ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಪಾಕರ್ಮವು ಶ್ರಾವಣಮಾಸದಲ್ಲಿ ಆಚರಿಸಲ್ಪಡುವ ಮುಖ್ಯತಮವಾದ ಒಂದು ಪರ್ವ. ವೇದಾಧ್ಯಯನಕ್ಕೆ ಸಂಬಂಧಪಟ್ಟ ಪ್ರಶಸ್ತವಾದ ಮಂಗಲಕರ್ಮವಾಗಿದೆ. ಕೆಲವು ಮಹರ್ಷಿಗಳು ಇದನ್ನು ಅಷ್ಟಾದಶ (18) ಮಹಾ ಸಂಸ್ಕಾರಗಳಲ್ಲಿ ಒಂದನ್ನಾಗಿ ಪರಿಗಣಿಸುತ್ತಾರೆ.
ನಮ್ಮ ದೇಶದಲ್ಲಿ ಅತ್ಯಂತ ಪ್ರಶಸ್ತವಾದ ಪರ್ವಗಳು ನಾಲ್ಕು. ಅವು ಶ್ರಾವಣೀ-ಉಪಾಕರ್ಮ, ದಶಹರಾ (ನವರಾತ್ರಿ, ವಿಜಯದಶಮಿ), ದೀವಾಲೀ – (ದೀಪಾವಳಿ) ಮತ್ತು ಹೋಲಿ – ಇವು ಎಲ್ಲರಿಗೂ ಮುಖ್ಯವಾಗಿದ್ದರೂ ಕ್ರಮವಾಗಿ ಆ ನಾಲ್ಕೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣದವರಿಗೆ ವಿಶೇಷವಾಗಿ ಮುಖ್ಯವಾಗಿವೆ.
ಸಂಸ್ಕಾರಪೂರ್ವಕವಾಗಿ ವೇದಗಳನ್ನು ಗ್ರಹಿಸುವ ಮತ್ತು ಪ್ರಾರಂಭಿಸುವ ಕರ್ಮವಾದ್ದರಿಂದ ಇದಕ್ಕೆ ಉಪಾಕರ್ಮ, ಅಧ್ಯಾಯೋಪಾಕರ್ಮ, ಉಪಾಕರಣ, ವೇದ ಸ್ವೀಕಾರ, ವೇದಾರಂಭಣ ಎಂಬ ಹೆಸರುಗಳೂ ಸಲ್ಲುತ್ತದೆ. ಶ್ರಾವಣ ಮಾಸದಲ್ಲಿ ಬರುವ ಮುಖ್ಯವಾದ ಪರ್ವವಾದ್ದರಿಂದ ಶ್ರಾವಣೀ ಎಂಬ ಹೆಸರೂ ಉಚಿತವಾಗಿದೆ. ತಮಿಳುನಾಡಿನವರು ಆವಣಿ ಅವಿಟ್ಟಂ ಎಂದು ಹೆಸರಿಸುತ್ತಾರೆ. ಕನ್ನಡನಾಡಿನಲ್ಲಿ ಉಪಾಕರ್ಮ ಎಂಬ ಶಾಸ್ತ್ರೀಯವಾದ ನಾಮಧೇಯದಿಂದ ಸಂಪ್ರದಾಯವನ್ನು ಬಲ್ಲವರು ಕರೆಯುತ್ತಾರೆ. ಅದನ್ನು ಅರಿಯದವರು ಜನಿವಾರದ ಹಬ್ಬ ಎಂದು ವ್ಯವಹರಿಸುತ್ತಾರೆ.
ಎಲ್ಲಾ ವೇದ ಶಾಖೆಗಳಿಗೆ ಸೇರಿದವರು ಈ ಪರ್ವವನ್ನು ಆಚರಿಸಬೇಕು. ಉಪನಯನ ಸಂಸ್ಕಾರ ಯಾರಿಗೆ ಆಗಿದೆಯೋ ಅವರೆಲ್ಲರೂ ಇದಕ್ಕೆ ಅಧಿಕಾರಿಗಳು, ಯಾರಿಗೆ ಉಪನಯನ ಸಂಸ್ಕಾರ ಇಲ್ಲವೋ ಅಂತಹವರು ಕೂಡ ವೇದಪುರುಷನಿಗೆ ಪ್ರಿಯವಾದ ಆ ದಿವಸದಲ್ಲಿ ವಿಶೇಷವಾಗಿ ಭಗವಂತನ ಧ್ಯಾನ ಪೂಜೆಗಳನ್ನು ಮಾಡಬೇಕು. ತಂದೆ ಅಥವಾ ತಾಯಿ ಮೃತರಾಗಿದ್ದರೆ ಅವನಿಗೆ ಆ ವರ್ಷ ಉಪಾಕರ್ಮವಿಲ್ಲ. ಅಥವಾ ಮೃತಶೌಚ ದೋಷದಲ್ಲಿರುವಾಗ ಉಪಾಕರ್ಮ ಮಾಡಬಾರದು. ಮಲಮಾಸದಲ್ಲಿ ಉಪಾಕರ್ಮವನ್ನು ಮಾಡುವುದು ಶುಭಕರವಲ್ಲ.
ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳಿಗೆ ಕ್ರಮವಾಗಿ ಬೃಹಸ್ಪತಿ. ಶುಕ್ರ, ಮಂಗಳ ಮತ್ತು ಬುಧ ಇವರು ಅಧಿಪತಿಗಳು. ಆಯಾ ಗ್ರಹಗಳಿಗೆ ಶಕ್ತಿ ಇರುವ ಸಮಯದಲ್ಲಿಯೇ ಆಯಾ ಶಾಖೆಯವರು ಉಪಾಕರ್ಮವನ್ನು ಮಾಡಿಕೊಳ್ಳುವುದು ಶುಭಕರ.
ಉಪಾಕರ್ಮಕ್ಕೆ ಶ್ರಾವಣ, ಭಾದ್ರಪದ ಅಥವಾ ಆಷಾಢಮಾಸವನ್ನೂ ಪೌರ್ಣಮಿ ಮತ್ತು ಪಂಚಮಿ ತಿಥಿಗಳನ್ನೂ, ಶ್ರವಣ ಮತ್ತು ಹಸ್ತಾ ನಕ್ಷತ್ರಗಳನ್ನೂ, ಪ್ರಶಸ್ತವೆಂದು ಹೇಳಲಾಗುತ್ತದೆ. ಮಳೆಯಿಂದ ಹೊಸ ಔಷಧಿಗಳು ಹುಟ್ಟಿರುವ ಸಮಯವು ಉಪಾಕರ್ಮಕ್ಕೆ ಪ್ರಶಸ್ತ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
ಉಪನಯನದ ಅನಂತರ ಬರುವ ಮೊದಲನೇ ಉಪಾಕರ್ಮಕ್ಕೆ ಪ್ರಥಮೋಪಾಕರ್ಮ ಎಂದು ಹೆಸರು. ಆ ಪ್ರಥಮೋಪಾಕರ್ಮ ಮಾಡಿಕೊಂಡ ನಂತರವೇ ಬ್ರಹ್ಮಚಾರಿಗೆ ಬ್ರಹ್ಮಯಜ್ಞ ಮಾಡುವ ಅಧಿಕಾರ ಉಂಟಾಗುತ್ತದೆ. ವೇದಾಧ್ಯಯನದ ಅಭ್ಯುದಯಕ್ಕೆ ಕಾರಣವಾದ ಹೊಸತನ ಉಂಟಾಗಿ, ಅಧ್ಯಯನ ಪುನರ್ನವೀಕೃತವಾಗುತ್ತದೆ.
