ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಲಶಕ್ತಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ಅಬ್ಬಲಗೆರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮನೆಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮನೆಮನೆಗೆ ಗಂಗೆ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯ ಕರಾರುವಕ್ಕಾದ ಅನುಷ್ಠಾನದಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಇದರಿಂಗಾಗಿ ವ್ಯರ್ಥವಾಗಿ ಹರಿಯುವ ನೀರಿನ ಸದ್ಬಳಕೆಯಾಗಲಿದೆ ಎಂದ ಅವರು, ಸಾರ್ವಜನಿಕ ವಲಯದಲ್ಲಿ ಈ ಯೋಜನೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಸ್ಥಳೀಯ ಜನಪ್ರತಿನಿಧಿಗಳೇ ಒಂದೆಡೆ ಸೇರಿ ಸ್ಥಳೀಯ ಆಡಳಿತ ವ್ಯವಸ್ಥೆ ಮಾಡುವುದರ ಜೊತೆಗೆ ತಮ್ಮ ಗ್ರಾಮದ ಅಗತ್ಯಗಳಿಗೆ ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವ ಮಹತ್ವದ ಉದ್ಧೇಶದಿಂದ ಗ್ರಾಮ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದಿವೆ. ಅದರ ಉತ್ತಮ ಆಡಳಿತದಿಂದಾಗಿ ಗ್ರಾಮಗಳ ಆಡಳಿತದಲ್ಲಿ ಸುಧಾರಣೆ ಹಾಗೂ ಮಾದರಿ ಗ್ರಾಮ ನಿರ್ಮಾಣ ಸಾಧ್ಯವಾಗಲಿದೆ. ವಿಶೇಷವಾಗಿ ಅಬ್ಬಲಗೆರೆ ಗ್ರಾಮ ಪಂಚಾಯಿತಿಯು ರೂಪಿಸಿದ ಕಾರ್ಯಯೋಜನೆಗಳ ಅನುಷ್ಠಾನದಿಂದ ಜಿಲ್ಲೆಯಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಗ್ರಾಮೀಣ ಜನರ ಜೀವನ ಹಸನಾಗುವವರೆಗೆ ವಿರಮಿಸುವುದಿಲ್ಲ ಎಂದು ಪ್ರಧಾನಿ ಮೋದೀಜಿಯವರು ಸಂಕಲ್ಪ ಮಾಡಿದ್ದು, ಗ್ರಾಮೀಣ ಜನರ ಅನುಕೂಲಗಳಿಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ವಿಶೇಷವಾಗಿ ಗ್ರಾಮೀಣರು ತಾವಿರುವಲ್ಲಿಯೇ ಉದ್ಯೋಗ ಮಾಡಲಿಚ್ಚಿಸುವ ಗ್ರಾಮೀಣ ನಿರುದ್ಯೋಗಿಗಳಿಗೆ ನರೇಗಾ ಯೋಜನೆಯಡಿ ತಕ್ಷಣವೇ ಉದ್ಯೋಗಾವಕಾಶ ದೊರೆಯಲಿದೆ. ಕೇಂದ್ರವು ರಾಜ್ಯಕ್ಕೆ 13ಕೋಟಿ ಮಾನವದಿನಗಳ ಗುರಿ ನೀಡಿತ್ತು. ಈ ಗುರಿ ಅತ್ಯಲ್ಪ ಅವಧಿಯಲ್ಲಿ ಮುಗಿದ ಕಾರಣ ಪುನಃ 2 ಕೋಟಿ ಮಾನವ ದಿನಗಳನ್ನು ನೀಡಿದೆಯಲ್ಲದೇ ಹೆಚ್ಚುವರಿಯಾಗಿ 800 ಕೋಟಿ ರೂ.ಗಳನ್ನು ನೀಡಿ ಪ್ರೋತ್ಸಾಹಿಸಿದೆ ಎಂದರು.
ಪ್ರಸ್ತುತ ನಿರ್ಮಿಸಿ, ಉದ್ಘಾಟಿಸಲಾಗಿರುವ ಕಟ್ಟಡ ಸಾರ್ವಜನಿಕ ಅನುಕೂಲಗಳಿಗೆ ಉಪಯೋಗವಾಗಲಿ ಎಂದು ಆಶಿಸಿದ ಅವರು, ಸ್ಥಳೀಯ ಶಾಲೆಯ ಆವರಣಕ್ಕೆ ಬೇಲಿ ಹಾಗೂ ಆಟದ ಮೈದಾನ ಅಭಿವೃದ್ಧಿ ಅಗತ್ಯ ನೆರವು ಒದಗಿಸಲಾಗುವುದು. ಅಲ್ಲದೇ ಗ್ರಾಮ ಪಂಚಾಯಿತಿಯ ಅಗತ್ಯಗಳಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದರು.
ಜಿಲ್ಲೆಯ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೇಂದ್ರದ ಮತ್ತು ರಾಜ್ಯದ ಆರ್ಥಿಕ ನೆರವಿನೊಂದಿಗೆ ಅತ್ಯಾಧುನಿಕ ರೀತಿಯ ಕ್ರೀಡಾಸಂಕೀರ್ಣವನ್ನು ನಗರದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಕೀರ್ಣ ನಿರ್ಮಿಸುವಲ್ಲಿ ಇರುವ ಅಡತಡೆಗಳನ್ನು ಇತ್ಯರ್ಥಪಡಿಸಿ, ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದ ಅವರು, ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಳ್ಳುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ತಳವಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಸೇರಿದಂತೆ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಪ್ರೇಮಾ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post