ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸರಳ ವಾಕ್ಯವನ್ನು ಬೋಧಿಸಲಾಗಿದ್ದು, ಯಾರು ಧರ್ಮವನ್ನು ರಕ್ಷಿಸುತ್ತಾರೆಯೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ದಸರಾ ಉತ್ಸವ ಕಾರ್ಯಕ್ರಮದ ಏಳನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡಿನ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವಲ್ಲಿ ಹಬ್ಬಹರಿದಿನಗಳು ಮಹತ್ವದ ಪಾತ್ರವಹಿಸಿವೆ ಎಂದು ಇದು ಎಲ್ಲಾ ಧರ್ಮಗಳಿಗೂ ಅನ್ವಯವಾಗುತ್ತದೆ. ಇತ್ತೀಚಿನ ದಿನಗಳ ಧರ್ಮ ಪರಿಪಾಲನೆ ಮತ್ತು ಧಾರ್ಮಿಕ ಆಚಾರ ವಿಚಾರಗಳ ಅನುಸರಿಸದಿರುವುದು ವಿಷಾಧನೀಯ ಸಂಗತಿಯಾಗಿದೆ. ಆದರೆ, ಇಂತಹ ಉತ್ಸವ ಮತ್ತು ಕಾರ್ಯಕ್ರಮಗಳು ಸರ್ವರನ್ನು ಒಗ್ಗೂಡಿಸುವ ವೇದಿಕೆಗಳಾಗಿರುವುದು ಸ್ವಾಗತಾರ್ಹ. ಜೊತೆಗೆ ಯುವ ಕಲಾವಿದರಿಗೆ ಅವಕಾಶವನ್ನು ಒದಗಿಸುತ್ತಾ ಉದಯೋನ್ಮುಖ ಕಲಾವಿದರಾಗಿ ಹೊರಮ್ಮುತ್ತಿದ್ದಾರೆ ಎಂದರು.
ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೆಯೋ ಅಲ್ಲಿ ದೇವತೆಯು ನೆಲೆ ನಿಲ್ಲುತ್ತಾಳೆ ಎನ್ನುವಂತೆ. ಪಟ್ಟಣದಲ್ಲಿ ಮಹಿಳಾ ದಸರಾ ಆಚರಿಸುವ ಮೂಲಕ ನಿತ್ಯ ಮಹಿಳೆಯರಿಗೆ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ ವಿಷಯವಾಗಿದೆ. ಕಲಾವಿದರನ್ನು ಗುರುತಿಸುವುದು ಮತ್ತು ಕಲಾ ಪೋಷಕರ ಕಾರ್ಯ ಶ್ಲಾಘನೀಯವಾಗಿದೆ. ಸಮಿತಿಯ ಪದಾಧಿಕಾರಿಗಳ ನಿರಂತರ ಶ್ರಮದಿಂದ ಕಳೆದ ಆರೇಳು ದಿನದಿಂದ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ವಿಶೇಷಾಗಿ ಈ ಬಾರಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ದಸರಾ ಉತ್ಸವಕ್ಕೆ ಮೆರಗು ತಂದಿದೆ ಎಂದರು.
ವೀರಶೈವ ಲಿಂಗಾಯತ ಸಮಾಜ ಮುಖಂಡ ಹಾಗೂ ಉದ್ಯಮಿ ಹೇಮರಾಜ ಪಾಟೀಲ್ ಮಾತನಾಡಿ, ಪಟ್ಟಣದಲ್ಲಿ ಕಳೆದ 15 ವರ್ಷಗಳಿಂದ ಸಾರ್ವಜನಿಕ ದಸರಾ ಆಚರಿಸುತ್ತಿರುವುದು ಸಂತಸಕರ ವಿಷಯವಾಗಿದೆ. ದಸರಾ ಉತ್ಸವ ಸಮಿತಿಯವರ ಕಾರ್ಯವನ್ನು ಮೆಚ್ಚುವಂತಹದ್ದಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ಮತ್ತು ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸಣ್ಣಬೈಲ್ ಪರಶುರಾಮ್, ದಸರಾ ಕುಸ್ತಿ ಸಮಿತಿ ಅಧ್ಯಕ್ಷ ರಾಮಪ್ಪ ಸಣ್ಣಬೈಲ್, ಗಂಗಾಮತ ಸಮಾಜದ ಅಧ್ಯಕ್ಷ ನಾಗರಾಜ ಎಲೆ, ದುರ್ಗಾಂಬ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ ಸಣ್ಣಬೈಲ್, ಶ್ರೀ ದುರ್ಗಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾಬಲಪ್ಪ, ಉದ್ಯಮಿ ಸಾಹಿದ್, ಪತ್ರಕರ್ತರಾದ ವಿಜಯಗೌಳಿ, ಮಧುರಾಮ್, ನೋಂಪಿ ಶಂಕರ್, ಪ್ರಮುಖರಾದ ಟೋಕಪ್ಪ ಮಂಚಿ, ಮಹೇಶ್ ಖಾರ್ವಿ, ಸುರೇಶ್ ಭಂಡಾರಿ, ರೇವಣಪ್ಪ ಹಿರೇಶಕುನ, ಚಂದ್ರಪ್ಪ ತವನಂದಿ, ಗುರುಮೂರ್ತಿ, ಸಂತೋಷ ಸೊಪ್ಪಿನಕೇರಿ, ಸಂತೋಷ್, ವಿನೋದ್ ವಾಲ್ಮೀಕಿ, ಮಲ್ಲಕಾರ್ಜುನ ಜೆಸಿಬಿ ಸೇರಿದಂತೆ ಇತರರಿದ್ದರು. ಶೃತಿ ಲಕ್ಷ್ಮೀನಾರಾಯಣ ಪ್ರಾರ್ಥಿಸಿ, ದಾನೇಶ್ವರಿ ಸ್ವಾಗತಿಸಿ, ನೆಮ್ಮದಿ ಶ್ರೀಧರ್ ವಂದಿಸಿದರು. ಕೆ.ಎಚ್. ಮಾಲತೇಶ್ ವಂದಿಸಿದರು.ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