ವೇದಗಳ ಮತ್ತು ಶಾಸ್ತ್ರಗಳ ಅಧ್ಯಯನವು ಋಷಿಗಳ ಕಾಲದಲ್ಲಿ ವೇದ ಮತ್ತು ಶಾಸ್ತ್ರ ಎಂಬ ಉಭಯ ಸರಸ್ವತಿಗಳಿಗೂ ತೃಪ್ತಿಯಾಗುವಂತೆ ನಡೆಯುತ್ತಿತ್ತು. ನಮ್ಮ ವೇದ ಮತ್ತು ಸಂಸ್ಕತ ಪಾಠಶಾಲೆಗಳಲ್ಲಿ ಈ ಬಗ್ಗೆ ತುಂಬಾ ಅಪಚಾರವಾಗಿದೆ. ಅವುಗಳಲ್ಲಿ ಒಂದು ಮುಖ್ಯ ಉಪಚಾರ ವೇದಶಾಸ್ತ್ರಗಳ ಪಾಠ್ಯಕ್ರಮ ಮತ್ತು ಕಾಲಾವಧಿಗಳಿಗೆ ಸಂಬಂಧಪಟ್ಟಿದ್ದು ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ ಎಂಬ ಆರು ಶಾಸ್ತ್ರಗಳು ವೇದಾಂಗ ಎನಿಸುತ್ತದೆ. ಇದಲ್ಲದೆ ತರ್ಕ, ಮೀಮಾಂಸಾ, ಸಾಂಖ್ಯಯೋಗ ಮುಂತಾದ ಶಾಸ್ತ್ರಗಳು, ಇತಿಹಾಸ, ಪುರಾಣಗಳು ವೇದಾರ್ಥಗಳನ್ನು ವಿವರಿಸುವುದಕ್ಕೂ ವೇದಗಳನ್ನು ಸಂರಕ್ಷಿಸುವುದಕ್ಕೂ ಮಹರ್ಷಿಗಳಿಂದ ಉಪದೇಶಿಸಲ್ಪಟ್ಟವು. ಆದರೆ ನಮ್ಮ ವೇದ ಸಂಸ್ಕತ ಪಾಠಶಾಲೆಗಳಲ್ಲಿ ಅಂಗಿಯಾದ ವೇದಗಳೂ ಅದಕ್ಕೆ ಅಂಗವೂ ಪೋಷಕವೂ ಆಗಿರುವ ಶಾಸ್ತ್ರಗಳು ಏಕದೇಹದಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಪಠ್ಯಕ್ರಮವೂ ಯೋಜಿತವಾಗಿಬಿಟ್ಟಿವೆ.
ತರ್ಕ, ವ್ಯಾಕರಣಾದಿಗಳನ್ನು ಅಧ್ಯಯನ ಮಾಡಿ ಪರಿಣತಿಯ ಪದವಿಯನ್ನು ಪಡೆದ ವಿದ್ವಾಂಸನಿಗೆ ವೇದದ ಗಂಧವೂ ಇರಬೇಕಾಗಿಲ್ಲ. ವೇದಪಂಡಿತರಿಗೆ ವ್ಯಾಕರಣಾದಿ ಶಾಸ್ತ್ರಗಳ ಪರಿಚಯ ಇರಬೇಕಾಗಿಲ್ಲ. ತರ್ಕಾದಿ ಪಂಡಿತರು ವೇದಾಧ್ಯಯನ ಮಾಡಿದವರನ್ನು, ವೇದಭ್ಯಾಸ ಜಡ ಎಂದು ಜರಿಯುವುದೂ, ವೇದ ಪಂಡಿತರು ಅವರನ್ನು ಅಶ್ರೋತ್ರೀಯ ಅವೈದಿಕ ಎಂದು ಹಳಿಯುವುದೂ ಪದ್ಧತಿಯಾಗಿಬಿಟ್ಟಿದೆ. ಅಂಗಿ, ಅಂಗ ಮತ್ತು ಅಂಗರಕ್ಷಕರು ಪರಸ್ಪರ ಅಪರಿಚಿತರಾಗಬೇಕು. ಪರಿಚಿತವಾಗಿದ್ದರೂ ಒಬ್ಬರನ್ನೊಬ್ಬರೂ ತಿರಸ್ಕರಿಸಬೇಕು. ಇಂತಹ ಅವೈಜ್ಞಾನಿಕವಾದ ಪಾಠಕ್ರಮ ಈಗ ನಡೆಯುತ್ತಿದೆ. ಋಷಿಗಳ ಪೂಜೆ, ತರ್ಪಣ, ಅವರನ್ನು ಕುರಿತಾದ ಹೋಮ, ಹೊಸ ಯಜ್ಞೋಪವೀತ ಧಾರಣೆ, ವೇದದ ಆದಿಭಾಗದ ಅಧ್ಯಯನ ಇವು ಉಪಾಕರ್ಮದ ಪ್ರಧಾನ ಕರ್ಮಾಂಗವಾಗಿವೆ.
ಬೇರೆ ಬೇರೆ ವೇದಶಾಖೆಗಳಿಗೂ ಮತ್ತು ಸೂತ್ರಗಳಿಗೂ ಅನುಗುಣವಾಗಿ ಈ ಕರ್ಮಗಳ ಪ್ರಯೋಗದಲ್ಲಿ ಅನೇಕ ಸಾಮ್ಯ ವೈಷಮ್ಯಗಳನ್ನು ಕಾಣುತ್ತೇವೆ.
