ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬ ಲೇಖಕರ ಸಾಹಿತ್ಯ ಕೃಷಿಯು ನಿರಂತರವಾಗಿಬೇಕು. ಹೊಸ ಲೇಖಕರು ಹೆಚ್ಚು ಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು. ಹೊಸ ಲೇಖಕರಿಗೆ ಎಲ್ಲ ಓದುಗರ ಪ್ರೋತ್ಸಾಹ ಅತ್ಯಂತ ಅವಶ್ಯಕ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ವಾಗೀಶ ಆರಾಧ್ಯಮಠ ಅವರ ಮೊದಲ ಕೃತಿ “ಪಂಜರವ ತೆರೆದುಬಿಡಿ” ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಣಿತ ಶಿಕ್ಷಕರು ಸಾಹಿತ್ಯ ಕೃಷಿ ಮಾಡುವುದು ಅಪರೂಪ. ಗಣಿತ ಶಿಕ್ಷಕರಾಗಿರುವ ವಾಗೀಶ್ ಅವರು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಜತೆಯಲ್ಲಿ ಕವನ ಸಂಕಲನ ರಚಿಸಿರುವುದು ಅತ್ಯಂತ ಅಭಿನಂದನೀಯ ಸಂಗತಿ. ಸಾಹಿತ್ಯ ಕೆಲಸ ಇನ್ನೂ ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಹೆಚ್ಚು ಕೃತಿಗಳನ್ನು ರಚಿಸಬೇಕು ಎಂದು ಆಶಿಸಿದರು.
Also read: ಬೈಕ್ ಅಪಘಾತ: ಸವಾರ ಸಾವು
ಕುವೆಂಪು ವಿಶ್ವವಿದ್ಯಾಲಯ Kuvempu University ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ದೇವರು ಲೇಖಕ ವಾಗೀಶ ಅವರಿಗೆ ಸಾಹಿತ್ಯ ರಚನಾ ಶಕ್ತಿ ನೀಡಿದ್ದು, ಉತ್ತಮ ಕವನ ಸಂಕಲನ ರಚಿಸಿದ್ದಾರೆ ಎಂದು ಹೇಳಿದರು.
ಕುವೆಂಪು ಅವರ ಆಲೋಚನೆಗಳು ಬಹುತೇಖ ಲೇಖಕರಿಗೆ ಸ್ಫೂರ್ತಿ. ಹೊಸ ಬರಹಗಾರರನ್ನು ಸೃಷ್ಠಿಸುವ ಶಕ್ತಿ ನಮ್ಮ ಕನ್ನಡದ ಲೇಖಕರು ಹಾಗೂ ಶರಣ ಬರಹಗಾರರಿಗೆ ಇತ್ತು. ಅವರ ಸಾಹಿತ್ಯ ಕೃಷಿ ಅಧ್ಯಯನ ನಡೆಸಿದ ಅನೇಕರು ಬರಹಗಾರರಾಗಿದ್ದಾರೆ. ಉತ್ತಮ ಸಾಹಿತ್ಯ ಕೃಷಿ ರಚನೆಯಲ್ಲಿ ಹೊಸ ಲೇಖಕರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಲೇಖಕ ವಾಗೀಶ ಆರಾಧ್ಯಮಠ ಮಾತನಾಡಿ, ಇದು ಮನಸ್ಸಿಗೆ ತೋಚಿದ ಗೀಚುಗಳ ಸಂಗ್ರಹ ಆಗಿದ್ದು, ಪಿಯು ಹಂತದಿಂದಲೂ ಹನಿಗವನ, ಕಥೆ, ಕವನ ರಚಿಸಲು ಆರಂಭಿಸಿದೆ. ಆದರೆ ಎಲ್ಲಿಯೂ ಪ್ರಕಟಿಸಿರಲಿಲ್ಲ. ನನ್ನ ತಂದೆ ಕೃತಿ ಪ್ರಕಟಿಸಲು ಪ್ರೋತ್ಸಾಹಿಸಿದರು. ತಂದೆಯ ಪ್ರೋತ್ಸಾಹ ನುಡಿಗಳೇ ನನ್ನ ಮೊದಲ ಕವನ ಸಂಕಲನ ಪ್ರಕಟಣೆಗೆ ಕಾರಣ. ನನ್ನ ಸಾಹಿತ್ಯ ಬರವಣಿಗೆಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ಚನ್ನೇಶ ಹೊನ್ನಾಳಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಹಾ.ಮ.ನಾಗಾರ್ಜುನ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ.ಸಿದ್ದಬಸಪ್ಪ, ವಿ.ಎಂ.ಆರಾಧ್ಯಮಠ, ಹಸನ್ ಬೆಳ್ಳಿಗನೂಡು, ಚನ್ನಬಸಪ್ಪ ನ್ಯಾಮತಿ, ವೈ.ಎಂ.ಧರ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post