ಕಲ್ಪ ಮೀಡಿಯಾ ಹೌಸ್ | ಸೊರಬ |
ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ಸೌಲಭ್ಯ ನೀಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ #DKShivakumar ಹೇಳಿರುವುದನ್ನು ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ಮಂಗಳವಾರ ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
Also Read>> 38 ಕಾಲೇಜು, 800ಕ್ಕೂ ಹೆಚ್ಚು ವಿದ್ಯಾರ್ಥಿಗಳು | JNNE ಕಾಲೇಜಿನಲ್ಲಿ ಮನಸೂರೆಗೊಂಡ ಉತ್ಥಾನ-2025
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವತ್ತೂ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ಪರವಿಲ್ಲ. ಇದಕ್ಕೆ ಇತಿಹಾಸದ ಪುಟದಲ್ಲಿ ಸಾಕಷ್ಟು ನಿದರ್ಶನಗಳಿವೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ಗೌರವವಿದ್ದರೆ ಕೂಡಲೇ ರಾಜೀನಾಮೆ ನೀಡಿ, ಜನತೆಗೆ ಕ್ಷಮೆಯಾಚಿಸಬೇಕು ಎಂದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿ, ಜೈಭೀಮ್ ಎನ್ನುವ ಕಾಂಗ್ರೆಸ್ನವರ ಮುಖವಾಡ ಕಳಚಿ ಬಿದ್ದಿದೆ. ದೇಶ ವಿರೋಧಿ ಶಕ್ತಿಗಳ ಜೊತೆ ಸೇರಿ ದೇಶದಲ್ಲಿ ಅಭದ್ರತೆ ಸೃಷ್ಟಿಸುತ್ತಿದೆ. ನಾವು ಏನೋ ಒಂದು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂವಿಧಾನವನ್ನೇ ಕಿತ್ತು ಹಾಕುತ್ತೇವೆ ಎಂಬ ಅರ್ಥದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಿಂದೆ ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಪಾಕಿಸ್ಥಾನವನ್ನು ಸೃಷ್ಠಿಸಿತು. ಪ್ರಸ್ತುತ ಊರೊಳಗೆ ತಾರತಮ್ಯದ ವಿಷಬೀಜ ಬಿತ್ತುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಈಶ್ವರ ಚನ್ನಪಟ್ಟಣ ಮಾತನಾಡಿ, ಸಂವಿಧಾನಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಸ್ಲಿಂ ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಡಿ.ಕೆ. ಶಿವಕುಮಾರ್ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಅಹಮ್ಮಿಕೆಯ ಮಾತನಾಡಿರುವುದು ದುರಾದೃಷ್ಟಕರ. ಇದಲ್ಲದೇ ವಿಶ್ವವಿದ್ಯಾಲಯಗಳು ಅಧೋಗತಿಗೆ ತಲುಪುವಂತಾಗಿದೆ. ರಾಷ್ಟ್ರೀಯತೆಯ ಕುರಿತು ಧ್ವನಿ ಎತ್ತಿದ ಶಾಸಕರನ್ನು ಅಮಾನತು ಮಾಡಲಾಗಿದೆ. ಸಂಪೂರ್ಣವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಸಾಗರ ಪ್ರಭಾರಿ ವಿನಯ್ ಶೇರ್ವಿ, ಶಿವಕುಮಾರ ಕಡಸೂರು, ರಾಜು ಮಾವಿನಬಳ್ಳಿಕೊಪ್ಪ, ಮಲ್ಲಿಕಾರ್ಜುನ ದ್ವಾರಹಳ್ಳಿ, ಪಾಣಿ ರಾಜಪ್ಪ, ಜಾನಕಪ್ಪ ಒಡೆಯರ್, ಎಂ.ಕೆ. ಯೋಗೇಶ್, ಮೋಹನ್ ಹಿರೇಶಕುನ, ವಿನಾಯಕ ತವನಂದಿ, ಆಶೀಕ್ ನಾಗಪ್ಪ, ಹರೀಶ್, ಪ್ರಭು ಪಿ. ಅರಳೇಶ್ವರದ ಭಾರಂಗಿ, ವೈ.ಜಿ. ಗುರುಮೂರ್ತಿ, ಅರುಣ್ ಪುಟ್ಟನಹಳ್ಳಿ, ಸುರೇಶ್ ಉದ್ರಿ, ಸುಧೀರ್ ಪೈ, ತಿಪ್ಪಣ್ಣ, ಸಂದೀಪ್ ಗೌಡ, ಪರಶುರಾಮ ಚಿಕ್ಕಶಕುನ, ಚಂದ್ರಪ್ಪ ಗಂಗೊಳ್ಳಿ, ಸಂದೀಪ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post