ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿಯಾಗುತ್ತೇವೆ. ಸೈನಿಕರು ಆರೋಗ್ಯದಿಂದ ಇದ್ದರೆ ನಾವೆಲ್ಲರೂ ನೆಮ್ಮದಿಯ ನಿದ್ರೆ ಮಾಡಲು ಸಾಧ್ಯ. ನಾವು ಸದಾ ದೇಶ ಕಾಯುವ ಸೈನಿಕ ಮತ್ತು ರೈತ ಹಾಗೂ ತನ್ನ ಸ್ವಾಭಿಮಾನದ ಶ್ರಮದಿಂದ ದೇಶಕ್ಕೆ ಸೇವೆ ಸಲ್ಲಿಸುವ ಅಸಂಘಟಿತ ಕಾರ್ಮಿಕರಿಗೆ ಮೊದಲ ಸ್ಥಾನ ನೀಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ MP Raghavendra ಹೇಳಿದ್ದಾರೆ.
ಅವರು ಇಂದು ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಹೆಲ್ತ್ಕೇರ್ನಲ್ಲಿ ಶಿವಮೊಗ್ಗ ಜಿಲ್ಲಾ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಇ-ಶ್ರಮ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಚಿತ ಶಿಕ್ಷಣ ಮತ್ತು ಉಚಿತ ಆರೋಗ್ಯ ಹಾಗೂ ಒಳ್ಳೆಯ ಕೆಲಸ ಮಾಡುವವರಿಗೆ ಕೈಜೋಡಿಸುವುದೇ ಶ್ರೇಷ್ಠದಾನವಾಗಿದೆ ಎಂದು ಶೃಂಗೇರಿ ಶ್ರೀಗಳು ಆಶೀರ್ವಚನದಲ್ಲಿ ಹೇಳಿದ್ದರು. ತೃಪ್ತಿ ಕ್ಲಿನಿಕ್ನ ಡಾ. ಚಂದ್ರಶೇಖರ್ ಅವರು ಕಳೆದ 2ವರ್ಷಗಳಿಂದ ಸಾವಿರಾರು ಅಸಂಘಟಿತ ಕಾರ್ಮಿಕರಿಗೆ ಮತ್ತು ಬಡವರಿಗೆ ಉಚಿತವಾಗಿ ಸಾವಿರಾರು ರೂ.ಗಳ ವೆಚ್ಚದ ಚಿಕಿತ್ಸೆಯನ್ನು ಮತ್ತು ವಿವಿಧ ತಪಾಸಣಾ ಸೌಲಭ್ಯಗಳನ್ನು ನೀಡುತ್ತಿದ್ದು, ಅಪರೂಪದ ವೈದ್ಯರಾಗಿದ್ದಾರೆ ಎಂದರು.
ದೇಶ ಕಾಯುವ ಕಾಯಕಯೋಗಿ ಮೋದಿಜೀ ಅವರು, ಈ ಅಸಂಘಟಿತ ಕಾರ್ಮಿಕರಿಗಾಗಿಯೇ ಇ-ಶ್ರಮ್ ಕಾರ್ಡ್ ಯೋಜನೆಯನ್ನು ತಂದಿದ್ದಾರೆ. ಹುಟ್ಟಿನಿಂದ ಸಾವಿನವರೆಗೆ ಈ ಕಾರ್ಡ್ನಿಂದ ಕಾರ್ಮಿಕನ ಕುಟುಂಬಕ್ಕೆ ವಿವಿಧ ರೀತಿಯ ನೆರವು ಲಭ್ಯವಾಗಲಿದೆ. ಈಗಾಗಲೇ ಇ-ಶ್ರಮ್ ಪೋರ್ಟಲ್ನಲ್ಲಿ 33 ಕೋಟಿ ಕಾರ್ಮಿಕರು ನೋಂದಣಿ ಮಾಡಿದ್ದಾರೆ. ತಿಂಗಳಿಗೆ 50 ರೂ. ಕಟ್ಟಿದರೆ 45 ವರ್ಷದ ನಂತರ ಅವರಿಗೆ 4000 ರೂ. ಪಿಂಚಣಿ ಬರುವ ಯೋಜನೆ ನೀಡಿದ್ದಾರೆ.
