ಸೊರಬ: ಸೊರಬ ಹಾಗೂ ಸಾಗರ ತಾಲೂಕಿನ ಕೆಲವು ರೈತರು ಬ್ಯಾಡಗಿ ಸೇರಿದಂತೆ ಇನ್ನಿತರೆ ಕೋಲ್ಡ್ ಸ್ಟೋರೇಜ್ಗಳಲ್ಲಿ ಶೇಖರಿಸಿಟ್ಟ ಶುಂಠಿ ಮೇಲೆ ಸಾಗರ ಎಸ್ಬಿಐ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಸಕಾಲದಲ್ಲಿ ಸಾಲ ಮರುಪಾವತಿಸಿಲ್ಲ ಎಂದು ಬ್ಯಾಂಕಿನವರು ಕಾಲಾವಕಾಶ ನೀಡದೆ ರೈತರಿಗೆ ಹರಾಜು ನೋಟೀಸ್ ನೀಡಿದನ್ನು ಖಂಡಿಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಜಯಪ್ಪಗೌಡ ಹಿರೇಕಸವಿ ಆಕ್ರೋಶ ವ್ಯಕ್ತಪಡಿಸಿದರು.
ಸೊರಬ ಹಾಗೂ ಸಾಗರ ರೈತರಿಗೆ ಸಾಗರದ ಎಸ್ಬಿಐ ಬ್ಯಾಂಕಿನ ಅಧಿಕಾರಿಗಳು ಶುಂಠಿ ಹರಾಜಿಗೆ ನೋಟೀಸ್ ನೀಡಿರುವುದನ್ನು ಖಂಡಿಸಿ, ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.
ಸೊರಬ ರೈತರಾದ ಚಂದ್ರಪ್ಪ ಬರಗಿ, ಜಿ.ಎಂ.ಚಂದ್ರಪ್ಪ ಕೊಡಕಣಿ, ರಾಜು ಕೊರಕೋಡು, ಗಂಗಾಧರ ಶ್ಯಾಡಲಕೊಪ್ಪ, ಸಾಗರ ತಾಲೂಕಿನ ಲಿಂಗಪ್ಪ ಹೊಸೂರು, ಪುಟ್ಟಸ್ವಾಮಿ ಗಿಳಾಲಗುಂಡಿ ಅವರು 2014-15ನೇ ಸಾಲಿನಲ್ಲಿ ಸ್ವಂತ ಖಾತೆಯಲ್ಲಿರುವ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದು ಅದನ್ನು ಸಂಸ್ಕರಿಸಿಡಲು ಎಸ್ಬಿಐ ಶಾಖೆಯಲ್ಲಿ ಬೆಳೆ ಅಡಮಾನ ಮಾಡಿ ಸಾಲ ಪಡೆದಿದ್ದಾರೆ. ಕಳೆದ ಎರಡು ವರ್ಷಗಳ ಬರಗಾಲದಿಂದ ಬೆಳೆ ನಷ್ಟದಿಂದಾಗಿ ರೈತರು ಸದರಿ ಸಾಲ ತೀರಿಸಲಾಗದೆ ಕಂಗಾಲಾಗಿದ್ದು, ಪ್ರಸಕ್ತ ಮಾರುಕಟ್ಟೆಯಲ್ಲಿಯೂ ಸಹ ಶುಂಠಿ ಬೆಳೆ ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬ್ಯಾಂಕಿಗೆ ಸಾಲದ ಹಣವನ್ನು ಮರುಪಾವತಿ ಮಾಡಲು ರೈತರಿಗೆ ಸಾಧ್ಯವಾಗಿಲ್ಲ. ಹೀಗಿದ್ದೂ ರೈತರ ಸಂಕಷ್ಟಗಳನ್ನು ಅರಿಯದೆ ಹಾಗೂ ಕಾಲಾವಕಾಶ ನೀಡದೆ ದಿಢೀರನೆ ಹರಾಜು ಮಾಡಲು ಮುಂದಾಗಿರುವುದನ್ನು ಪ್ರತಿಯೊಂದರಲ್ಲಿ ರೈತರುಗಳ ಹೆಸರುಗಳನ್ನು ಪ್ರಕಟಿಸಿ ಹರಾಜು ದಿನಾಂಕವನ್ನು ನಿಗದಿ ಪಡಿಸಿರುವುದು ಖಂಡನೀಯ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಮುಂಗಾರು ಕೃಷಿ ಚಟುವಟಿಕೆಗಳಿಗಾಗಿ ರೈತರು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯನ್ನು ಅರಿಯದ ಬ್ಯಾಂಕಿನ ಅಧಿಕಾರಿಗಳು ಅಡವಿಟ್ಟ ಶುಂಠಿಯನ್ನು ಹರಾಜು ಮಾಡುವುದಕ್ಕೆ ಮುಂದಾಗಿರುವುದನ್ನು ಕೈಬಿಡಬೇಕು. ರೈತರಿಗೆ ಮುಂದಿನ ಮೂರು ತಿಂಗಳು ಕಾಲಾವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಸಾವಿರಾರು ರೈತರ ಒಡಗೂಡಿ ಬ್ಯಾಂಕಿನ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಹಾಗೂ ಹರಾಜು ಪ್ರಕ್ರಿಯೆಗೆ ತಡೆಯೊಡ್ಡಲಾಗುವುದು ಎಂದು ಎಚ್ಚರಿಸಿದರು.
ಸಾಲ ಪಡೆದ ರೈತ ಚಂದ್ರಪ್ಪ ಬರಗಿ ಮಾತನಾಡಿ, ಬ್ಯಾಂಕಿನಲ್ಲಿ ಪಡೆದ ಸಾಲ ಮರುಪಾವತಿಗೆ ನಮ್ಮಲ್ಲಿ ಯಾವುದೇ ಅಭ್ಯಂತರವಿಲ್ಲ. ರೈತರ ಸಂಕಷ್ಟ
ಅರಿಯದ ಬ್ಯಾಂಕಿನವರು ಕಾಲಾವಕಾಶ ನೀಡದೆ ನೋಟೀಸ್ ನೀಡಿರುವುದರಿಂದ ಮಾನಸಿಕ ನೋವುಂಟಾಗಿದೆ. ಶುಂಠಿ ಬೆಳೆ ತೀವ್ರ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಪರುಪಾವತಿ ಮಾಡಲು ಬ್ಯಾಂಕಿನವರು 3 ತಿಂಗಳು ಕಾಲಾವಕಾಶ ನೀಡಬೇಕು ಎಂದು
ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಹಾಲೇಶಪ್ಪಗೌಡ ಕವಡಿ, ಚಂದ್ರಪ್ಪ ಬರಗಿ, ವಿನಯ್ ಶರ್ವಿ, ಮಲ್ಲಿಕಾರ್ಜುನ್ಗೌಡ, ಸಿ.ಎಸ್.ಕೊಟ್ರೇಶ್ಗೌಡ, ವೈ.ಜಿ.ಗುರುಮೂರ್ತಿ, ಎಸ್. ಹರೀಶ್ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post