ಕಲ್ಪ ಮೀಡಿಯಾ ಹೌಸ್
ಸೊರಬ: ಭಾರತೀಯರ ಶತಮಾನಗಳ ಕನಸಾದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಜರುಗುತ್ತಿದ್ದು, ಮಂದಿರ ನಿರ್ಮಾಣವು ಸಾಂಗವಾಗಿ ಪೂರ್ಣಗೊಳ್ಳಲು ಪ್ರತಿಯೊಬ್ಬರು ಮನವನ್ನು ಸಹ ಸಮರ್ಪಿಸಬೇಕು ಎಂದು ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಮಹೇಶ್ ಖಾರ್ವಿ ಕರೆ ನೀಡಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ಸಂಜಯ್ ನಗರದಲ್ಲಿ ಭಾನುವಾರ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಶ್ರೀರಾಮ ನಾಮ ಸ್ತೋತ್ರ ಜಪಿಸಿ ಮನ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾಗಿದೆ. ಮಂದಿರ ನಿರ್ಮಾಣಕ್ಕೆ ಶತ ಕೋಟಿ ಭಾರತೀಯರು ನಿಧಿ ಸಮರ್ಪಿಸಿದ್ದಾರೆ. ಇದೀಗ ಮಂದಿರ ನಿರ್ಮಾಣವು ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ನಿತ್ಯ ಮನೆಗಳಲ್ಲಿ ಶ್ರೀರಾಮ ಸ್ತೋತ್ರವನ್ನು ಜಪಿಸುವ ಮೂಲಕ ಶ್ರೀರಾಮನಲ್ಲಿ ಮನವನ್ನು ಸಹ ಅರ್ಪಿತಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಭಾರತದ ಸಾರ್ವಭೌಮತೆಯ ಸಂಕೇತವನ್ನು ಮರು ಸ್ಥಾಪಿಸುವ ಹೊತ್ತಲ್ಲಿ ಇಡಿ ದೇಶ ರಾಮನ ಆರಾಧನೆಯಲ್ಲಿ ತಲ್ಲೀನಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದೆ. ಶ್ರೀರಾಮ ಜಯರಾಮ ಜಯಜಯ ರಾಮ ಎಂದು ನಿತ್ಯ ಮನೆಗಳಲ್ಲಿ ಪಠಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಸಮರ್ಪಿಸಬೇಕಿದೆ ಎಂದು ತಿಳಿಸಿದರು.
ಸಂಜಯನಗರದ ಸುಮಾರು 90 ಮನೆಗಳಿಗೆ ಭೇಟಿ ನೀಡಿ, ಶ್ರೀರಾಮನ ಸ್ತೋತ್ರವಿರುವ ಭಾವಚಿತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಯುವಾ ಬ್ರಿಗೇಡ್ ನಿಕಟಪೂರ್ವ ತಾಲೂಕು ಸಂಚಾಲಕ ವಿಷ್ಣು ಮೆಸ್ತಾ, ಮಂಜು, ವಿನೋದ್ ವಾಲ್ಮೀಕಿ, ಅನಿಲ್ ಮಾಳವಾದೆ, ಕೃಷ್ಣ ಮೊಗವೀರ್, ವಿನಂತ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post