ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿದ್ದರಾಮಯ್ಯ ಜೀವಂತ ಇರುವಾಗಲೇ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋದಿಲ್ಲ. ಇನ್ನು ಅವರ ಹೆಣ ತಗೊಂಡು ಏನು ಮಾಡೋದು? ಅವರ ಹೆಣ ನಾಯಿ ಕೂಡ ಮೂಸಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಶಾಸಕ ಈಶ್ವರಪ್ಪ MLA Eshwarappa ಹರಿಹಾಯ್ದಿದ್ದಾರೆ.
ಸತ್ರೂ ಬಿಜೆಪಿ ಸೇರಲ್ಲ ಎಂಬ ಸಿದ್ದರಾಮಯ್ಯ Siddaramaiah ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಣೆಬರಹ ಮತದಾರರಿಗೆ ಗೊತ್ತು. ಆ ಮನುಷ್ಯ ನಂಬಿಗಸ್ತ ಅಲ್ಲ. ಹಾಗೂ ಸುಧಾರಿಸುವುದಿಲ್ಲ. ಚುನಾವಣೆಯಲ್ಲಿ ಸೋಲಿಸ್ತಾರೆ ಎಂಬ ಒಂದೇ ಕಾರಣಕ್ಕೆ ಕ್ಷೇತ್ರ ಹುಡುಕ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕುರಿತು ಬಫೂನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಸಿದ್ದರಾಮಯ್ಯ ಕುರಿತು ಹೇಳಲು ಬರುತ್ತದೆ. ಆದರೆ ನಾನು ಅದನ್ನು ಹೇಳುವುದಿಲ್ಲ. ಕಟೀಲ್ ರಾಜ್ಯಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಒಬ್ಬ ಪಕ್ಷದ ರಾಜ್ಯಾಧ್ಯಾಕ್ಷರ ಬಗ್ಗೆ ಇಷ್ಟು ಹೀನಾಯವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ಅದರ ಗೌರವ ಮಾತನಾಡಲಿ. ಚುನಾವಣೆ ಬಳಿಕ ಅವರಿಗೇ ಎಲ್ಲ ಗೊತ್ತಾಗುತ್ತದೆ ಎಂದು ಹೇಳಿದರು.
Also read: ಆಸ್ಪತ್ರೆಯಲ್ಲೇ ನೇಣಿಗೆ ಶರಣಾದ ಮಾನಸಿಕ ಅಸ್ವಸ್ಥ: ದೂರು ದಾಖಲು
ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ರಾಷ್ಟ್ರೀಯ ನಾಯಕರು ವಿಚಾರ ಮಾಡುತ್ತಾರೆ. ಇಂದಲ್ಲ, ನಾಳೆ ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಬಿಟ್ಟರೆ ಬೇರೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಳಿನ್ಕುಮಾರ್ ಕಟೀಲ್ ಅವರು ಕಾಲಲ್ಲಿ ಚಕ್ರ ಹಾಕಿಕೊಂಡು ರಾಜ್ಯವನ್ನು ಸುತ್ತುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಫೆ.5ರಂದು ಬೆಳಿಗ್ಗೆ 11 ಗಂಟೆಗೆ ಎನ್ಇಎಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶ ನಡೆಯಲಿದೆ. ವೋಟರ್ ಲಿಸ್ಟಿನಲ್ಲಿ ಪೇಜಿಗೆ ಒಬ್ಬರಂತೆ ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಸುಮಾರು 8200 ಪೇಜ್ ಪ್ರಮುಖರು ಸಭೆಗೆ ಬರಲಿದ್ದಾರೆ. ಶಿವಮೊಗ್ಗದಲ್ಲಿ ಸಭೆ ನಡೆದ ನಂತರ ಭದ್ರಾವತಿ ಹಾಗೂ ಉಳಿದ ಕಡೆಗಳಲ್ಲಿ ಪೇಜ್ ಪ್ರಮುಖರ ಸಭೆ ನಡೆಯಲಿದೆ ಎಂದರು.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಡಿ.ಕೆ. ಶಿವಕುಮಾರ್ ಏನೂ ಉತ್ತರ ಕೊಟ್ಟಿಲ್ಲ. ಯಾವ್ಯಾವ ದೇಶದಲ್ಲಿ ಮನೆ ಮಾಡಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರ ಬಗ್ಗೆ ವೈಯಕ್ತಿಕವಾಗಿ ಅಭಿಪ್ರಾಯಿಸುವುದಿಲ್ಲ. ಆದರೆ ಆಡಿಯೋ ಬಗ್ಗೆ ಅವರು ಉತ್ತರ ಕೊಡಲಿ ಎಂದರು.
ಜೆಡಿಎಸ್ ಮತ್ತ ಕಾಂಗ್ರೆಸ್ಗೆ ರಾಜ್ಯಾಧ್ಯಕ್ಷ ಅಂತ ಇರುತ್ತಾರೆ. ಆದರೆ ಈ ಎರಡೂ ಪಕ್ಷದಲ್ಲೂ ನಾನೇ ಅಭ್ಯರ್ಥಿ ಅಂತ ಹೇಳಿಕೊಂಡು ತಿರುಗುತ್ತಾರೆ. ನಿಖಿಲ್ ಅಭ್ಯರ್ಥಿ ಅಂತ ಹೆಚ್ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ರು. ಭವಾನಿ ರೇವಣ್ಣ ತಾನೂ ಅಭ್ಯರ್ಥಿ ಎನ್ನುತ್ತಾರೆ. ಸಿದ್ದರಾಮಯ್ಯ ಕೋಲಾರಕ್ಕೆ ತಾನು ಅಭ್ಯರ್ಥಿ ಎಂದು ಹೇಳುತ್ತಾರೆ. ಇವರಿಗೆ ಪಕ್ಷದ ಶಿಸ್ತು ಇಲ್ಲ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