ಆಯುಷ್ಮಾನ್ ಭಾರತ್ನಲ್ಲಿ ಪ್ರತೀವರ್ಷ 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಸೌಲಭ್ಯ ದೊರೆಯಲಿದೆ. ಪಿಎಂ ಸುರಕ್ಷಾ ಭೀಮಾ ಯೋಜನೆಯಡಿ ವರ್ಷಕ್ಕೆ 20 ರೂ. ಕಟ್ಟಿದರೆ ವಿವಿಧ ಆರೋಗ್ಯ ಸೌಲಭ್ಯಗಳ ಜೊತೆಗೆ ವ್ಯಕ್ತಿ ಮೃತಪಟ್ಟಲ್ಲಿ 2 ಲಕ್ಷ ರೂ. ಹಣ ಕುಟುಂಬಕ್ಕೆ ದೊರೆಯುತ್ತದೆ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ, ಶಿವಮೊಗ್ಗಕ್ಕೆ ಮೆಡಿಕಲ್, ಆಯುರ್ವೇದ, ಕೃಷಿ ಮತ್ತು ತೋಟಗಾರಿಕೆ, ಪಶು ವಿದ್ಯಾಲಯ, ರಾಷ್ಟ್ರೀಯ ರಕ್ಷಾ ಯೂನಿರ್ವಸಿಟಿ, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಹಲವು ಯೋಜನೆಗಳು ಶಿವಮೊಗ್ಗಕ್ಕೆ ಬಂದವು. ಮೋದಿಯವರ ಕನಸಿನಂತೆ ಉದ್ಯೋಗ ಸೃಷ್ಟಿಗೆ ಅನೇಕ ಕಾರ್ಯಕ್ರಮ ಕೈಗೊಂಡಿದ್ದು, ಜಪಾನ್ ದೇಶದ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಚಾಲಕರು ಮತ್ತು ನರ್ಸ್ಗಳಿಗೆ ಅಲ್ಲಿ ವಿಪರೀತ ಬೇಡಿಕೆಯಿದ್ದು, ಜಪಾನ್ ಭಾಷೆ ಕಲಿತರೆ ಸಾಕು ಅಲ್ಲಿಗೆ ಅವರಿಗೆ ವೀಸಾ ನೀಡಿ, ತಿಂಗಳಿಗೆ ಮೂರು ಲಕ್ಷ ರೂ. ಸಂಬಳ ನೀಡುತ್ತಾರೆ. ಈಗಾಗಲೇ ನನ್ನ ಕ್ಷೇತ್ರವ್ಯಾಪ್ತಿಯ ಬೈಂದೂರಿನಿಂದ 200 ಜನರಿಗೆ ಕಳುಹಿಸಲಾಗಿದೆ. ಶಿವಮೊಗ್ಗದವರು ಕೂಡ ಸಂಪರ್ಕಿಸಬಹುದು ಎಂದರು.
ಯುದ್ಧ ನಡೆಯುತ್ತಿದೆ. ಎಷ್ಟೇ ಶ್ರೀಮಂತರಾದರೂ ಬಾಂಬ್ ದಾಳಿಗೆ ಒಳಗಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ಗೆ 600 ರೂ. ಆಗಿದೆ. ಮೋದಿಜಿ ಆಶೀರ್ವಾದದಿಂದ ಶಿವಮೊಗ್ಗದ ಜನತೆಗೆ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ ಎಂದರು.
ಡಾ. ಚಂದ್ರಶೇಖರ್ ಮಾತನಾಡಿ, ಕಿಡ್ನಿ ಮತ್ತು ಮೂತ್ರಕೋಶದ ಚಿಕಿತ್ಸೆ ಪ್ರತೀ ಗುರುವಾರ ನಮ್ಮ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತವಾಗಿರುತ್ತದೆ. ಇಸಿಜಿ, ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಯೂರಾಲಜಿ ಕನ್ಸಲ್ಟೇಷನ್, ಸಿಆರ್ಎಂ ಸ್ಕ್ಯಾನ್, ಮೂತ್ರಪಿಂಡದ ಕಲ್ಲಿನ ಸ್ಕ್ಯಾನ್, ಇಸಿಜಿ, ಬಿಪಿ, ಶುಗರ್ ಟೆಸ್ಟಿಂಗ್ ಉಚಿತವಾಗಿರುತ್ತದೆ. ಬಾಕಿ ದಿನಗಳಲ್ಲಿ ಸುಮಾರು 3000 ರೂ.ಗಳ ಈ ತಪಾಸಣೆ ನಮ್ಮ ಆಸ್ಪತ್ರೆಯಲ್ಲಿ ಕೇವಲ 300 ರೂ.ಗಳಿಗೆ ಮಾಡುತ್ತೇವೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ. ಸೇವೆಯ ಉದ್ದೇಶದಿಂದ ಮಾತ್ರ ಇದನ್ನು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು. ನೂರಾರು ಕಾರ್ಮಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅಸಂಘಟಿತ ಮತ್ತು ಕಟ್ಟಡ ಕಾರ್ಮಿಕರ ಒಕ್ಕೂಟದ ಪ್ರಮುಖರಾದ ಪೆರುಮಾಳ್, ಸುಂದರೇಶ್ ಬಾಬು, ಹಸೂಡಿ ಸಂಜಯ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ರವಿಚಂದ್ರ, ಮಂಜುನಾಥ, ವಿನ್ಸೆಂಟ್ ರೋಡ್ರಿಗಸ್, ಕಾರ್ಮಿಕ ಅಧಿಕಾರಿಗಳಾದ ಸುಚಿತಾ ಮತ್ತು ಕೃಷ್ಣ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