ವೇದದ ದೇವತೆಗಳನ್ನು ಋಷಿಗಳನ್ನು ಪೂಜಿಸಿ, ಅವರು ಅನುಗ್ರಹದಿಂದ ಪ್ರಕೃತಿಯ ಜಾಡ್ಯವು ತೊಲಗಿ ಹೊಸತನ ಉಾಂಗುತ್ತದೆ. ತರ್ಪಣವೆಂದರೆ ದೇವತೆಗಳಿಗೆ ಮತ್ತು ಋಷಿಗಳಿಗೆ ಸಂತೃಪ್ತಿ ಉಾಂಗಲೆಂದು ಕೃತಜ್ಞತೆಯಿಂದ ಅವರಿಗೆ ಅರ್ಪಿಸುವ ಒಂದು ಸೇವೆ.
ದಾನಕ್ಕೆ ಯೋಗ್ಯವಾದ ಅನೇಕ ಶ್ರೇಷ್ಠ ದ್ರವ್ಯಗಳಲ್ಲಿ ಒಂದಾದ ಯಜ್ಞೋಪವೀತವನ್ನು ದಾನಮಾಡುವುದು ವಿಶೇಷ. ಶ್ರಾವಣ ಕೃಷ್ಣ ಪ್ರಥಮದಂದು ವಿಶೇಷವಾಗಿ ಗಾಯಿತ್ರಿ ಜಪವನ್ನು ಮಾಡುತ್ತಾರೆ. ಇದನ್ನು ಗಾಯತ್ರಿ ಹಬ್ಬ ಎಂದು ಕರೆಯುತ್ತಾರೆ.
ಪಿತೃದೀಕ್ಷೆ ಮುಂತಾದ ಕಾರಣದಿಂದ ಯಾರು ಆ ವರ್ಷದಲ್ಲಿ ಉಪಾಕರ್ಮ ಮಾಡಿಕೊಳ್ಳುವುದಿಲ್ಲವೋ ಅವರೂ ಕೂಡ ಶ್ರಾವಣಕೃಷ್ಣ ಪ್ರಥಮದಂದು ಗಾಯತ್ರಿಯ ಜಪ ಅಥವಾ ಹೋಮವನ್ನು ಮಾಡಲೇಬೇಕು. ಹೀಗೆ ಗಾಯತ್ರಿಯು ಉಪಾಕರ್ಮದ ಅಂಗವಲ್ಲದಿದ್ದರೂ ವೇದದ ಅಧ್ಯಯನಕ್ಕೆ ಸಂಬಂಧಪಟ್ಟ ಅತ್ಯಂತ ಮುಖ್ಯವಾದ ಕರ್ಮ. ಮಿಥ್ಯಾಧ್ಯಯನ ಎಂಬ ದೋಷಕ್ಕೆ ಪ್ರಾಯಶ್ಚಿತ್ತ ರೂಪವಾದ ಕರ್ಮ, ಉದ್ದಿಷ್ಟವಾದ ಫಲವನ್ನು ಕೊಡದೆ ಅನಿಷ್ಟವಾದ ಫಲವನ್ನು ಕೊಡುವ ಅಧ್ಯಯನ.
ಯಾವುದನ್ನು ಅಧ್ಯಯನ ಮಾಡಬಾರದೋ ಅದನ್ನು ಅಧ್ಯಯನ ಮಾಡಿದರೆ ಅಥವಾ ಅಧ್ಯಯನ ಮಾಡಬೇಕಾದ್ದನ್ನು ಅಶಾಸ್ತ್ರೀಯವಾಗಿ ಅಧ್ಯಯನ ಮಾಡಿದರೆ ಅದು ಸುಳ್ಳು ಅಥವಾ ಮಿಥ್ಯಾಧ್ಯಯನ. ಇದು ವೇದಮಾತೆಗೆ ಅಪಚಾರ. ಈ ದೋಷ ಪರಿಹಾರಾರ್ಥವಾಗಿ ಅಂದು ವಿಶೇಷವಾಗಿ ಗಾಯತ್ರಿ ಜಪ, ಹೋಮಾದಿಗಳನ್ನು ಶ್ರದ್ಧೆ ಉತ್ಸಾಹ ಹಾಗೂ ಏಕಾಗ್ರತೆಯಿಂದ ಮಾಡಿ ಮಾರನೇ ದಿನ ಯಥಾಶಕ್ತಿ ಸತ್ಯವಾದ ಅಧ್ಯಯನ ಮಾಡಬೇಕು.
Get In Touch With Us info@kalpa.news Whatsapp: 9481252093
Discussion about this post