ. ಆಡಳಿತ ವೈಫಲ್ಯ ಕಂಡಿದೆ. ಸೊರಬದಲ್ಲೂ ಇದೇ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಆಡಳಿತ ಸತ್ತುಹೋಗಿದ್ದರೆ, ಸೊರಬಾದಲ್ಲಿ ಅದನ್ನು ಈಗಾಗಲೇ ಸಮಾದಿ ಮಾಡಲಾಗಿದೆ. ಈ ಬಾರಿ ಸೊರಬಾದ ಜನರು ನನ್ನನ್ನು ಅತಿಹೆಚ್ಚು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನನ್ನ ಹುಟ್ಟುಹಬ್ಬಕ್ಕೆ ವೋಟು ಹಾಕುವುದೇ ನಗೆ ಬಹುಮಾನ ನೀಡಿದ ಹಾಗೆ. ನಾನು ಅವರಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ ತಂದೆಯ ನೆರಳಿನಲ್ಲಿ ಬಂದ ನನಗೆ ಅವರೇ ಗುರುಗಳು. ಅವರ ಆಶೀರ್ವಾದ ನನಗಿದೆ. ಕಾಂಗ್ರೆಸ್ ಪಕ್ಷ ನನಗೆ ಅತಿದೊಡ್ಡ ಅಧಿಕಾರಗಳನ್ನು ನೀಡಿದೆ. ಆ ನಂಬಿಕೆ ಉಳಿಸಿಕೊಳ್ಳುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇನೆ ಎಂದರು.
ಪ್ರಧಾನಿ ಮೋದಿಯವರು ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರೇ ಹೊರತು ಯಾವ ಭರವಸೆಯನ್ನೂ ಕೊಡಲಿಲ್ಲ. ಮೋದಿ ಭಕ್ತನೊಬ್ಬ ಸಾವು ಕಂಡರೆ ಅವನಿಗೆ ಸಾಂತ್ವನ ಕೂಡ ಹೇಳಲಿಲ್ಲ. ಸಾವಿನ ಮನೆಯ ರಾಜಕಾರಣ ಮಾಡುವವರು ಬಿಜೆಪಿಯವರು. ತಕ್ಷಣವೇ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವು ನೀಡಲಿ ಎಂದ ಅವರು, ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಮಾತನಾಡಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಶಾಪ ಈ ಬಿಜೆಪಿಯವರಿಗೆ ತಟ್ಟದೆ ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಧು ಬಂಗಾರಪ್ಪ ಅವರಿಗೆ ಹೂಗುಚ್ಚ ಹಾಗೂ ಶಾಲು ಹೊದಿಸುವುದರ ಮೂಲಕ ಹುಟುಹಬ್ಬಕ್ಕೆ ಶುಭ ಕೋರಿದರು. ಕಾಂಗ್ರೆಸ್ ಮುಖಂಡರುಗಳಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಎನ್. ರಮೇಶ್, ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಬಲದೇವಕೃಷ್ಣ, ದೀಪಕ್ ಸಿಂಗ್, ಖಲೀಂ, ವೈ.ಹೆಚ್. ನಾಗರಾಜ್, ಶ್ರೀನಿವಾಸ ಕರಿಯಣ್ಣ, ಪಿ.ಓ. ಶಿವಕುಮಾರ್, ವೇದಾ ವಿಜಕುಮಾರ್, ಕಲಗೋಡು ರತ್ನಾಕರ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post